ವಿಶ್ವನಾಥ್ ಹಾಗೂ ಯತ್ನಾಳ್ ಈಗ ಮೌನಿ ಬಾಬಾ ಆಗಿದ್ಯಾಕೆ?: ವಿ.ಎಸ್. ಉಗ್ರಪ್ಪ ಪ್ರಶ್ನೆ
ಮೈಸೂರು, ಆಗಸ್ಟ್ 03: "ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹಾಗೂ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಳೆದ ಒಂದು ವಾರದಿಂದ ಮೌನಿ ಬಾಬಾ ಆಗಿದ್ದೀರಾ ಯಾಕೆ?,'' ಎಂದು ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಉಗ್ರಪ್ಪ, "ಈ ಹಿಂದೆ ರಾಜ್ಯ ಸರ್ಕಾರದ ವಿರುದ್ಧ ಕಿಕ್ಬ್ಯಾಕ್ ಆರೋಪ ಮಾಡಿದಿರಿ, ಯಡಿಯೂರಪ್ಪ ಮತ್ತು ಅವರ ಕುಟುಂಬ ನೂರಾರು ಕೋಟಿ ಕಿಕ್ಬ್ಯಾಕ್ ಆರೋಪ ಇದೆ. ಈ ಬಗ್ಗೆ ನಿವೃತ್ತಿ ಅಧಿಕಾರಿಯೊಬ್ಬರು ಸಾರ್ವಜನಿಕವಾಗಿ ಗಂಭೀರ ಆರೋಪ ಮಾಡಿದ್ದಾರೆ. ಹೀಗಿದ್ದರೂ, ಸಿಬಿಐ, ಇಡಿ, ಐಡಿ, ಪೊಲೀಸ್ ಇಲಾಖೆ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ಎಚ್. ವಿಶ್ವನಾಥ್ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ನಿಮ್ಮ ಉತ್ತರ ಏನು? ಉತ್ತರನ ಪೌರುಷವೇ?,'' ಎಂದು ಟೀಕಿಸಿದ್ದಾರೆ.
"ನಾ ಕಾವುಂಗಾ, ನಾ ಖಾನೆದುಂಗ ಎಂದು ಹೇಳುತ್ತಿರಲ್ಲ ಏನಿದು ಮೋದಿಯವರೇ, ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧದ ಭ್ರಷ್ಟಾಚಾರ ಹಾಗೂ ಕಿಕ್ಬ್ಯಾಕ್ ಆರೋಪ ವಿಚಾರದಲ್ಲಿ ನಿಮ್ಮ ಉತ್ತರವೇನು? ಇದಕ್ಕೆ ಉತ್ತರ ಯಾವಾಗ ಕೊಡುತ್ತಿರಿ? ಭ್ರಷ್ಟಾಚಾರ ಮುಕ್ತ ದೇಶ ಎಲ್ಲಿಗೆ ಹೋಗಿದೆ,'' ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದ ಜನರಿಗೆ ಮಾಡಿದ ಅನ್ಯಾಯ
ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಉಗ್ರಪ್ಪ, "ಕಾಂಗ್ರೆಸ್ ಪಕ್ಷದ್ದು ಲಕೋಟೆ ಸಂಸ್ಕೃತಿ ಎಂದು ಟೀಕಿಸುತ್ತಿದ್ದ ಬಿಜೆಪಿ, ಇದೀಗ ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಮಾಡುತ್ತಿರುವುದಾದರೂ ಏನು? ಸಚಿವ ಸಂಪುಟ ವಿಸ್ತರಣೆ ವೇಳೆ ಮುಖ್ಯಮಂತ್ರಿಗೆ ಸ್ವಾತಂತ್ರ್ಯ ನೀಡದೆ, ಹೈಕಮಾಂಡ್ ಸೂಚಿಸುವವರಿಗೆ ಸ್ಥಾನ ಕಲ್ಪಿಸುವ ಪ್ರಯತ್ನ ನಡೆಯುತ್ತಿದೆ. ಈ ಬೆಳವಣಿಗೆ ಪ್ರಜಾಪ್ರಭುತ್ವ ವ್ಯವಸ್ಥೆಗೆ, ದೇಶದ ಸಂವಿಧಾನಕ್ಕೆ, ರಾಜ್ಯದ ಆರೂವರೆ ಕೋಟಿ ಜನರಿಗೆ ಮಾಡಿದ ಅನ್ಯಾಯವಾಗಿದೆ,'' ಎಂದು ಕೆಪಿಸಿಸಿ ವಕ್ತಾರರೂ ಆಗಿರುವ ವಿ.ಎಸ್. ಉಗ್ರಪ್ಪ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.
