ಮೈಸೂರು ಮಹಾರಾಜರ ಭವ್ಯ ಇತಿಹಾಸ (ಭಾಗ 4)
(ಮುಂದುವರಿದಿದೆ...) ಮೂರನೇ ಮುಮ್ಮಡಿ ಕೃಷ್ಣರಾಜ ಒಡೆಯರ್ 1799ರಿಂದ 1863ರವರೆಗೆ ಆಡಳಿತ ನಡೆಸಿದರು. ಇವರ ಹುಟ್ಟು ಹೆಸರು ನಂಜರಾಜ ಒಡೆಯರ್. ನಂಜುಂಡೇಶ್ವರ ಅನುಗ್ರಹದಿಂದ ಜನಿಸಿದ್ದರಿಂದ ಆ ಹೆಸರು ಇಡಲಾಯಿತು ಎನ್ನಲಾಗಿದೆ. ಪಟ್ಟಾಭಿಷೇಕದ ಸಮಯದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಎಂದು ಕರೆಯಲಾಯಿತು.
1863ರಿಂದ 1894ರವರೆಗೆ ರಾಜ್ಯವಾಳಿದ ಚಾಮರಾಜೇಂದ್ರ ಒಡೆಯರ್ ಅವರು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ದತ್ತುಪುತ್ರನಾಗಿದ್ದು, 18ನೇ ವಯಸ್ಸಲ್ಲೇ ರಾಜ್ಯಭಾರವನ್ನು ವಹಿಸಿಕೊಂಡಿದ್ದರು. 1884ರಲ್ಲಿ ಜನಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ 1940ರಲ್ಲಿ ಕಾಲವಾದರು. ಇವರ ಆಡಳಿತದ ವೈಖರಿಯನ್ನು ಕಂಡು ಇವರನ್ನು ರಾಜರ್ಷಿ ಕರೆಯಲಾಗಿತ್ತು. [ಮರುಕಳಿಸಲಿದೆ ಗತಕಾಲದ ರಾಜವೈಭವ]
1919ರಲ್ಲಿ ಜನಿಸಿದ ಜಯಚಾಮರಾಜೇಂದ್ರ ಒಡೆಯರ್ 1974ರಲ್ಲಿ ಕಾಲವಾದರು. ಇವರು ತತ್ವಜ್ಞಾನಿಗಳೂ ಮೇಧಾವಿಗಳೂ ಆಗಿದ್ದರು. ಇವರಿಗೆ 1940ರಲ್ಲಿ ಪಟ್ಟಾಭಿಷೇಕ ನಡೆಯಿತು. ಇವರು ರಾಜ್ಯಭಾರ ವಹಿಸಿಕೊಂಡ ಏಳು ವರ್ಷಕ್ಕೆ ಭಾರತ ಸ್ವತಂತ್ರವಾಯಿತು.
ಆ ನಂತರ 1950ರಲ್ಲಿ ಜಾರಿಗೆ ಬಂದ ರಾಜ್ಯಾಂಗ ರಚನೆಯ ಪ್ರಕಾರ ರಾಜತ್ವ ಕೊನೆಗೊಂಡು, ಅಖಂಡ ಭಾರತದಲ್ಲಿ ಲೀನವಾಯಿತು. 1950ರಿಂದ 1956ರವರೆಗೆ ಜಯಚಾಮರಾಜೇಂದ್ರ ಒಡೆಯರ್ ಮೈಸೂರಿನ ಗೌವರ್ನರ್ ಆಗಿ ಸೇವೆ ಸಲ್ಲಿಸಿದರು. ಅಲ್ಲಿಗೆ ಸುಮಾರು 550 ವರ್ಷಗಳ ಮೈಸೂರು ರಾಜರ ರಾಜ್ಯಭಾರವೂ ಕೊನೆಗೊಂಡಿತು. [ಯದುವೀರರಿಗೆ ಪಟ್ಟಾಭಿಷೇಕ ಹೀಗೆ ನಡೆಯುತ್ತದೆ]
ಆ ನಂತರ 1974ರ ಅಕ್ಟೋಬರ್ 16ರಂದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪಟ್ಟಾಭಿಷೇಕ ನಡೆದು ರಾಜಮನೆತನ ಮುಂದುವರೆಯಿತು. ಅವರ ನಿಧನದ ಬಳಿಕ ರಾಜಮನೆತನದ ಉತ್ತರಾಧಿಕಾರಿ ಯಾರು ಎಂಬ ಜಿಜ್ಞಾಸೆ ಮೂಡಿತ್ತಾದರೂ ಅದಕ್ಕೆಲ್ಲ ತೆರೆಬಿದ್ದು ಇದೀಗ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರಾಜಮನೆತನದ ಸಾರಥ್ಯ ವಹಿಸಿದ್ದು ಪಟ್ಟಾಭಿಷೇಕಕ್ಕೆ ತಯಾರಿಗಳು ನಡೆಯುತ್ತಿವೆ. [ಚಿರನಿದ್ರೆಗೆ ಜಾರಿದ ಶ್ರೀಕಂಠದತ್ತ ಒಡೆಯರ್]