ಪರಿಷತ್ ಚುನಾವಣೆ: ಮೈಸೂರು ಜೆಡಿಎಸ್ ಅಭ್ಯರ್ಥಿ ಕಿಡ್ನಿ ಮಾರಾಟಗಾರನೇ?
ಮೈಸೂರು, ನ 30: ವಿಧಾನ ಪರಿಷತ್ತಿನ 25 ಕ್ಷೇತ್ರಗಳಿಗೆ ಪ್ರಚಾರದ ಭರಾಟೆ ಜೋರಾಗಿ ನಡೆಯುತ್ತಿದೆ. ಜೊತೆಗೆ, ಇತ್ತೀಚಿನ ಉಪ ಚುನಾವಣೆಯಲ್ಲಿ ನಡೆದಂತೆ ವೈಯಕ್ತಿಕ ಟೀಕೆಯೂ ಹೆಚ್ಚಾಗುತ್ತಿದೆ. ಮೂರು ಪಕ್ಷಗಳಿಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮಾಪ್ತರಿಗೆ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರಿಂದ, ಅಭ್ಯರ್ಥಿಗಳನ್ನು ಗೆಲ್ಲಿಸುವ ಜಬಾಬ್ದಾರಿ ಅವರ ಮೇಲೆ ಹೆಚ್ಚಿದೆ. ಇದಲ್ಲದೇ, ಎಲ್ಲಿ ಜೆಡಿಎಸ್ ಅಭ್ಯರ್ಥಿ ಕಣದಲ್ಲಿ ಇಲ್ಲವೋ ಅಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಲ್ಲಿ ಬಿಎಸ್ವೈ ಮನವಿಯನ್ನು ಮಾಡಿದ್ದಾರೆ.
ನಿಖಿಲ್ ಕುಮಾರಸ್ವಾಮಿಗೆ ಇನ್ನೂ ಮರೆಯಲಾಗದ ಆ 'ವ್ಯವಸ್ಥಿತ ಸಂಚು'
ಒಂದು ಕಡೆ ಜೆಡಿಎಸ್ ಬೆಂಬಲವನ್ನು ಬಿಜೆಪಿ ಬಯಸುತ್ತಿದ್ದರೆ, ಇನ್ನೊಂದು ಕಡೆ, ಜೆಡಿಎಸ್ ಅಭ್ಯರ್ಥಿ ವಿರುದ್ದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಗಂಭೀರ ಆರೋಪವನ್ನು ಮಾಡಿದ್ದಾರೆ. ಇವರ ಈ ಆರೋಪಕ್ಕೆ ಕುಮಾರಸ್ವಾಮಿ ಕಡೆಯಿಂದ ಪ್ರತಿಕ್ರಿಯೆ ಇನ್ನೂ ಬರಬೇಕಷ್ಟೇ..
ಜಿಲ್ಲಾ ಉಸ್ತುವಾರಿಯೂ ಆಗಿರುವ ಎಸ್.ಟಿ.ಸೋಮಶೇಖರ್ ಅವರು ಕಣದಲ್ಲಿ ಇರುವ ಜೆಡಿಎಸ್ ಅಭ್ಯರ್ಥಿ ವಿರುದ್ದ ಟೀಕಾ ಪ್ರಹಾರವನ್ನೇ ನಡೆಸಿದ್ದು, ಅವರೊಬ್ಬ ಕಿಡ್ನಿ ಮಾರಾಟಗಾರ ಎನ್ನುವ ಗುರುತರ ಆರೋಪವನ್ನು ಮಾಡಿದ್ದಾರೆ.
ಕುಮಾರಸ್ವಾಮಿಗೆ ಯಡಿಯೂರಪ್ಪ ದೂರವಾಣಿ ಕರೆ: ಏನಿದು ರಾಜಕೀಯ?
ಕಾಂಗ್ರೆಸ್ ಪಕ್ಷವು ಬಿಜೆಪಿಯ ಯಾವ ಟೀಂ - ಎಚ್ಡಿಕೆ ಲೇವಡಿ
ಕಾಂಗ್ರೆಸ್ ಪಕ್ಷ ಜೆಡಿಎಸ್ ಅನ್ನು ಬಿಜೆಪಿಯ ಬಿಟೀಂ ಎಂದು ಟೀಕಿಸುತ್ತಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಎಚ್.ಡಿ.ಕುಮಾರಸ್ವಾಮಿ, "ಮಂಡ್ಯದಲ್ಲಿ ಸಹಕಾರ ಸಚಿವ ಸೋಮಶೇಖರ್ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಕೊಡಗಿನಲ್ಲಿ ಬಿಜೆಪಿ ಮುಖಂಡನ ಪುತ್ರನಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಹೀಗಾಗಿ, ಕಾಂಗ್ರೆಸ್ ಪಕ್ಷವು ಬಿಜೆಪಿಯ ಯಾವ ಟೀಂ ಎನ್ನುವುದು ಗೊತ್ತಾಗಬೇಕಿದೆ"ಎಂದು ಎಚ್ಡಿಕೆ ಲೇವಡಿ ಮಾಡಿದ್ದರು.
ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ ಒಬ್ಬ ಕಿಡ್ನಿ ಮಾರಾಟಗಾರ
ಬಿಜೆಪಿಯ ಪ್ರಚಾರ ಸಭೆಯಲ್ಲಿ ಮೈಸೂರಿನಲ್ಲಿ ಮಾತನಾಡುತ್ತಿದ್ದ ಎಸ್.ಟಿ.ಸೋಮಶೇಖರ್, "ಮೈಸೂರು - ಚಾಮರಾಜನಗರದ ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ ಒಬ್ಬ ಕಿಡ್ನಿ ಮಾರಾಟಗಾರ. ಅಂತವರಿಗೆ ಟಿಕೆಟ್ ನೀಡುವ ಮೂಲಕ ಜೆಡಿಎಸ್ ರಾಜಕೀಯ ದಿವಾಳಿತನವನ್ನು ತೋರಿದೆ. ಈ ರೀತಿಯ ಹಿನ್ನಲೆಯುಳ್ಳವರು ಜೆಡಿಎಸ್ ನಲ್ಲಿ ಮೈಸೂರು ಭಾಗದಲ್ಲಿ ತುಂಬಾ ಜನ ಸಿಗುತ್ತಾರೆ"ಎನ್ನುವ ಗಂಭೀರ ಆರೋಪವನ್ನು ಸೋಮಶೇಖರ್ ಮಾಡಿದ್ದಾರೆ.
ಎಸ್.ಟಿ.ಸೋಮಶೇಖರ್ ಗುರುತರ ಆರೋಪ
"ಬರೀ ಕಿಡ್ನಿ ಮಾರಾಟ ಒಂದೇ ಅಲ್ಲ, ಮಂಜೇಗೌಡ ವಿರುದ್ದ ಸಾಕಷ್ಟು ಇತರ ಆರೋಪಗಳೂ ಇವೆ. ಒಂದೇ ಜಮೀನನ್ನು ನಾಲ್ಕೈದು ಜನರಿಗೆ ಮಾರಾಟ ಮಾಡಿರುವ ಘನ ಇತಿಹಾಸವೂ ಅವರ ಮೇಲಿದೆ. ಇಂತಹ ಕಿಡ್ನಿ ಮಾರುವ, ಜಮೀನು ವಿಚಾರದಲ್ಲಿ ಜನರಿಗೆ ಮೋಸ ಮಾಡುವ ಅಭ್ಯರ್ಥಿ ಮೈಸೂರು-ಚಾಮರಾಜನಗರ ಜನರಿಗೆ ಬೇಕಾ? ಇಂತಹ ಅಭ್ಯರ್ಥಿ ವಿಧಾನ ಪರಿಷತ್ ಸದಸ್ಯರಾಗಬೇಕಾ" ಎಂದು ಎಸ್.ಟಿ.ಸೋಮಶೇಖರ್ ಪ್ರಶ್ನಿಸಿದ್ದಾರೆ.
ಸಂದೇಶ್ ನಾಗರಾಜ್ ಅವರ ಬೆಂಬಲ ಬಿಜೆಪಿಗೆ ಸಿಗಲಿದೆ
ಮೈಸೂರು - ಚಾಮರಾಜನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ಪರ ಪ್ರಚಾರ ನಡೆಸುತ್ತಾ ಸಚಿವ ಸೋಮಶೇಖರ್, "ಕಾಂಗ್ರೆಸ್ ಪಕ್ಷ ಡಾ. ತಿಮ್ಮಯ್ಯ ಅವರಿಗೆ ಟಿಕೆಟ್ ನೀಡಿದೆ. ಅವರು ಕ್ಷೇತ್ರಕ್ಕೆ ಹೊಸಬರು, ಅವರು ಕ್ಷೇತ್ರಕ್ಕೆ ರೌಂಡ್ ಹಾಕಿ ಬರುವಷ್ಟರಲ್ಲಿ ಚುನಾವಣೆಯೇ ಮುಗಿದಿರುತ್ತದೆ. ಸಂದೇಶ್ ನಾಗರಾಜ್ ಅವರ ಬೆಂಬಲ ಬಿಜೆಪಿಗೆ ಸಿಗಲಿದೆ, ಅವರು ನಮ್ಮ ಪಕ್ಷದ ಪರವಾಗಿ ಪ್ರಚಾರ ನಡೆಸಲಿದ್ದಾರೆ" ಎಂದು ಸೋಮಶೇಖರ್ ಹೇಳಿದ್ದಾರೆ.
Recommended Video