ಮೈಸೂರಿನ ಜುಬಿಲಿಯಂಟ್ ಪುನರಾರಂಭಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ
ಮೈಸೂರು, ಮೇ 21: ಮೈಸೂರು ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗಲು ಮುಖ್ಯ ಕಾರಣವಾಗಿದ್ದ ನಂಜನಗೂಡಿನಲ್ಲಿರುವ ಜುಬಿಲಿಯಂಟ್ ಔಷಧಿ ಕಾರ್ಖಾನೆ ಪುನರ್ ಆರಂಭಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಜಗತ್ತನ್ನೇ ತಲ್ಲಣಗೊಳಿಸಿರುವ ಕೋವಿಡ್-19 ಗೆ ಔಷಧಿ ಅಮೆರಿಕದ ಕಂಪನಿ ಸಿದ್ದಪಡಿಸಿರುವ ರೆಮ್ಡೆ ಸಿವಿರ್ ಔಷಧಿಯನ್ನು ತಯಾರಿಸಲು ಜುಬಿಲಿಯಂಟ್ ಕಾರ್ಖಾನೆ ಅನುಮತಿ ಪಡೆದುಕೊಂಡಿದೆ.
ವಾಣಿಜ್ಯ, ಕೈಗಾರಿಕಾ ಇಲಾಖೆಯ ಸಭೆ: ಜುಬಿಲಿಯೆಂಟ್ ಕಾರ್ಖಾನೆ ತೆರೆಯಲು ಅನುಮತಿ
ಜುಬಿಲಿಯಂಟ್ ಕಂಪನಿಯಲ್ಲಿ ತಯಾರಾಗುವ ಔಷಧಿಗಳಿಗೆ ದೇಶ-ವಿದೇಶಗಳಿಂದ ವ್ಯಾಪಕ ಬೇಡಿಕೆ ಇರುವುದರಿಂದ ಘಟಕವನ್ನು ಮತ್ತೆ ಆರಂಭಿಸಲು ಅನುಮತಿ ನೀಡಬೇಕು. ಕಾರ್ಖಾನೆಯಲ್ಲಿ ಜೀವ ರಕ್ಷಕವಾಗಿರುವ ಅಝಿಥ್ರೊಮೈಸಿನ್, ಲೋರ್ಸಾತನ್, ವಲ್ಸತ್ರಾನ್, ಇಬ್ರೆಸ್ರಾತನ್, ಕಾರ್ಬಮಜೆಪೈನ್ ಜೊತೆಗೆ ಕೋವಿಡ್-19 ಚಿಕಿತ್ಸೆಗೆ ಬಳಸುವ ಅಝಿಥ್ರೊಮೈಸಿನ್ ಡೈಹೈಡ್ರೇಟ್ ಮತ್ತು ಅಝಿಥ್ರೊಮೈಸಿನ್ ಮೊನೊಹೈಡ್ರೇಟ್ ಔಷಧಿಗಳನ್ನು ತಯಾರಿಸಲಾಗುತ್ತಿದೆ ಎಂದು ಕಂಪನಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿತ್ತು. ಇದಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದೆ.
ಘಟಕ ಪುನರಾರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೋಂಕು ನಿವಾರಕಗಳನ್ನು ಬಳಸಿ ಸ್ವಚ್ಛ ಮಾಡಲಾಗಿದೆ. ಸರ್ಕಾರ ಸೂಚಿಸಿರುವ ಮಾರ್ಗಸೂಚಿಯನ್ನು ಚಾಚೂ ತಪ್ಪದೆ ಪಾಲಿಸಲಾಗುತ್ತಿದೆ ಎಂದು ನಂಜನಗೂಡಿನ ಜುಬಿಲಿಯಂಟ್ ಕಂಪನಿ ತಿಳಿಸಿದೆ.