ಮೈವಿವಿ, ಅರಣ್ಯ ಇಲಾಖೆ ರಣಹದ್ದುಗಳ ಸಂರಕ್ಷಣೆ, ಏನಿದು ಯೋಜನೆ?
ಮೈಸೂರು, ಮೇ 16: ಅಳಿವಿನಂಚಿನಲ್ಲಿರುವ ರಣಹದ್ದು ಪ್ರಬೇಧ ಉಳಿವಿಗೆ ಮೈಸೂರು ವಿಶ್ವವಿದ್ಯಾನಿಲಯದ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಅಧ್ಯಯನ ವಿಭಾಗವು ಕರ್ನಾಟಕ ಅರಣ್ಯ ಇಲಾಖೆಯೊಂದಿಗೆ ಹೊಸ ಯೋಜನೆ ಕೈಗೊಂಡಿದೆ.
ಅಳಿವಿನ ಅಂಚಿನಲ್ಲಿರುವ ಪಕ್ಷಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅಪರೂಪದ ರಣಹದ್ದುಗಳು ರಾಮದೇವರ ಬೆಟ್ಟದಲ್ಲಿ ಕಂಡುಬರುತ್ತವೆ. ಇಡೀ ದಕ್ಷಿಣ ಭಾರತದಲ್ಲಿಯೇ ರಣಹದ್ದು ಸಂತತಿಯ ಸಂರಕ್ಷ ಣೆಯ ಏಕೈಕ ತಾಣವೆಂದೇ ಖ್ಯಾತಿಗಳಿಸಿದೆ. ಅರಣ್ಯ ಇಲಾಖೆಯು 856 ಎಕರೆ ವಿಸ್ತಾರ ಹೊಂದಿರುವ ಈ ಪ್ರದೇಶವನ್ನು ರಣಹದ್ದು ವನ್ಯಜೀವಿಧಾಮವನ್ನಾಗಿ ಘೋಷಣೆ ಮಾಡಿದೆ. ಆದರೆ ಅಪರೂಪದ ಉದ್ದ ಕೊಕ್ಕಿನ ರಣಹದ್ದುಗಳ ಸಂತತಿಯು ದಿನೇ ದಿನೆ ಕ್ಷೀಣಿಸುತ್ತಿದೆ.
ರಾಮನಗರದ ರಣಹದ್ದು, ರಾಮ ದೇಗುಲ, ವಾರಾಂತ್ಯದ ಚಾರಣ
ರಾಮದೇವರ ಬೆಟ್ಟ ನಮ್ಮ ದೇಶದ ಏಕೈಕ ಹಾಗೂ ಪ್ರಪ್ರಥಮ ರಣಹದ್ದುಗಳ ಸಂರಕ್ಷಿತ ಪ್ರದೇಶ. ರಾಮ- ಸೀತೆ ಹಾಗೂ ಲಕ್ಷ್ಮಣರು ವನವಾಸದಲ್ಲಿದ್ದಾಗ ಇಲ್ಲಿಯೂ ತಂಗಿದ್ದರಂತೆ. ಈ ಜಾಗದಲ್ಲಿ ಒಂದು ನೀರಿನ ಕೊಳವಿದೆ, ಅದನ್ನು ಸೀತೆಯ ಸ್ನಾನಕ್ಕಾಗಿ ರಾಮನು ತನ್ನ ಬಾಣದಿಂದ ನಿರ್ಮಿಸಿದ ಎಂಬುದು ಸ್ಥಳೀಯರ ನಂಬಿಕೆ.
ಏನಿದು ಯೋಜನೆ?