ಮೇಕೆದಾಟು ವಿಚಾರವಾಗಿ ಪ್ರತಾಪ ಸಿಂಹಗೆ ತಿರುಗೇಟು ನೀಡಿದ ಕಾಂಗ್ರೆಸ್ ವಕ್ತಾರ
ಮೋದಿಯ ವರ್ಚಸ್ಸು ಕಡಿಮೆ ಆಗುತ್ತಿದೆ
"ಕೇಂದ್ರ ಹಾಗೂ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇದೆ. ಆದರೆ ಇವೆರಡು ಕೂಡ ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿವೆ. ಇದನ್ನು ನಾವು ಹೇಳುತ್ತಿಲ್ಲ, ಬದಲಾಗಿ ಬಿಜೆಪಿ ನಾಯಕರೇ ಹೇಳಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಇದ್ದರೆ ಅನುಕೂಲ ಆಗುತ್ತದೆ ಅಂತಿದ್ದರು, ಹಾಗಿದ್ದರೆ ಇದೇನಾ ಅನುಕೂಲ?, ಇದೇನಾ ಅವರ ಒಳ್ಳೆಯ ಕೆಲಸ ಎಂದು ಪ್ರಶ್ನಿಸಿದ ಉಗ್ರಪ್ಪ, ಈ ಹಿಂದೆ ಎಲ್ಲೆಡೆ ಮೋದಿ ಮೋದಿ ಎನ್ನಲಾಗುತ್ತಿತ್ತು, ಆದರೀಗ ಮೋದಿಯ ಆಫೀಸ್ನಲ್ಲೇ ಮೋದಿಯ ವರ್ಚಸ್ಸು ಕಡಿಮೆ ಆಗುತ್ತಿದೆ,'' ಎಂದು ಟೀಕಿಸಿದರು.
ಕೇಂದ್ರದಿಂದ ಮಲತಾಯಿ ಧೋರಣೆ
ಇನ್ನು ರಾಜ್ಯ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ವಿ.ಎಸ್. ಉಗ್ರಪ್ಪ, "ರಾಜ್ಯದಲ್ಲಿಂದು 11 ಜಿಲ್ಲೆಯಲ್ಲಿ ಪ್ರವಾಹ ಇದೆ. ಪ್ರವಾಹದಿಂದಾಗಿ ಜನರು ಸಂಕಷ್ಟದಲ್ಲಿದ್ದರೂ ಜನರ ರಕ್ಷಣೆ ನಡೆಯುತ್ತಿಲ್ಲ. ಈ ಹಿಂದೆ ಗುಜರಾತ್ನಲ್ಲಿ ಪ್ರವಾಹ ಬಂದರೆ ಪ್ರಧಾನಿಗಳು ವೈಮಾನಿಕ ಸಮೀಕ್ಷೆ ನಡೆಸಿ 1 ಸಾವಿರ ಕೋಟಿ ರೂ. ಪರಿಹಾರ ನೀಡುತ್ತಾರೆ. ಆದರೆ ರಾಜ್ಯದ ವಿಚಾರದಲ್ಲಿ ಏನು ಇಲ್ಲ. 2009ರಲ್ಲಿ ಯಡಿಯೂರಪ್ಪ ಅವರ ಸರ್ಕಾರದ 1.5 ಸಾವಿರ ಕೋಟಿ ಪರಿಹಾರ ಕೊಡಿಸಿದರು. ಆದರೆ ಕರ್ನಾಟಕದ ಈ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಯಾವುದೇ ಪರಿಹಾರ ನೀಡಿಲ್ಲ. ಕೇಂದ್ರ ಸರ್ಕಾರ ಕರ್ನಾಟಕದ ವಿಚಾರಲ್ಲಿ ಮಲತಾಯಿ ದೋರಣೆ ಮಾಡುತ್ತಿದೆ,'' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನರಿಗಿಂತ ಅಧಿಕಾರವೇ ಮುಖ್ಯ
