'ನಾಳಿನ ಸದನಕ್ಕೆ ನಾನು ಹೋಗುವುದಿಲ್ಲ' : ಬಿಎಸ್ಪಿ ಶಾಸಕ ಎನ್. ಮಹೇಶ್
ಮೈಸೂರು, ಜುಲೈ 21 : ಮೊದಲೇ ಮೈತ್ರಿ ಸರಕಾರದ ಅಳಿವು- ಉಳಿವಿನ ಪಗಡೆಯಾಟ ಒಂದೆಡೆ ನಡೆಯುತ್ತಿದ್ದರೆ, ಜೆಡಿಎಸ್- ಕಾಂಗ್ರೆಸ್ ಗೆ ಬೆಂಬಲ ಸೂಚಿಸಿದ್ದ ಬಿಎಸ್ಪಿ ಶಾಸಕ ಎನ್. ಮಹೇಶ್ ಸೋಮವಾರದಂದು ಸದನಕ್ಕೆ ಹೋಗಲು ಆಗುತ್ತಿಲ್ಲ ಎಂದು ಹೇಳುವ ಮೂಲಕ ದೋಸ್ತಿ ಸರಕಾರಕ್ಕೆ ಆತಂಕ ಹೆಚ್ಚು ಮಾಡಿದ್ದಾರೆ.
ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡುವ ಬೆನ್ನಲ್ಲೇ ಕೊಳ್ಳೇಗಾಲ ಕ್ಷೇತ್ರದ- ಕರ್ನಾಟಕದಲ್ಲಿ ಬಿಎಸ್ ಪಿಯ ಏಕೈಕ ಶಾಸಕ ಎನ್. ಮಹೇಶ್ ಮಾತನಾಡಿ, "ಖಾಸಗಿ ಕೆಲಸಗಳಿಂದಾಗಿ ಕ್ಷೇತ್ರದಲ್ಲಿಯೇ ಇದ್ದು, ಸದನಕ್ಕೆ ಹೋಗಲು ಆಗಿಲ್ಲ. ಸೋಮವಾರದಂದು ವಿಶ್ವಾಸ ಮತ ಯಾಚನೆಗೆ ನಾನು ಹೋಗುವುದಿಲ್ಲ. ಮಾಯಾವತಿ ಅವರು ತಟಸ್ಥವಾಗಿರಲು ಹೇಳಿದ್ದಾರೆ. ನಮ್ಮ ವರಿಷ್ಠರ ಸೂಚನೆ ಮೇರೆಗೆ ನಾಳೆ ಸದನಕ್ಕೆ ಹೋಗುವುದಿಲ್ಲ, ತಟಸ್ಥವಾಗಿರುತ್ತೇನೆ" ಎಂದು ಭಾನುವಾರ ತಿಳಿಸಿದ್ದಾರೆ.
ಹದಿನೈದು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ- ಕಲ್ಲೋಲ ಶುರುವಾಗಿದ್ದು, ಕಾಂಗ್ರೆಸ್ -ಜೆಡಿಎಸ್ ನ ಅತೃಪ್ತ ಶಾಸಕರು ರಾಜೀನಾಮೆ ಸಲ್ಲಿಸಿರುವುದರಿಂದ ಮೈತ್ರಿ ಸರಕಾರ ಪತನದ ಕೌಂಟ್ ಡೌನ್ ಶುರುವಾಗಿದೆ. ಈ ಬೆನ್ನಲ್ಲೇ ಜೆಡಿಎಸ್ ಗೆ ಬೆಂಬಲ ನೀಡಿದ್ದ ಮಹೇಶ್ ಕೂಡ ವಿಶ್ವಾಸ ಮತ ಸಾಬೀತಿನ ದಿನ ಸದನಕ್ಕೆ ಗೈರು ಹಾಜರಾಗಲು ನಿರ್ಧಾರ ಮಾಡಿರುವುದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಒಳ್ಳೆಯ ಸೂಚನೆ ಅಲ್ಲ.