"ತೆರೆದ ಪುಸ್ತಕ ಪರೀಕ್ಷೆ" ನಡೆಸಲು ಕರ್ನಾಟಕ ರಾಜ್ಯ ಮುಕ್ತ ವಿವಿ ನಿರ್ಧಾರ
ಮೈಸೂರು, ಸೆಪ್ಟೆಂಬರ್ 21: ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು, 'ತೆರೆದ ಪುಸ್ತಕ ಪರೀಕ್ಷೆ 'ನಡೆಸಿ ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ತೆರೆದ ಪುಸ್ತಕ ಪರೀಕ್ಷೆ (ಓಪನ್ ಬುಕ್ ಎಕ್ಸಾಂ) ಯನ್ನು ದೇಶದಲ್ಲಿ ಮೊದಲು ಪರಿಚಯಿಸಿದ್ದು ದೆಹಲಿ ವಿಶ್ವವಿದ್ಯಾಲಯ.
ಕಳೆದ ಕೊರೊನಾ ಲಾಕ್ ಡೌನ್ ಸಮಯದಲ್ಲಿ ದೆಹಲಿ ವಿಶ್ವವಿದ್ಯಾಲಯ ಜುಲೈ ತಿಂಗಳಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಇದೇ ಮಾದರಿಯಲ್ಲಿ ನಡೆಸಿತ್ತು. ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಈ ರೀತಿ ಪರೀಕ್ಷೆ ಮೊದಲೇ ಪ್ರಚಲಿತದಲ್ಲಿತ್ತಾದರೂ ದೇಶದಲ್ಲಿ ಎರಡನೇಯದಾಗಿ ಜಾರಿಗೆ ತಂದ ಹೆಗ್ಗಳಿಕೆ ಕರಾಮುವಿವಿ ಯದ್ದಾಗಿದೆ.
ಭಾರಿ ಮಳೆ: ಮಂಗಳೂರು ವಿವಿ ಸ್ನಾತಕ, ಸ್ನಾತಕೋತ್ತರ ಪದವಿ ಪರೀಕ್ಷೆ ಮುಂದೂಡಿಕೆ
ಮನೆಯಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ
ಈ ಪದ್ಧತಿಯಲ್ಲಿ ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ವಿವಿಯ ಈ ನಿರ್ಧಾರಕ್ಕೆ ಮುಖ್ಯ ಕಾರಣ ಕೋವಿಡ್ 19 ಆಗಿದ್ದು, ಪರೀಕ್ಷೆ ನಡೆಸಲು ತೊಡಕು ಇರುವುದರಿಂದ ಅಸೈನ್ಮೆಂಟ್ ಆಧಾರದಲ್ಲಿ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಬಡ್ತಿಗೊಳಿಸುವುದು ಸೂಕ್ತವಲ್ಲ ಎಂದು ಪರಿಗಣಿಸಿರುವ ವಿವಿ ಆಡಳಿತ 'ತೆರೆದ ಪುಸ್ತಕ ಪರೀಕ್ಷೆ' ನಡೆಸಲು ನಿರ್ಧರಿಸಿದೆ. ಈಗಾಗಲೇ ಅಮೆರಿಕ, ಕೆನಡಾ, ಜರ್ಮನಿ, ಆಸ್ಟ್ರೇಲಿಯಾದಲ್ಲಿ 'ತೆರೆದ ಪುಸ್ತಕ ಪರೀಕ್ಷೆ' ಯಶಸ್ವಿಯಾಗಿದ್ದು, ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ತೆರೆದ ಪುಸ್ತಕ ಪರೀಕ್ಷೆ ನಡೆಸಲು ಮುಕ್ತ ವಿವಿ ಆದೇಶ ಹೊರಡಿಸಿದೆ.