"ಕಳೆದ ಮೂರು ವರ್ಷದ ಪ್ರವಾಹ ಪರಿಸ್ಥಿತಿ ಗಮನಿಸಿದರೆ ಇದು ಏನು ಇಲ್ಲ. ಇಂದು ಮಂತ್ರಿಮಂಡಲ ಇಲ್ಲ, ಆದರೆ ಸಂಸದರು, ಶಾಸಕರು ಇದರ ಬಗ್ಗೆ ಮಾಹಿತಿ ಪಡೆಯಬಹುದಿತ್ತು. ಇವರು ಯಾರು ತಮ್ಮ ಕ್ಷೇತ್ರದಲ್ಲಿ ಇಲ್ಲ. ಇವರು ಬೆಂಗಳೂರು, ದೆಹಲಿಯಲ್ಲಿ ಇದ್ದಾರೆ. ಇವರು ಅಧಿಕಾರ ಪಡಿಯುವ ನಿಟ್ಟಿನಲ್ಲಿ ಇದ್ದಾರೆ ಹೊರತು ಬೇರೇನೂ ಬೇಕಾಗಿಲ್ಲ. ಜನರ ಸಮಸ್ಯೆ ಬೇಕಾಗಿಲ್ಲ. ರಾಜ್ಯದಲ್ಲಿ ಕೊರೊನಾ ಮೂರನೇ ಅಲೆಯ ಬಗ್ಗೆ ಪರಿಣಾಮಕಾರಿಯಾದ ಪೂರ್ವ ಸಿದ್ಧತೆಯನ್ನು ರಾಜ್ಯ ಸರ್ಕಾರ ಮಾಡಿಕೊಂಡಿಲ್ಲ. ದೇಶದಲ್ಲಿ ಕೋವಿಡ್ನಿಂದ ಲಕ್ಷಾಂತರ ಜನರು ಮೃತಪಟ್ಟಿದ್ದಾರೆ, ಅದಕ್ಕೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರವೇ ನೇರ ಹೊಣೆ,'' ಎಂದು ಆರೋಪಿಸಿದರು.
ಸಿಎಂ, ಸಚಿವರಿಗೆ ಶುಭಾಶಯ
"ರಾಜ್ಯದಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆಯಾಗಿ ಒಂದು ವಾರ ಕಳೆದಿದೆ, ಬಸವರಾಜ ಬೊಮ್ಮಯಿ ನನಗೆ ಮೂರ್ನಾಲ್ಕು ದಶಕಗಳ ಸ್ನೇಹಿತ. ಅವರಿಗೆ ನಾನು ಶುಭ ಕೋರುತ್ತೆನೆ. ಮುಂದೆ ಅವರೊಂದಿಗೆ ಮಂತ್ರಿ ಆಗುವವರಿಗೂ ಶುಭ ಕೋರುತ್ತೇನೆ. ಬಸವರಾಜ ಬೊಮ್ಮಾಯಿ ಎರಡನೇ ತಲೆಮಾರಿನ ನಾಯಕರಾಗಿದ್ದು, ಎಸ್.ಆರ್. ಬೊಮ್ಮಯಿ ರಾಯಿಸ್ಟ್ ವಿಚಾರಧಾರೆಯ ಹಿನ್ನೆಲೆ ಹೊಂದಿದವರಾಗಿದ್ದು, ಈ ಬೊಮ್ಮಾಯಿ ಬಿಜೆಪಿಯು ವಿಚಾರಧಾರೆಯ ನಾಯಕರಾಗಿದ್ದಾರೆ. ಆದರೆ ನೀವು ಜನಪರ ಕೆಲಸ ಮಾಡಬೇಕಾದ ಅವಶ್ಯಕತೆ ಇದೆ,'' ಎಂದರು.