ಮೈಸೂರು ದಸರಾ ಆಚರಣೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಸರ್ಕಾರ
ಮೈಸೂರು, ಅಕ್ಟೋಬರ್ 5: ಸಾಂಸ್ಕೃತಿಕ ನಗರಿಯಲ್ಲಿ ನಾಡಹಬ್ಬ ದಸರೆಯ ಸಂಭ್ರಮ ಮನೆ ಮಾಡಿದ್ದು, ನವವಧುವಿನಂತೆ ಸಿಂಗಾರಗೊಂಡಿರುವ ಮೈಸೂರು ನಗರದಲ್ಲಿ ದಸರೆಯ ಕೊನೆ ಹಂತದ ಸಿದ್ಧತೆಗಳು ಭರದಿಂದ ನಡೆಯುತ್ತಿವೆ.
ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಡಳಿತದಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅ.7ರಂದು ಚಾಮುಂಡಿ ಬೆಟ್ಟದಲ್ಲಿ ನಡೆಯುವ ದಸರಾ ಉದ್ಘಾಟನಾ ಸಮಾರಂಭಕ್ಕೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಈ ನಡುವೆ ದಸರಾ ಹಿನ್ನೆಲೆಯಲ್ಲಿ ಇಂದಿನಿಂದ ಗುರುವಾರ ಮಧ್ಯಾಹ್ನದವರೆಗೆ ಮೈಸೂರಿನ ಪ್ರಮುಖ ಪ್ರವಾಸಿ ತಾಣವಾಗಿರುವ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಅ.6ರ ಮಹಾಲಯ ಅಮಾವಾಸ್ಯೆ ದಿನದಂದು ಬೆಟ್ಟಕ್ಕೆ ಭೇಟಿ ನೀಡುವ ಭಕ್ತಾದಿಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ.
ಅ.5ರಿಂದ ಮೂರು ದಿನ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶ ನಿಷೇಧ
ಹೀಗಾಗಿ ಗುರುವಾರ ದಸರಾ ಉದ್ಘಾಟನೆಗೆ ಪೂರ್ವ ಸಿದ್ಧತೆ ಮತ್ತು ಸಿಎಂ ಭದ್ರತಾ ದೃಷ್ಠಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದ್ದರಿಂದ ಮಂಗಳವಾರ ಬೆಳಗಿನ ಜಾವ 4 ಗಂಟೆಯಿಂದ ಗುರುವಾರ ಮಧ್ಯಾಹ್ನದವರೆಗೆ ನಿರ್ಬಂಧ ಹೇರಲಾಗಿದೆ. ಸರ್ಕಾರಿ ಕೆಲಸ, ಉದ್ಘಾಟನೆಗೆ ಪೂರ್ವ ಸಿದ್ಧತೆಗಾಗಿ ತೆರಳುವ ವಾಹನಗಳು, ಗಣ್ಯವ್ಯಕ್ತಿಗಳು, ಸ್ಥಳೀಯ ಗ್ರಾಮಸ್ಥರ ವಾಹನಗಳಿಗೆ ಮಾತ್ರ ಬೆಟ್ಟಕ್ಕೆ ತೆರಳಲು ಅವಕಾಶ ನೀಡಿ ಮೈಸೂರು ಜಿಲ್ಲಾಡಳಿತದಿಂದ ಆದೇಶ ಹೊರಡಿಸಿದೆ.
ದಸರೆಗೆ ಮಾರ್ಗಸೂಚಿ ಬಿಡುಗಡೆ
ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಪ್ರಮುಖವಾಗಿ ಮೈಸೂರು ದಸರಾ ಹಬ್ಬ ಆಚರಣೆಗೆ ಕೋವಿಡ್ ನಿಯಮಗಳನ್ನು ಅನುಸರಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಅ.7ರಂದು ಚಾಮುಂಡಿ ಬೆಟ್ಟದಲ್ಲಿ ನಡೆಯುವ ದಸರಾ ಉದ್ಘಾಟನಾ ಸಮಾರಂಭಕ್ಕೆ 100 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಜಂಬೂಸವಾರಿಗೆ ಕೇವಲ 500 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಇನ್ನು ದಸರಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುವವರಿಗೆ ಒಂದು ಡೋಸ್ ಲಸಿಕೆ ಪಡೆದಿರುವುದು ಕಡ್ಡಾಯಗೊಳಿಸಲಾಗಿದೆ. ಇಲ್ಲವಾದಲ್ಲಿ ಆರ್ಟಿ-ಪಿಸಿಆರ್ ನೆಗೆಟಿವ್ ವರದಿ ಹೊಂದಿರಬೇಕಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲು ಸರ್ಕಾರ ಮುಂದಾಗಿದ್ದು, ಈ ಎಲ್ಲಾ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಿದೆ. ಒಂದೊಮ್ಮೆ ಮಾರ್ಗಸೂಚಿ ಅನುಸರಿಸುವುದು ತಪ್ಪಿದ್ದಲ್ಲಿ ಕಾನೂನು ಕ್ರಮಕೈಗೊಳ್ಳಲು ಮೈಸೂರು ಜಿಲ್ಲಾಡಳಿತ ಮತ್ತು ಇತರೆ ಆಡಳಿತಗಳಿಗೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಮೇಯರ್ಗಿಲ್ಲ ಕುದುರೆ ಸವಾರಿ ಭಾಗ್ಯ
ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಸರಳ ದಸರಾ ಆಚರಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಪ್ರಥಮ ಪ್ರಜೆಗೆ ಈ ಬಾರಿ ದಸರಾದಲ್ಲಿ ಕುದುರೆ ಸವಾರಿ ಭಾಗ್ಯ ಇಲ್ಲದಂತಾಗಿದೆ. ಪ್ರತಿವರ್ಷವೂ ಜಂಬೂಸವಾರಿಯಲ್ಲಿ ಮೈಸೂರಿನ ಮೇಯರ್ ಕುದುರೆ ಏರಿ ಮೆರವಣಿಗೆಯಲ್ಲಿ ತೆರಳುವುದು ವಾಡಿಕೆಯಾಗಿತ್ತು. ಆದರೆ ಕೋವಿಡ್ ನಿಯಮದಿಂದ ಮೇಯರ್ ಸುನಂದಾ ಪಾಲನೇತ್ರರಿಗೆ ಈ ಅದೃಷ್ಟ ಕೈತಪ್ಪಿದಂತಾಗಿದೆ.
