ಮೈಸೂರಲ್ಲಿ ಮತ್ತೆ ಪ್ರತ್ಯೇಕ ರಾಜ್ಯದ ಮಾತನಾಡಿದ ಉಮೇಶ್ ಕತ್ತಿ!
ಮೈಸೂರು, ಜೂನ್ 30: "ಅಭಿವೃದ್ಧಿ ವಿಚಾರವಾಗಿ ಕರ್ನಾಟಕ ಎರಡು ಪ್ರತ್ಯೇಕ ರಾಜ್ಯವಾಗಬೇಕು" ಎನ್ನುವ ಮೂಲಕ ಅರಣ್ಯ ಸಚಿವ ಉಮೇಶ್ ಕತ್ತಿ ಮತ್ತೆ ಪ್ರತ್ಯೇಕ ರಾಜ್ಯದ ಬಗ್ಗೆ ಧ್ವನಿ ಎತ್ತಿದ್ದಾರೆ. ಆಂಧ್ರ ಪ್ರದೇಶ, ತೆಲಂಗಾಣದಂತೆ ನಮ್ಮ ರಾಜ್ಯವೂ ಇಬ್ಬಾಗವಾಗಬೇಕು ಎಂದು ತಿಳಿಸಿದ್ದಾರೆ.
ಎರಡು ವಾರಗಳ ಹಿಂದೆಯಷ್ಟೇ ಬೆಳಗಾವಿಯಲ್ಲಿ ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡಿದ್ದ ಕತ್ತಿ ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಹಲವರು ರಾಜ್ಯಗಳನ್ನು ವಿಭಜಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದರು.
ಸಚಿವ ಉಮೇಶ್ ಕತ್ತಿಯಿಂದ ಕರ್ನಾಟಕ ಇಬ್ಭಾಗದ ಹೇಳಿಕೆ: ಸಾಫ್ಟ್ ಉತ್ತರ ಕೊಟ್ಟ ಸಿಎಂ
ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿ ಮಾತನಾಡಿದ ಅವರು, "ದೇಶದಲ್ಲಿ 28 ರಾಜ್ಯಗಳಿವೆ, ಈ ಪೈಕಿ 50 ರಾಜ್ಯಗಳಿಗೆ ಏರಿಕೆ ಮಾಡಿವ ಪ್ರಸ್ತಾವವು ಇದೆ. ಕರ್ನಾಟಕ ಜನಸಂಖ್ಯೆ ಕೂಡ ದುಪ್ಪಟ್ಟಾಗಿದೆ. ಅಭಿವೃದ್ಧಿ ದೃಷ್ಟಿಯಲ್ಲಿ ಪ್ರತ್ಯೇಕ ರಾಜ್ಯವಾಗಬೇಕು. ಜನರೂ ಕೂಡ ಪ್ರತ್ಯೇಕ ಜನರನ್ನೂ ಬಯಸುತ್ತಿದ್ದಾರೆ. ಪ್ರತ್ಯೇಕ ರಾಜ್ಯವಾದರೆ ಅಭಿವೃದ್ಧಿಗೂ ವೇಗ ಸಿಗಲಿದೆ" ಎಂದು ಹೇಳಿದರು.
"ಉತ್ತರ ಪ್ರದೇಶದಲ್ಲಿ 21 ಕೋಟಿ ಜನಸಂಖ್ಯೆ ಇದ್ದು, 4 ರಾಜ್ಯವಾಗಬೇಕು. ಮಹಾರಾಷ್ಟ್ರದಲ್ಲಿ 11 ಕೋಟಿ ಜನಸಂಖ್ಯೆ ಇದ್ದು ಅದನ್ನು 3 ರಾಜ್ಯಗಳನ್ನಾಗಿ ಮಾಡಬೇಕು. ಅದರಂತೆ ಕರ್ನಾಟಕದಲ್ಲಿ ಆರುವರೆ ಕೋಟಿ ಜನಸಂಖ್ಯೆ ಇದೆ. ಈ ಹಿನ್ನೆಲೆಯಲ್ಲಿ ಎರಡು ರಾಜ್ಯಗಳಾಗಿ ವಿಂಗಡಣೆ ಆಗಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ" ಎಂದು ಹೇಳಿದ್ದಾರೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ; ಉಮೇಶ್ ಕತ್ತಿ ಹೇಳಿಕೆಗೆ ಕಸಾಪ ಕಿಡಿ
ಅಭಿವೃದ್ಧಿ ದೃಷ್ಟಿಯಿಂದ ಪ್ರತ್ಯೇಕ ರಾಜ್ಯ
"ಅಭಿವೃದ್ಧಿ ದೃಷ್ಟಿಯಿಂದ ಪ್ರತ್ಯೇಕ ರಾಜ್ಯವಾಗಬೇಕು ಎಂದು ಕೇಳುತ್ತಿದ್ದೇನೆ. ನಾನು 9 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಆದರೆ ಪ್ರತ್ಯೇಕ ರಾಜ್ಯ ಸಿಎಂ ಆಗೇಬೇಕೆಂದು ನಾನು ಕೇಳುತ್ತಿಲ್ಲ. ನನಗೆ ಅಖಂಡ ಕರ್ನಾಟಕದ ಸಿಎಂ ಆಗಬೇಕೆಂಬ ಬಯಕೆಯಿದೆ. ಪ್ರತ್ಯೇಕ ರಾಜ್ಯವಾದರೂ ನಾನೂ ಬಿಜೆಪಿಯಲ್ಲಿಯೇ ಇರುತ್ತೇನೆ. ಬಿಜೆಪಿಯಲ್ಲಿದ್ದುಕೊಂಡು ಮುಖ್ಯಮಂತ್ರಿ ಆಗುವ ಅರ್ಹತೆ ನನಗಿದೆ. ಅಭಿವೃದ್ಧಿ ದೃಷ್ಟಿಯಿಂದ ನಮ್ಮ ರಾಜ್ಯ ಆಂಧ್ರ ಪ್ರದೇಶ ಮತ್ತು ತೆಲಂಗಾಣದಂತೆ ಎರಡು ಪ್ರತ್ಯೇಕ ರಾಜ್ಯವಾಗಬೇಕು. ಕರ್ನಾಟಕ ಎರಡು ಭಾಗವಾದರೂ ನಾವು ಕನ್ನಡಿಗರೇ. ನಾವು ಕೂಡಾ ಕನ್ನಡ ಭಾಷೆಯನ್ನೇ ಮಾತನಾಡುತ್ತೇವೆ. ನಾವು ಅಚಲ ಕನ್ನಡಿಗರು" ಎಂದು ಹೇಳಿದರು.
