ಮೈಸೂರಿನಲ್ಲಿ ಹೆಚ್ಚಿದ ಬೀದಿನಾಯಿಗಳ ಹಾವಳಿ
ಮೈಸೂರು, ಜನವರಿ 5 : ಮೈಸೂರಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ. ಶುಕ್ರವಾರವಷ್ಟೇ 10 ಕ್ಕೂ ಹೆಚ್ಚು ಜನರ ಮೇಲೆರೆಗಿದ ಬೀದಿನಾಯಿಗಳು ಘಾಸಿಗೊಳಿಸಿದೆ.
ಜಿಲ್ಲೆಯಲ್ಲಿ ಎಲ್ಲೆಂದರಲ್ಲಿ ರಸ್ತೆ ಮಧ್ಯೆಯೇ ಮಲಗಿರುವ ಬೀದಿ ನಾಯಿಗಳು ಮೈಸೂರಿಗರ ಮನೆಯವರಂತೆಯೇ ಇದೆ. ಇಲ್ಲಿನ ಬಹುತೇಕ ರಸ್ತೆಗಳು, ಬಡಾವಣೆಗಳು ಹಾಗೂ ಉದ್ಯಾನಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನರು ಓಡಾಡುವುದಕ್ಕೆ ಭಯ ಪಡುವ ವಾತಾವರಣ ನಿರ್ಮಾಣವಾಗಿದೆ.
ಬೆಂಗಳೂರಲ್ಲಿ ಮತ್ತೆ ಬೀದಿ ನಾಯಿ ಹಾವಳಿ: 4 ವರ್ಷದ ಮಗು ಮೇಲೆ ದಾಳಿ
ಸಂಜೆ ಹಾಗೂ ರಾತ್ರಿ ಹೊತ್ತಿನಲ್ಲಿ ರಸ್ತೆಗಳು ಹಾಗೂ ಇತರೆಡೆಗಳಲ್ಲಿ ನಾಯಿಗಳು ಹಿಂಡು ಹಿಂಡಾಗಿ ಕಂಡು ಬರುತ್ತಿವೆ. 15ರಿಂದ 20ರಷ್ಟು ಸಂಖ್ಯೆ ಯಲ್ಲಿರುವ ನಾಯಿಗಳು ವಾಹನ ಸವಾರರ ಮೇಲೆ ದಾಳಿ ಮಾಡುತ್ತವೆ. ಕೆಲ ನಾಯಿಗಳು ಬೈಕ್, ಕಾರುಗಳ ಹಿಂದೆ ಓಡಿ ಬರುತ್ತವೆ. ಇದರಿಂದ ನಾವು ಆತಂಕ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ವಾಹನ ಸವಾರರು.
ಇತ್ತ ವಾಯು ವಿಹಾರ ಹಾಗೂ ಆಟವಾಡಲು ಚಿಕ್ಕಮಕ್ಕಳು, ವಯೋವೃದ್ಧರು ಉದ್ಯಾನಗಳಿಗೆ ಬರುತ್ತಾರೆ. ಈ ಸಂದರ್ಭದಲ್ಲಿ ಗೇಟ್ ಬಳಿಯೇ ನಾಯಿಗಳು ಇರುತ್ತವೆ. ಇದರಿಂದ ಚಿಣ್ಣರು ಭಯ ಪಡುತ್ತಾರೆ. ವಯೋವೃದ್ಧರು ಅವುಗಳನ್ನು ಓಡಿಸಲು ಬಂದರೆ ಅವರನ್ನೇ ಕಚ್ಚಲು ಬರುತ್ತವೆ. ಇದರಿಂದ ಜನರಿಗೆ ಹೆಚ್ಚು ತೊಂದರೆಯಾಗಿದೆ.
ಕೆಲ ಮಹಿಳೆಯರು ವಾಯು ವಿಹಾರ ಮಾಡಲು ಹಿಂದೇಟು ಹಾಕು ವಂತಾಗಿದೆ ಎಂದು ಹೇಳುತ್ತಾರೆ ಕನಕದಾಸನಗರದ ನಿವಾಸಿ ಶೃತಿ.