ಆಹಾರ ಸರಪಳಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ರಣಹದ್ದುಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಶೇ.95ರಷ್ಟು ಇಳಿಕೆಯಾಗಿದೆ. ಭಾರತದಲ್ಲಿ 9 ಜಾತಿಯ ರಣಹದ್ದುಗಳು ಇದ್ದು, ಈಗ ಕೇವಲ 3 ಜಾತಿಯ ರಣಹದ್ದುಗಳು ಮಾತ್ರ ಉಳಿದುಕೊಂಡಿವೆ. ಈ ಮೂರು ಕಳೆಗಳ ಬೇವನ ವಿಧಾನ, ದೇಹ ರಚನ, ವಂಶವಾಹಿ ಬಗ್ಗೆ ಅಧ್ಯಯನ ನಡೆಸಿದರೆ ರಣಹದ್ದು ಗಳ ಸಂತಾನೋತ್ಪತಿಯನ್ನು ಹೆಚ್ಚು ಮಾಡಬಹುದು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ರಣಹದ್ದುಗಳ 'ಡಿಎನ್ಎ ಪ್ರೋಫೈಲಿಂಗ್' ಮಾಡಲು ನಿರ್ಧರಿಸಿದೆ. ಈ ಟೆಸ್ಟ್ ಮೂಲಕ ರಣಹದ್ದುಗಳ ಲಿಂಗವನ್ನು ಬೇಗ ಪತ್ತೆಹಚ್ಚಬಹುದು.
ಮೈವಿವಿ ಒಡಂಬಡಿಕೆ
ಮೆವಿವಿ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್, ಡಿಸಿಎ್ ಗಳಾದ ಏಡುಕುಂಡಲು, ವಿ.ದೇವರಾಜ್ ಹಾಗೂ ಈ ಯೋಜನೆಯ ಪ್ರಧಾನ ಸಂಯೋಜಕರು ಪ್ರೊ.ಎಸ್.ಎಸ್.ಮಾಲಿನಿ ಒಡಂಬಡಿಕೆ ಕಾರ್ಯಕ್ರಮದಲ್ಲಿ ಹಾಜರಿದ್ದರು. ಅಳಿವಿನಂಚಿನಲ್ಲಿರುವ ರಣಹದ್ದುಗಳ ರಕ್ಷಣೆ ಹಾಗೂ ಉಳಿವಿಗಾಗಿ ಆಧುನಿಕ ತಂತ್ರಜ್ಞಾನ ಬಳಸಿ ಅವುಗಳ ಸಂತತಿ ಹೆಚ್ಚು ಮಾಡುವುದು ಈ ಯೋಜನೆ ಮುಖ್ಯ ಉದ್ದೇಶವಾಗಿದೆ.
''ಇದೊಂದು ಐತಿಹಾಸಿಕ ಒಪ್ಪಂದ. ವಿವಿ ಜೆನೆಟಿಕ್ಸ್ ವಿಭಾಗವು ಅರಣ್ಯ ಇಲಾಖೆಯೊಂದಿಗೆ ಮಹತ್ತರ ಅಧ್ಯಯನ ಯೋಗ್ಯ ಒಪ್ಪಂದಕ್ಕೆ ಇಂದು ಸಹಿ ಹಾಕಿದೆ. ಇದು ಜೀವ ವೈವಿಧ್ಯತೆ ಹಾಗೂ ಆಹಾರ ಸರಪಳಿ ರಚನೆ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇಂದು ರಣಹದ್ದುಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಯಾವುದೇ ಪ್ರಾಣಿ ಉಳಿವು ವಂಶವಾಹಿಯನ್ನು ಅವಲಂಬಿಸಿರುತ್ತದೆ. ಈ ಒಪ್ಪಂದದ ಮೂಲಕ ಅರಣ್ಯ ಇಲಾಖೆಯೊಂದಿಗೆ ಸೇರಿ ರಣಹದ್ದುಗಳ 'ಡಿಎನ್ಎ ಪ್ರೋಪೈಲಿಂಗ್' ಮಾಡಲು ವಿವಿ ನಿರ್ಧರಿಸಿದೆ," ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.
