ಕಿಡ್ನಾಪ್ ಆಗಿದ್ದ ತಹಶೀಲ್ದಾರ್ ಕೆ.ಆರ್.ಪೇಟೆಯಲ್ಲಿ ಪ್ರತ್ಯಕ್ಷ
ಮೈಸೂರು, ಆಗಸ್ಟ್ 3: ಶುಕ್ರವಾರ ಬೆಳಿಗ್ಗೆ ನಾಪತ್ತೆಯಾಗಿದ್ದ ಕೆ.ಆರ್. ಪೇಟೆ ಕೆ. ಮಹೇಶ್ ಚಂದ್ರ ತಹಶೀಲ್ದಾರ್ ಸಂಜೆ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷಗೊಂಡಿದ್ದಾರೆ.
ಸಂಜೆ 5 ಗಂಟೆ ಸುಮಾರಿಗೆ ಕೆ.ಆರ್.ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷರಾದ ಅವರು, ಮುಸುಕುಧಾರಿಗಳು ತಮ್ಮನ್ನು ಕಿಡ್ನಾಪ್ ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ.
ಕೆ.ಆರ್.ಪೇಟೆ ತಹಶೀಲ್ದಾರ್ ನಾಪತ್ತೆ, ಅಪಹರಣ ಶಂಕೆ
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಹಶೀಲ್ದಾರ್ ಮಹೇಶಚಂದ್ರ ಅವರನ್ನು ಬೆಳಗ್ಗೆ ಅಪಹರಣ ಮಾಡಲಾಗಿದೆ ಎಂಬ ಸುದ್ದಿ ಹರಡಿತ್ತು.
ಗುರುವಾರ ರಾತ್ರಿ ಕೆ.ಆರ್.ನಗರ ತಾಲ್ಲೂಕಿನ ಚಿಕ್ಕವಡ್ಡರಗುಡಿ ಗ್ರಾಮದ ಬಳಿ ಎರಡು ಬೈಕ್ನಲ್ಲಿ ಬಂದ ಮೂರು-ನಾಲ್ಕು ಜನ ಮುಸುಕುಧಾರಿಗಳು ನನ್ನ ಕಾರನ್ನು ಅಡ್ಡಗಟ್ಟಿ, ಕಿರುಚಾಡದಂತೆ ಪ್ರಾಣ ಬೆದರಿಕೆ ಹಾಕಿದರು.
ಮುಖಕ್ಕೆ ಮುಸುಕು ಹಾಕಿ ಬೈಕ್ನಲ್ಲಿ ಕೂರಿಸಿ ಕೊಂಡು ಹೋದರು. ನನ್ನನ್ನು ಎಲ್ಲಿಗೆ ಕರೆದೊಯ್ದರು ಎಂಬುದು ಗೊತ್ತಾಗಲಿಲ್ಲ. ನಂತರ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿದ್ದರು. ಮುಸುಕುಧಾರಿಗಳು ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಿದ್ದರು ಎಂದು
ಸಂಜೆ 4.30ರ ಸಮಯದಲ್ಲಿ ಅದೇ ಬೈಕ್ನಲ್ಲಿ ನನ್ನನ್ನು ಕೆ.ಆರ್.ಪೇಟೆ ತಾಲೂಕಿನ ತೆಂಡೇಕೆರೆ ಬಳಿ ಬಿಟ್ಟು ಹೋದರು, ನಾನು ಅಲ್ಲಿಂದ ಬಸ್ನಲ್ಲಿ ಬಂದಿದ್ದಾಗಿ ಅವರು ಪೊಲೀಸರಿಗೆ ತಿಳಿಸಿದ್ದಾರೆ.
ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ಮತ್ತು ಸಿಬ್ಬಂದಿ ಜತೆಯಲ್ಲಿ ತೆಂಡೇಕೆರೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಹೇಶ್ ಚಂದ್ರ ಅಪರಣದ ಹಿಂದೆ ಕಲ್ಲುಗಣಿಗಾರಿಕೆ ಮಾಫಿಯಾ ಇದೆ ಎಂಬ ಅನುಮಾನ ವ್ಯಕ್ತವಾಗಿದೆ.
ಮಹೇಶ್ ಚಂದ್ರ ಅವರ ಕಾರು ಶುಕ್ರವಾರ ಬೆಳಿಗ್ಗೆ ಮೈಸೂರಿನ ಬಳಿ ಪತ್ತೆಯಾಗಿತ್ತು. ಕಾರನ್ನು ನೋಡಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಒಂದು ವಾರದ ಹಿಂದೆ ಕೆ.ಮಹೇಶ್ ಚಂದ್ರ ಅವರು ಕೆ.ಆರ್.ನಗರದಿಂದ ಕೆ.ಆರ್.ಪೇಟೆಗೆ ವರ್ಗಾವಣೆಗೊಂಡಿದ್ದರು. ಗುರುವಾರ ಸಂಜೆ 7.30ಕ್ಕೆ ವಿಭಾಗಾಧಿಕಾರಿಯೊಂದಿಗೆ ಸಭೆ ಮುಗಿಸಿ, 8.45ಕ್ಕೆ ಮನೆಯತ್ತ ಹೊರಟಿದ್ದರು.
ತಾಯಿಗೆ ಅನಾರೋಗ್ಯವಿದೆ ಎಂದು ಶುಕ್ರವಾರ ಮತ್ತು ಶನಿವಾರ ಅವರು ರಜೆ ಪಡೆದಿದ್ದರು. ಆದರೆ, ಗುರುವಾರ ಪ್ರವಾಸಿ ಮಂದಿರದ ಹೊರಟ ಅವರು ಮನೆ ಸೇರಿರಲಿಲ್ಲ. ಅವರ ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿತ್ತು.