ಮಂಡ್ಯ : ಬೀದಿನಾಯಿಗಳ ದಾಳಿಗೆ ಬಾಲಕ ಬಲಿ
ರಾತ್ರಿ ಸಮಯದಲ್ಲಿ ಬೀದಿನಾಯಿಗಳು ಕೂಗಾಟ ಆರಂಭಿಸುತ್ತವೆ. ಇದರಿಂದ ನಿವಾಸಿಗಳ ನಿದ್ದೆಗೂ ಭಂಗ ಬರುತ್ತಿದೆ. ನಾಯಿಗಳ ಹಾವಳಿ ತಪ್ಪಿಸುವಂತೆ ಮಹಾನಗರ ಪಾಲಿಕೆಗೆ ಸ್ಥಳೀಯರು ಮನವಿ ಸಲ್ಲಿಸಿದ್ದಾರೆ.
ಆದರೆ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜನರು ಆರೋಪಿಸುತ್ತಾರೆ. ಇತ್ತ ನಗರದ ಕೆ. ಜಿ ಕೊಪ್ಪಲು ಹಾಗೂ ಮಾಂಸದ ಅಂಗಡಿಯ ಬದಿಗಳಲ್ಲಿ ಮಾಂಸದ ಅಂಗಡಿಗಳು ಇವೆ. ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೀದಿನಾಯಿಗಳು ಕಾಣಿಸುತ್ತವೆ.
ಅಂಗಡಿಯವರು ಕಸದ ತೊಟ್ಟಿಯಲ್ಲಿ ಮಾಂಸದ ತ್ಯಾಜ್ಯ ಹಾಕುವುದರಿಂದ ನಾಯಿಗಳು ಅದನ್ನು ತಿನ್ನಲು ಬರುತ್ತವೆ. ಈ ಸಂದರ್ಭದಲ್ಲಿ ಅವುಗಳ ನಡುವೆ ಜಗಳ ಏರ್ಪಟ್ಟು ಕಿರುಚಾಟ ಆರಂಭಿಸುತ್ತವೆ ಎಂದು ಸಮಸ್ಯೆಯನ್ನು ಬಿಚ್ಚಿಡುತ್ತಾರೆ ನಾಗರೀಕರು.
ಸಂತಾನ ಹರಣ ಚಿಕಿತ್ಸೆ ಮಾಡುವುದರಿಂದ ಬೀದಿನಾಯಿಗಳ ಹಾವಳಿ ನಿಯಂತ್ರಣ ಮಾಡಬಹುದು. ಆದರೆ, ಈ ಕಾರ್ಯಕ್ಕೆ ಸಮರ್ಪಕವಾಗಿ ಪಾಲಿಕೆ ಮುಂದಾಗುತ್ತಿಲ್ಲ. ಈ ಹಿಂದೆ ಬೀದಿನಾಯಿಗಳನ್ನು ನಿಯತ್ರಿಸುವಂತೆ ಮನವಿ ಕೂಡ ಮಾಡಲಾಗಿತ್ತು. ಯಾವುದೇ ಕ್ರಮ ಕೈಗೊಂಡಿಲ್ಲ ಒಂದು ನಾಯಿ ಹಿಡಿಯಲು 850ರಿಂದ1,500 ರೂ ವೆಚ್ಚವಾಗುತ್ತದೆ.
ಇದನ್ನು ಪಾಲಿಕೆ ಆಡಳಿತವೇ ಭರಿಸಬೇಕು. ಪಶುಸಂಗೋಪನೆ ಇಲಾಖೆಯವರು ಎನ್ಜಿಒ ಅವರಿಗೆ ಈ ಬಗ್ಗೆ ತರಬೇತಿ ನೀಡುತ್ತಾರೆ. ಬಳಿಕ ಟೆಂಡರ್ ಕರೆದು ನಾಯಿಗಳ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ ಅಧಿಕಾರಿಗಳು.
ಇನ್ನಾದರೂ ಪಾಲಿಕೆ ಎಚ್ಚೆತ್ತು ಇಂತಹ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.