ರಣಹದ್ದು ಅವಸಾನದ ಅಂಚಿನಲ್ಲಿದೆ
"ಮೂರು ವಿಧದ ರಣಹದ್ದು ಅವಸಾನದ ಅಂಚಿನಲ್ಲಿದೆ. ಉದ್ದ ಕೊಕ್ಕಿನ ರಣಹದ್ದು, ತೆಳು ಕೊಕ್ಕಿನ ರಣಹದ್ದು ಹಾಗೂ ಬಿಳಿಬೆನ್ನಿನ ರಣಹದ್ದು ಸದ್ಯ ಅಳಿವಿನಂಚಿನಲ್ಲಿರುವ ಪ್ರಭೇದಗಳು.ಸತ್ತ ದೇಹವನ್ನು ತಿನ್ನುತ್ತವೆ. ಆಹಾರ ಹುಡುಕಿಕೊಂಡು 100 ಕಿಮೀ ವರೆಗೆ ಹಾರಾಟ ನಡೆಸುತ್ತವೆ. 1980 ರಲ್ಲಿ ಭಾರತದಲ್ಲಿ 40 ಮಿಲಿಯನ್ ಇದ್ದ ರಣಹದ್ದುಗಳು ಸಂಖ್ಯೆ ಇದೀಗ ಗಣನೀಯವಾಗಿ ಕಡಿಮೆ ಆಗಿದೆ," ಎಂದು ರಣಹದ್ದು ಸಂರಕ್ಷಣಾ ಕಾರ್ಯಕ್ರಮದ ನಿರ್ದೇಶಕರಾದ ವಿಧು ಪ್ರಕಾಶ್ ತಿಳಿಸಿದ್ದಾರೆ.
ಯಾಕೆ ರಣಹದ್ದು ಬೇಕು
ಯಾವುದೇ ಪ್ರಾಣಿ ಸತ್ತಾಗ ಅದನ್ನು ರಣಹದ್ದು ತಿನ್ನುತ್ತಿತ್ತು. ಇದರಿಂದ ಸತ್ತ ಪ್ರಾಣಿಯಲ್ಲಿದ್ದ ವೈರಸ್ ಅಥವಾ ಬ್ಯಾಕ್ಟೀರಿಯಾ ರಣಹದ್ದು ಹೊಟ್ಟೆಯೊಳಗೆ ಸತ್ತು ಹೋಗುತ್ತಿತ್ತು. ಆ ಜೀರ್ಣಶಕ್ತಿಯೂ ರಣಹದ್ದಿಗೆ ಇತ್ತು. ಆದರೆ, ಈಗ ರಣಹದ್ದುಗಳು ಅಳಿವಿನಂಚಿನಲ್ಲಿರುವುದರಿಂದ ಸತ್ತ ಪ್ರಾಣಿಗಳನ್ನು ತಿನ್ನುತ್ತಿರುವ ನಾಯಿ, ಕಾಗೆ, ಕೋಳಿಗಳಿಂದ ವೈರಸ್ ಹರಡುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ. ರಣಹದ್ದುಗಳ ಸಂರಕ್ಷಣೆಯಷ್ಟೇ ಇದಕ್ಕಿರುವ ಪರಿಹಾರ. ಹಾಗಾಗಿ ರಣಹದ್ದುಗಳ ಸಂತಾನೋತ್ಪತಿ ಹೆಚ್ಚಿಸಲು ಡಿಎನ್ಎ ಪ್ರೋಪೈಲಿಂಗ್ ಮಾಡಲಾಗುತ್ತಿದೆ.
ರಾಮದೇವರ ಬೆಟ್ಟದಲ್ಲಿ ಅಳಿವಿನಂಚಿನಲ್ಲಿರುವ ಕನಿಷ್ಠ 5 ಉದ್ದ ಕೊಕ್ಕಿನ ರಣಹದ್ದು ಇದೆ. ಇತ್ತೀಚಿಗೆ ಒಂದು ಮರಿಯನ್ನೂ ಹಾಕಿದೆ. ಈ ಭಾಗದಲ್ಲಿ ರಣಹದ್ದುಗಳ ಸಂಖ್ಯೆ ಎಷ್ಟಿರಬಹುದು? ಅವುಗಳ ಆರೋಗ್ಯ ವೃದ್ಧಿಗೆ ಏನು ಮಾಡಬಹುದು ಎಂಬುದನ್ನು ಅಧ್ಯಯನ ನಡೆಸುವುದೇ ಡಿಎನ್ಎ ಟೆಸ್ಟ್ ಯೋಜನೆ ಉದ್ದೇಶ ಎಂದು ರಾಮನಗರ ಡಿಸಿಎಫ್ ವಿ.ದೇವರಾಜ್ ತಿಳಿಸಿದ್ದಾರೆ.