ಕರ್ನಾಟಕ ರಾಜ್ಯ ಮುಕ್ತ ವಿವಿಗೆ ರೂ. 9 ಲಕ್ಷ ದಂಡ
ಮೈಸೂರು, ಜೂನ್ 22 : ಪ್ರತಿಷ್ಠಿತ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಬಿಬಿಎಂ ಕೋರ್ಸ್ ಗೆ ಸಂಬಂಧಿಸಿದಂತೆ 5ನೇ ಸೆಮಿಸ್ಟರ್ ನ ಅಂಕಪಟ್ಟಿ ನೀಡದ ಕಾರಣಕ್ಕಾಗಿ ಗ್ರಾಹಕರ ನ್ಯಾಯಾಲಯ 9 ಲಕ್ಷ ರೂ ದಂಡ ವಿಧಿಸಿ ತೀರ್ಪು ನೀಡಿದೆ.
ಮೈಸೂರಿನ ಟಿ. ಕೆ ಬಡಾವಣೆ ನಿವಾಸಿ ವಿದ್ಯಾ ಎಸ್ ಅಯ್ಯರ್ ಎಂಬುವರ ಪರವಾಗಿ ಗ್ರಾಹಕರ ನ್ಯಾಯಾಲಯ ತೀರ್ಪು ನೀಡಿದೆ. ಈ ಸಂಬಂಧ ನ್ಯಾಯವಾದಿ ವಿಶ್ವನಾಥ ದೇವಶ್ಯ ಎಂಬುವರು ಅರ್ಜಿದಾರರ ಪರವಾಗಿ ವಾದ ಮಾಡಿದ್ದರು.
ಹಳಸಿದ ಕೇಕ್ ಕೊಟ್ಟ ರಿಲಾಯನ್ಸ್ ಫ್ರೆಶ್ಗೆ ಕೋರ್ಟ್ ಹೇಳಿದ್ದೇನು?
2014ರಲ್ಲಿ ವಿದ್ಯಾ ಅವರು ಕರ್ನಾಟಕ ರಾಜ್ಯ ಮುಕ್ತ ವಿವಿಯ ಅಂಗ ಸಂಸ್ಥೆಯಾದ ಹೈ ಸಾಫ್ಟ್ ಸಂಸ್ಥೆ ಮೂಲಕ ಬಿಬಿಎಂ ಕೋರ್ಸ್ ಗೆ ಸೇರಿದ್ದರು. ಅವರಿಗೆ ಐದನೇ ಸೆಮಿಸ್ಟರ್ ವರೆಗೆ ಪರೀಕ್ಷೆ ಬಯಲು ಅವಕಾಶ ನೀಡಲಾಗಿತ್ತು. ಅದರಂತೆ ನಾಲ್ಕನೇ ಸೆಮಿಸ್ಟರ್ ವರೆಗಿನ ಅಂಕಪಟ್ಟಿಯನ್ನು ನೀಡಲಾಗಿತ್ತು. ಐದನೇ ಸೆಮಿಸ್ಟರ್ ಪರೀಕ್ಷೆ ಬರೆದ ನಂತರ ಆರನೇ ಸೆಮಿಸ್ಟರ್ ಗೆ ಸಂಬಂಧಿಸಿದಂತೆ ಪರೀಕ್ಷಾ ಶುಲ್ಕವನ್ನು ಕಟ್ಟಿಸಿಕೊಳ್ಳಲಾಗಿತ್ತು. ಆದರೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಲಿಲ್ಲ. ಹೀಗಾಗಿ ಅವರು ಗ್ರಾಹಕರ ನ್ಯಾಯಾಲಯದ ಮೊರೆ ಹೋಗಬೇಕಾಯಿತು.
ವಿವಿಯ ಬೇಜವಾಬ್ದಾರಿಯಿಂದಾಗಿ ನನ್ನ ಭವಿಷ್ಯ ಹಾಳಾಯಿತು ಎಂದು ವಿದ್ಯಾ ಅವರು ದೂರಿನಲ್ಲಿ ತಿಳಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಗ್ರಾಹಕರ ನ್ಯಾಯಾಲಯವು ರಾಜ್ಯ ಮುಕ್ತ ವಿಶ್ವವಿದ್ಯಾಲಯ ಹಾಗೂ ಹೈ ಸಾಫ್ಟ್ ಸಂಸ್ಥೆಗೆ ಜಂಟಿಯಾಗಿ ವಿದ್ಯಾ ಅವರಿಗೆ 9 ಲಕ್ಷ ಪರಿಹಾರ ನೀಡಬೇಕೆಂದು ಆದೇಶ ನೀಡಿದೆ.