ಪರೀಕ್ಷೆ ಎದುರಿಸಲಿದ್ದಾರೆ 12 ಸಾವಿರ ವಿದ್ಯಾರ್ಥಿಗಳು
2019-20ರ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 12 ಸಾವಿರ ವಿದ್ಯಾರ್ಥಿಗಳು ಈ ವಿನೂತನ ಪದ್ಧತಿಯಲ್ಲಿ ಪರೀಕ್ಷೆ ಎದುರಿಸಲಿದ್ದಾರೆ. ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಗಳಲ್ಲಿ ನೀಡಿರುವ ನಿಯಮಗಳ ಸೂಚನೆ ಅನುಸಾರ ಎ4 ಅಳತೆಯ ಹಾಳೆಯಲ್ಲಿ ಉತ್ತರಗಳನ್ನು ಹುಡುಕಿ ಕೈಬರಹದಲ್ಲಿ ಬರೆದ ಎಲ್ಲ ಉತ್ತರ ಪತ್ರಿಕೆಗಳನ್ನು ವಿವಿಯ ಪರೀಕ್ಷಾಂಗ ವಿಭಾಗಕ್ಕೆ ಅಂಚೆ ಮೂಲಕ ಕಳಿಸಿಕೊಡಬೇಕು. ನಂತರ ಪರೀಕ್ಷಾಂಗ ವಿಭಾಗ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿ ಅಂಕಗಳನ್ನು ನೀಡಲಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಹಾಗೂ ಯುಜಿಸಿಯ ಆದೇಶದನ್ವಯ ಮುಕ್ತ ವಿಶ್ವ ವಿದ್ಯಾಲಯದ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೊರೊನಾ ಹರಡುವುದನ್ನು ತಡೆಗಟ್ಟಲು ಈ ಬಾರಿ ತೆರೆದ ಪುಸ್ತಕದ ಪರೀಕ್ಷೆ ನಡೆಸಲಾಗುತ್ತಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಈ ಪರೀಕ್ಷಾ ಪದ್ಧತಿ
ಈ ಕುರಿತು ಮಾಹಿತಿ ನೀಡಿದ ಕರಾಮುವಿವಿ ಪತ್ರಿಕೋದ್ಯಮ ಡೀನ್ ಡಾ.ತೇಜಸ್ವಿ ನವಿಲೂರು ಅವರು, ಇದರಿಂದ ವಿದ್ಯಾರ್ಥಿಗಳು ತಾವಿರುವ ಸ್ಥಳದಲ್ಲಿ ವಿಶ್ವವಿದ್ಯಾನಿಲಯ ನೀಡುವ ಪ್ರಶ್ನೆಗಳಿಗೆ ಉತ್ತರ ನೀಡಿ ಪರೀಕ್ಷೆ ಬರೆಯಬಹುದಾಗಿದೆ. ಮುಕ್ತ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸೇರಿದಂತೆ ಹಿರಿಯ ನಾಗರಿಕರು ಸಹ ಪರೀಕ್ಷೆ ಬರೆಯುವುದರಿಂದ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿವಿಯ ನಿಮಗಳನುಸಾರ ಪರೀಕ್ಷೆ
ಮುಕ್ತ ವಿಶ್ವವಿದ್ಯಾನಿಲಯದ ಅಂತಿಮ ವರ್ಷದ ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದ ವಿದ್ಯಾರ್ಥಿಗಳಿಗೆ ಅವರು ಸ್ಥಳದಲ್ಲೇ ತೆರೆದ ಪುಸ್ತಕದ ಮುಖಾಂತರ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ. ವಿವಿಯ ನಿಯಮಗಳನುಸಾರ ವೆಬ್ಸೈಟ್ನಲ್ಲಿ ವಿದ್ಯಾರ್ಥಿಗಳು ತೆಗೆದುಕೊಂಡಿರುವ ಪಠ್ಯಗಳ ಅನುಸಾರ ಪ್ರಶ್ನೆಗಳನ್ನು ನಮೂದಿಸಲಾಗುತ್ತದೆ. ವಿದ್ಯಾರ್ಥಿಗಳು ಬಿಳಿ ಹಾಳೆಯಲ್ಲಿ ಉತ್ತರ ಬರೆದು ಅಂಚೆ ಮೂಲಕ ಕಳಿಸಿಕೊಡಬೇಕಾಗಿದೆ ಎಂದೂ ಅವರು ಹೇಳಿದರು.