ಮೈಸೂರು: ಬಾರ್ ತೆರೆಯಲು ಕರವೇ ವಿರೋಧ
ಮೈಸೂರು, ನವೆಂಬರ್ 18: ಮೈಸೂರು ತಾಲೂಕು ನಾಗನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕೃಷಿ ವಿಶ್ವವಿದ್ಯಾಲಯದ ರೈತ ತರಬೇತಿ ಕೇಂದ್ರದ ಪಕ್ಕದಲ್ಲಿ ಮದ್ಯದ ಬಾರ್ ತೆರೆಯಲು ಮುಂದಾಗಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿತು.
ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬುಧವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ, ನಾಗನಹಳ್ಳಿ ಕೃಷಿ ಸಂಶೋಧನಾ ಕೇಂದ್ರವು ಕೃಷಿ ವಿವಿಯ ಒಂದು ಅಂಗಸಂಸ್ಥೆಯಾಗಿದ್ದು, 1917 ರಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದರ್ಶಿತ್ವದ ಫಲವಾಗಿ ಸ್ಥಾಪನೆಗೊಂಡು 2017 ರಲ್ಲಿ ಶತಮಾನೋತ್ಸವ ಆಚರಿಸಿಕೊಂಡಿದೆ.
ನ.20ರಿಂದ ಡಿ.6ರವರೆಗೆ ಮೈಸೂರಿನಲ್ಲಿ ವಿಶೇಷ ಕೈಮಗ್ಗ ಉತ್ಪನ್ನಗಳ ಮೇಳ
ಈ ಶತಮಾನದ ಅವಧಿಯಲ್ಲಿ ಸುಮಾರು 25ಕ್ಕೂ ಹೆಚ್ಚಿನ ಭತ್ತದ ತಳಿಗಳು, ನಾಲ್ಕು ಮುಸುಕಿನ ಜೋಳದ ತಳಿಗಳು, ಹಾಗೂ ವಿವಿಧ ಬೆಳೆಗಳಲ್ಲಿ ತಾಂತ್ರಿಕತೆಗಳನ್ನು ನೀಡಿದ ಹೆಗ್ಗಳಿಕೆಯನ್ನು ಹೊಂದಿದೆ. ಈ ಸಂಶೋಧನಾ ಕೇಂದ್ರವನ್ನು 2005ರ ಮೇ ನಲ್ಲಿ ಸರ್ಕಾರದ ಆದೇಶದಂತೆ ಸಾವಯವ ಕೃಷಿ ಸಂಶೋಧನಾ ಕೇಂದ್ರವಾಗಿ ಮಾರ್ಪಟ್ಟಿದ್ದು, ಕರ್ನಾಟಕ ರಾಜ್ಯದಲ್ಲಿಯೇ ಒಂದೇ ಒಂದು ಸಾವಯವ ಕೃಷಿ ಸಂಶೋಧನಾ ಕೇಂದ್ರವಾಗಿ ಸಂಶೋಧನಾ ತರಬೇತಿಯನ್ನು ಸತತವಾಗಿ ನೀಡುತ್ತಿದೆ.
ಇಂತಹ ಐತಿಹಾಸಿಕ ಇತಿಹಾಸವನ್ನು ಹೊಂದಿರುವ ಈ ಸಂಸ್ಥೆಗೆ ದೇಶದ ವಿವಿಧ ಭಾಗಗಳಿಂದ ರೈತರು, ರೈತ ಮಹಿಳೆಯರು, ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ವಿದೇಶಗಳಿಂದ ವಿಜ್ಞಾನಿಗಳು ಪ್ರಾತ್ಯಕ್ಷಿಕೆಗಳ ಪ್ರಯೋಗಗಳ ವೀಕ್ಷಣೆಗಾಗಿ ಆಗಮಿಸುತ್ತಾರೆ. ಸಾವಯವ ಕೃಷಿ ಸಂಶೋಧನಾ ಕೇಂದ್ರವು ಮೈಸೂರು-ಬೆಂಗಳೂರು ಹೆದ್ದಾರಿಯಿಂದ ಸುಮಾರು 150 ಮೀ. ದೂರದಲ್ಲಿದ್ದು, 60 ಎಕರೆ ವಿಸ್ತೀರ್ಣವನ್ನು ಹೊಂದಿದೆ.
ಈ ಕೇಂದ್ರದ ಸುತ್ತಳತೆ ಸುಮಾರು 2.5 ಕಿಮೀ ಇದೆ. ಮುಂದಿನ ದಿನಗಳಲ್ಲಿ ಸಾವಯವ ಕೃಷಿ ಸಂಶೋಧನಾ ಕೇಂದ್ರವನ್ನು ಕೃಷಿ ಪರಿಸರ ಪ್ರವಾಸಿ ತಾಣವಾಗಿ ನಿರ್ಮಾಣ ಮಾಡಲು ಮುಂದಾಗಿದೆ. ಸದರಿ ಕೃಷಿ ವಿವಿಯ ಎದುರು, 10 ಮೀ. ದೂರದಲ್ಲಿ ಆ ಭಾಗದ ಜಿ.ಪಂ ಸದಸ್ಯ ದಿನೇಶ್ ಎಂಬುವವರ ಮಳಿಗೆಯಲ್ಲಿ ಬಾರ್ ತೆರೆಯಲು ಮುಂದಾಗಿರುವುದು ಗಮನಕ್ಕೆ ಬಂದಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಯಾವುದೇ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಪ್ರಾರ್ಥನಾ ಮಂದಿರಗಳಿಂದ 100 ಮೀಟರ್ ದೂರದಲ್ಲಿ ಬಾರ್ ತೆರೆಯಬಾರದೆಂದು ಸರ್ಕಾರಿ ಆದೇಶವಿದ್ದರೂ, ಈ ಸ್ಥಳದಲ್ಲಿ ಮದ್ಯದಂಗಡಿಯನ್ನು ತೆರೆಯಲು ಮುಂದಾಗಿರುವುದು ವಿಷಾದನೀಯ. ಈ ಎಲ್ಲಾ ವಿಚಾರಗಳನ್ನು ಅಬಕಾರಿ ನಿರೀಕ್ಷಕರಿಗೆ ಹಾಗೂ ಅಬಕಾರಿ ಉಪ ಅಧೀಕ್ಷಕರಿಗೆ ಮತ್ತು ಅಬಕಾರಿ ಜಿಲ್ಲಾ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
ಆದರೂ ಕೂಡ ಯಾವುದನ್ನೂ ಲೆಕ್ಕಿಸದೆ ಬಾರ್ ತೆರೆಯಲು ಮುಂದಾಗಿರುವ ಜಿ.ಪಂ ಸದಸ್ಯ ದಿನೇಶ್ ಪರವಾಗಿ ಅಧಿಕಾರಿಗಳು ಕೆಲಸ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಜೊತೆಗೆ ನಾಗನಹಳ್ಳಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೂಡ ಈ ಎಲ್ಲಾ ಅಧಿಕಾರಿಗಳ ಜೊತೆ ಸೇರಿ ಭ್ರಷ್ಟಾಚಾರ ನಡೆಸಲು ಮುಂದಾಗಿದ್ದಾರೆಂಬ ಅನುಮಾನವಿದ್ದು, ಬಾರ್ ತೆರೆಯುವ ನಿರ್ಧಾರವನ್ನು ಕೂಡಲೇ ಕೈಬಿಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಒತ್ತಾಯಿಸಿದರು.