ಪ್ರಧಾನಿ ಜೊತೆ ಪ್ರತ್ಯೇಕ ರಾಜ್ಯದ ಬಗ್ಗೆ ಚರ್ಚೆ
"ನಮ್ಮ ಭಾಗದ ಶಾಸಕರಲ್ಲಿ ನಾನು ಹಿರಿಯನಾಗಿದ್ದೇನೆ. ಹಾಗಾಗಿ ಪ್ರತ್ಯೇಕ ರಾಜ್ಯದ ಬಗ್ಗೆ ಮೊದಲಿಗನಾಗಿ ಧ್ವನಿ ಎತ್ತುತ್ತಿದ್ದೇನೆ. ಹೈಕಮಾಂಡ್ ಮಟ್ಟದಲ್ಲೂ ಹೊಸ ರಾಜ್ಯಗಳ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂಬುದು ನನ್ನ ಅನಿಸಿಕೆ. ನಾನು ಮಾತನಾಡಿದರೆ ಅದು, ಕೇಂದ್ರ ಮಟ್ಟಕ್ಕೆ ಹೋಗುತ್ತದೆ. ಈ ವಿಚಾರವಾಗಿ ನಾನು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರದ ಮಂತ್ರಿಗಳನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ" ಎಂದು ಹೇಳಿದ್ದರು.
ಬೆಳಗಾವಿ ಗಡಿ ಸಮಸ್ಯೆಗೂ ಪರಿಹಾರ
"ರಾಜಧಾನಿ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿದೆ. ದೊಡ್ಡ ರಾಜ್ಯ, ಜನಸಂಖ್ಯೆ ಹೆಚ್ವಿರುವಾಗ ಇಂತಹ ಹಲವಾರು ಸಮಸ್ಯೆಗಳು ಇದ್ದೇ ಇರುತ್ತವೆ. ಹಾಗಾಗಿ ನಾನು ರಾಜ್ಯ ಎರಡು ಭಾಗವಾಗಬೇಕೆಂದು ನಾನು ಒತ್ತಾಯಿಸುತ್ತಿದ್ದೇನೆ. ನೀರಿನ ಬಳಕೆ, ಗಡಿ ಸಮಸ್ಯೆಗಳಿಗೂ ಇದೇ ಪರಿಹಾರ. ಚಿಕ್ಕ ರಾಜ್ಯಗಳಾದರೆ ಇಂತಹ ಸಮಸ್ಯೆ ಇರುವುದಿಲ್ಲ. ಬೆಳಗಾವಿ ಗಡಿ ಸಮಸ್ಯೆಗೆ ಪ್ರತ್ಯೇಕ ರಾಜ್ಯವೇ ಪರಿಹಾರವಾಗಿದೆ" ಎಂದು ಕತ್ತಿ ಹೇಳಿದ್ದಾರೆ.
ಜಿಲ್ಲೆಗೊಂದು ಮೃಗಾಲಯಕ್ಕೆ ಚಿಂತನೆ
"ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಮೃಗಾಲಯಗಳನ್ನು ಸ್ಥಾಪಿಸುವ ಬಗ್ಗೆ ಚಿಂತನೆ ನಡೆಸಿದ್ದೇವೆ. ಇದಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲೂ ಜಾಗವನ್ನು ಗುರುತಿಸಿದ್ದೇವೆ. ರಾಜ್ಯದ ಈ ಪ್ರಸ್ತಾಪವನ್ನು ಕೇಂದ್ರಕ್ಕೆ ಕಳುಹಿಸುತ್ತೇವೆ. ಕೇಂದ್ರದ ಅನುಮತಿ ಬಂದ ಮೇಲೆ ಈ ಕಾರ್ಯ ಆರಂಭವಾಗಲಿದೆ" ಸಚಿವರು ಹೇಳಿದರು.
ಮೈಸೂರು ಮೃಗಾಲಯ ಬಹಳ ಅಚ್ಚುಕಟ್ಟಾಗಿರುವ ಮಾದರಿ ಮೃಗಾಲಯವಾಗಿದೆ. ನಿರ್ಮಾಣ ಹಂತದಲ್ಲಿರುವ ಗೊರಿಲ್ಲಾ ಗ್ಯಾಲರಿ, ಮೃಗಾಲಯದ ಉಗ್ರಾಣ, ಪಾಕಶಾಲೆ, ಆಸ್ಪತ್ರೆಯನ್ನು ಸಚಿವರು ವೀಕ್ಷಣೆ ಮಾಡಿ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು. ನಂತರ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
Recommended Video