ಮೈಸೂರು ಮಹಾರಾಜರ ಭವ್ಯ ಇತಿಹಾಸ (ಭಾಗ 3)
(ಮುಂದುವರಿದಿದೆ...) 1672ರಿಂದ 1704ರವರೆಗೆ ರಾಜ್ಯಭಾರ ಮಾಡಿದ ಚಿಕ್ಕದೇವರಾಜ ಒಡೆಯರ್ ಪಂಡಿತರೂ, ಮಹಾಪರಾಕ್ರಮಿಯೂ ಆಗಿದ್ದರು. ಇವರು ಶಿವಾಜಿ ಮತ್ತು ಔರಂಗಜೇಬನ ಸಮಕಾಲೀನರಾಗಿದ್ದರು. ರಾಜ್ಯಭಾರ ವಹಿಸಿಕೊಂಡ ಐದು ದಿನದಲ್ಲಿ ದಂಡೆತ್ತಿ ಬಂದ ಮಧುರೆಯ ಚೊಕ್ಕನಾಯಕನೆಂಬ ಪಾಳೇಗಾರನನ್ನು ಎದುರಿಸಿ ಜಯಪಡೆದರಲ್ಲದೆ, ಸತ್ಯಮಂಗಲ ಮತ್ತು ಧರ್ಮಪುರಂ ಎಂಬ ಎರಡು ಚಿಕ್ಕ ರಾಜ್ಯವನ್ನು ತಮ್ಮ ವಶ ಮಾಡಿಕೊಂಡರು.
ಚಿಕ್ಕದೇವರಾಜ ಒಡೆಯರ್ ಪುತ್ರರಾದ ಕಂಠೀರವ ಮಹಾರಾಜ ಒಡೆಯರ್ 1704ರಿಂದ 1713ರವರೆಗೆ ಆಡಳಿತ ನಡೆಸಿದರು. ಇವರ ಕಾಲದಲ್ಲಿ ಔರಂಗಜೇಬನ ಆಡಳಿತದಲ್ಲಿ ದಕ್ಷಿಣ ಭಾರತದ ಗೌರ್ನರ್ ಶ್ರೀರಂಗಪಟ್ಟಣದ ಮೇಲೆ ದಂಡೆತ್ತಿ ಬಂದಿದ್ದರು. ಈ ಸಂದರ್ಭ ಕಂಠೀರವ ಮಹಾರಾಜ ಒಡೆಯರ್ ಒಂದೂವರೆ ಕೋಟಿ ರೂ.ಗಳ ಕಪ್ಪಕಾಣಿಕೆ ಸಲ್ಲಿಸಿ ಸಂಧಾನ ಮಾಡಿಕೊಂಡರು.
ಇವರ ಪುತ್ರ ದೊಡ್ಡ ಕೃಷ್ಣರಾಜ ಒಡೆಯರ್ ಕೇವಲ ಹನ್ನೆರಡು ವರ್ಷಕ್ಕೆ ಪಟ್ಟಕ್ಕೇರಿದರು. 1714ರಿಂದ 1732ರವರೆಗೆ ಆಡಳಿತ ನಡೆಸಿದರು. ಇವರ ಕಾಲದಲ್ಲಿ ನಿಜಾಂ, ಆರ್ಕಾಟ್ ನವಾಬ್, ಸಿರಾ ಕಡಪ, ಕರ್ನೂಲ್, ಸವಾನೂರ್ ಮತ್ತು ಇಕ್ಕೇರಿ ರಾಜರು ಒಟ್ಟಾಗಿ ಯುದ್ಧಕ್ಕೆ ಬಂದಿದ್ದರಿಂದ ಒಂದು ಕೋಟಿ ರು. ಕಾಣಿಕೆ ನೀಡಿ ಸಂಧಾನ ಮಾಡಿಕೊಳ್ಳಲಾಯಿತು.
ದೊಡ್ಡ ಕೃಷ್ಣರಾಜ ಒಡೆಯರ್ ಮಕ್ಕಳಿಲ್ಲದ ಕಾರಣ ಚಾಮರಾಜ ಒಡೆಯರ್ ಅವರನ್ನು ದತ್ತು ತೆಗೆದುಕೊಂಡರು. ಚಾಮರಾಜ ಒಡೆಯರ್ 1732ರಿಂದ 1734ರವರೆಗೆ ರಾಜ್ಯವಾಳಿದರು. ಅವರ ಬಳಿಕ ಎರಡನೇ ಇಮ್ಮಡಿ ಕೃಷ್ಣರಾಜ ಒಡೆಯರ್ ಪಟ್ಟಕ್ಕೆ ಬಂದು 1734ರಿಂದ 1766ರವರೆಗೆ ಸುದೀರ್ಘಕಾಲ ರಾಜ್ಯಭಾರ ನಡೆಸಿದರು. ಇವರ ಕಾಲದಲ್ಲಿ ಶತ್ರುಗಳ ಸೈನ್ಯ ಆಗಾಗ್ಗೆ ಯುದ್ಧ ಸಾರುತ್ತಿದ್ದುದನ್ನು ಗಮನಿಸಿ ಫ್ರೆಂಚರ ಸಹಾಯ ಪಡೆದು ಮೈಸೂರಿನ ಗಡಿಯನ್ನು ಭದ್ರಪಡಿಸಿಕೊಂಡರು.
ಇಮ್ಮಡಿ ಕೃಷ್ಣರಾಜ ಒಡೆಯರ್ ನಂತರ ನವಾಬ್ ಹೈದರಾಲಿ ಖಾನರ ಸಲಹೆ ಮೇರೆಗೆ ಚಲುವಾಜಮ್ಮಣ್ಣಿ ಅವರು ನಂಜರಾಜ ಒಡೆಯರ್ಗೆ ಪಟ್ಟ ಕಟ್ಟಿದರು. ಅವರು 1766ರಿಂದ 1770ರವರೆಗೆ ರಾಜ್ಯಭಾರ ನಡೆಸಿದರು. 1770ರಿಂದ 1776ರವರೆಗೆ ಎಂಟನೇ ಬೆಟ್ಟದ ಚಾಮರಾಜ ಒಡೆಯರ್ ಆಡಳಿ ನಡೆಸಿದರಾದರೂ ಹೈದರಾಲಿಯೇ ಸರ್ವಾಧಿಕಾರಿಯಾಗಿದ್ದನು.
1776ರಿಂದ 1796ರವರೆಗೆ ಒಂಬತ್ತನೇ ಖಾಸಾ ಚಾಮರಾಜ ಒಡೆಯರ್ ಆಡಳಿತ ನಡೆಸಿದರು. ಇವರ ಕಾಲದಲ್ಲಿ ಬಹಳಷ್ಟು ಐತಿಹಾಸಿಕ ಘಟನೆಗಳು ನಡೆದವು. ಟಿಪ್ಪು ಸುಲ್ತಾನ್ ರಾಜ ಕುಟುಂಬವನ್ನು ಅರಮನೆಯಿಂದ ಸ್ಥಳಾಂತರಿಸಿದನು. ಆಂಗ್ಲರೊಡನೆ ನಡೆದ ಯುದ್ದದಲ್ಲಿ ಟಿಪ್ಪು ಮೃತಪಟ್ಟ ಬಳಿಕ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ವರ್ಗಾಯಿಸಲಾಯಿತು.