ಸ್ಯಾಂಡಲ್ ವುಡ್ ನಟರೇಕೆ ಆಗಾಗ ಚಾಮುಂಡಿ ತಾಯಿಯ ಮೊರೆ ಹೋಗುತ್ತಿರುತ್ತಾರೆ?
ನಾಡ ಅಧಿದೇವತೆ ಚಾಮುಂಡಿ ತಾಯಿಯ ಆರಾಧನೆ ಮಾಡದವರಿಲ್ಲ. ನಾಡಿನ ಬಹುತೇಕ ಮಂದಿ ಚಾಮುಂಡಿ ತಾಯಿಯನ್ನು ವಿಶೇಷವಾಗಿ ಪೂಜಿಸುತ್ತಾರೆ. ಚಾಮುಂಡಿ ತಾಯಿಯ ದರ್ಶನ ಮಾಡಿದರೆ ಕಷ್ಟಗಳು ದೂರವಾಗುತ್ತೆ, ಇಷ್ಟಾರ್ಥ ನೆರವೇರುತ್ತೆ, ನಂಬಿದವರನ್ನು ಈ ತಾಯಿ ಯಾವತ್ತು ಕೈ ಬಿಡುವುದಿಲ್ಲ ಎನ್ನುವುದು ಭಕ್ತಾದಿಗಳ ನಂಬಿಕೆ. ಹಾಗಾಗಿಯೆ ನಾಡಿನ ಪವರ್ ಫುಲ್ ದೇವತೆಯನ್ನು ಅನೇಕರು ನಂಬುತ್ತಾರೆ.
ಆಷಾಢ ಶುಕ್ರವಾರ ಚಾಮುಂಡಿ ತಾಯಿಯ ಆಶೀರ್ವಾದ ಪಡೆದ ದರ್ಶನ್
ಸ್ಯಾಂಡಲ್ ವುಡ್ ನ ಬಹುತೇಕ ನಟರು ಹೆಚ್ಚಾಗಿ ಚಾಮುಂಡಿ ತಾಯಿಯ ಮೊರೆಹೋಗುತ್ತಿರುತ್ತಾರೆ. ಅದರಲ್ಲೂ ಹೆಚ್ಚಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಗಾಗ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುತ್ತಿರುತ್ತಾರೆ. ಆದ್ರೀಗ ಕಿಚ್ಚ ಸುದೀಪ್ ಕೂಡ ಚಾಮುಂಡಿ ತಾಯಿಯ ಆಶೀರ್ವಾದ ಪಡೆಯಲು ಬೆಟ್ಟಹತ್ತಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ಕಿಚ್ಚ ಸುದೀಪ್
ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಇಂದು ತೆರೆಗೆ ಬಂದಿದೆ. ಕಷ್ಟಪಟ್ಟು, ಇಷ್ಟಪಟ್ಟು ಬೆವರಿಳಿಸಿ ಮಾಡಿರುವ ಸಿನಿಮಾ ಗೆಲ್ಲಲಿ ಎಂದು ಚಾಮುಂಡಿ ತಾಯಿಯಲ್ಲಿ ಬೇಡಿಕೊಂಡಿದ್ದಾರೆ. ಇಂದು ಬೆಳಗ್ಗೆಯೆ ಕಿಚ್ಚ ಸ್ನೇಹಿತರ ಜೊತೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದಾರೆ.
ಬರಿಗಾಲಿನಲ್ಲಿಯೇ ಬೆಟ್ಟ ಹತ್ತುತ್ತಾರೆ ಪುನೀತ್
ಪವರ್ ಸ್ಟಾರ್ ಪುನೀತ್ ರಾಜ್ ಸಹ ಆಗಾಗ ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಡುತ್ತಿರುತ್ತಾರೆ. ಪುನೀತ್ ಸದ್ಯ ಮೈಸೂರಿನಲ್ಲಿ ಯುವರತ್ನ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಅಲ್ಲೆ ಸಮೀಪದಲ್ಲಿಯೆ ಇರುವ ಚಾಮುಂಡಿ ಬೆಟ್ಟಕ್ಕೆ ಮೊನ್ನೆಯಷ್ಟೆ ತೆರಳಿದ್ದರು. ಯಾವಾಗಲು ಬರಿಗಾಲಿನಲ್ಲಿಯೆ ಬೆಟ್ಟಹತ್ತುವ ಪುನೀತ್ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯುತ್ತಾರೆ. ಕಳೆದ ಒಂದು ತಿಂಗಳ ಹಿಂದೆಯೂ ಪುನೀತ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು.
ಬೆಟ್ಟ ಹತ್ತಿ ಚಾಮುಂಡಿ ತಾಯಿಯ ದರ್ಶನ ಪಡೆದ ನಟ ಪುನೀತ್
ಆಗಾಗ ಭೇಟಿ ನೀಡುತ್ತಲೆ ಇರುತ್ತಾರೆ ದರ್ಶನ್
ಚಾಮುಂಡಿ ತಾಯಿಯನ್ನು ವಿಶೇಷವಾಗಿ ಆರಾಧಿಸುವ ನಟ ದರ್ಶನ್. ಸದಾ ಚಾಮುಂಡಿ ತಾಯಿಯ ದರ್ಶನ ಪಡೆಯುತ್ತಿರುವ ದರ್ಶನ್ ಇತ್ತೀಚಿಗಷ್ಟೆ ಅಂದರೆ ಕುರುಕ್ಷೇತ್ರ ಸಿನಿಮಾ ರಿಲೀಸ್ ಸಮಯದಲ್ಲಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಅದರಲ್ಲೂ ದರ್ಶನ್ ಅಷಾಢದ ಸಮಯದಲ್ಲಿ ಪ್ರತೀವರ್ಷವೂ ತಪ್ಪದೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ.
ಅಂಬಿ ಅಭಿಮಾನಿಗಳ ಬಲದೊಂದಿಗೆ ನಾಮಪತ್ರ ಸಲ್ಲಿಸಿದ ಸುಮಲತಾ
ಚಾಮುಂಡಿ ತಾಯಿ ಸನ್ನಿಧಿಯಲ್ಲಿ ಸುಮಲತಾ
ನಟಿ ಮತ್ತು ಸಂಸದೆ ಸುಮಲತಾ ಸಹ ಚಾಮುಂಡಿ ತಾಯಿಯ ಆರಾಧನೆ ಮಾಡುತ್ತಾರೆ. ಚುನಾವಣೆ ಸಂದರ್ಭದಲ್ಲಿ ಸುಮಲತಾ ನಾಮಪತ್ರ ಸಲ್ಲಿಸುವ ಮೊದಲು ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಆ ನಂತರ ಮತ ಎಣಿಕೆಯ ದಿನ ಹಾಗೂ ಗೆದ್ದ ಬಳಿಕವೂ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಅರ್ಪಿಸಿದ್ದರು.