ಅಲ್ಲದೇ ಕಳೆದ ಬಾರಿಯೂ ಸಹ ಸರಳ ದಸರಾ ಹಿನ್ನೆಲೆಯಲ್ಲಿ ಅಂದಿನ ಮೇಯರ್ ಆಗಿದ್ದ ತಸ್ನಿಂ ಅವರಿಗೂ ಈ ಅವಕಾಶ ಸಿಕ್ಕಿರಲಿಲ್ಲ. ಮೈಸೂರಿನ ಪಾಲಿಕೆ ಇತಿಹಾಸದಲ್ಲೇ ಬಿಜೆಪಿ ಮೊದಲ ಬಾರಿಗೆ ಮೇಯರ್ ಸ್ಥಾನ ಪಡೆದಿದ್ದು, ಮೇಯರ್ ಆಗಿರುವ ಸುನಂದಾ ಪಾಲನೇತ್ರರಿಗೆ ಈ ಅವಕಾಶ ಸಿಗದಿರುವುದು ಬೇಸರ ಮೂಡಿಸಿದೆ. ಈ ನಡುವೆ ಅರಮನೆ ಆವರಣದಲ್ಲಾದರೂ ಮೇಯರ್ ಕುದುರೆ ಸವಾರಿಗೆ ಅವಕಾಶ ನೀಡಲು ಕೇಳಲಾಗಿತ್ತು. ಆದರೆ ದಸರಾ ಸಂಪ್ರದಾಯ ಉಳಿಸಿಕೊಳ್ಳಲು ಅಧಿಕಾರಿಗಳು ಸಹ ಮನಸ್ಸು ಮಾಡದ ಹಿನ್ನೆಲೆಯಲ್ಲಿ ಜಂಬೂಸವಾರಿ ಮೆರವಣಿಗೆ ವೇಳೆ ಚಾಮುಂಡಿಶ್ವರಿಗೆ ಪುಷ್ಪಾರ್ಚನೆ ಮಾಡಲು ಮಾತ್ರವೇ ಮೇಯರ್ಗೆ ಅವಕಾಶ ಸಿಗಲಿದೆ.
ರಾಜವಂಶಸ್ಥರಿಗೆ ಆಹ್ವಾನ
ಮೈಸೂರು ದಸರಾ 2021 ಹಿನ್ನೆಲೆಯಲ್ಲಿ ಇಂದು ಜಿಲ್ಲಾಡಳಿತದಿಂದ ರಾಜವಂಶಸ್ಥರಿಗೆ ಅಧಿಕೃತ ಆಹ್ವಾನ ನೀಡಲಾಯಿತು. ಮಂಗಳವಾರ ಮಧ್ಯಾಹ್ನ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ರನ್ನು ಭೇಟಿ ಮಾಡಿದ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹಾಗೂ ಗಣ್ಯರು, ರಾಜವಂಶಸ್ಥರನ್ನು ನಾಡಹಬ್ಬ ದಸರಾ ಮಹೋತ್ಸವಕ್ಕೆ ಬರುವಂತೆ ಕೋರಿ ಅಧಿಕೃತ ಆಹ್ವಾನ ನೀಡಿದರು.
ದಸರಾ ಜಂಬೂಸವಾರಿ ಮೆರವಣಿಗೆಗೆ ದಿನಗಣನೆ ಹಿನ್ನೆಲೆಯಲ್ಲಿ ದಸರಾ ಗಜಪಡೆ ಹಾಗೂ ಅಶ್ವರೋಹಿ ಪಡೆಗೆ ಇಂದು ಎರಡನೇ ಸುತ್ತಿನ ಕುಶಾಲತೋಪು ತಾಲೀಮು ನೀಡಲಾಯಿತು. ಅರಮನೆ ಕೋಟೆ ಮಾರಮ್ಮ ದೇವಾಲಯದ ಆವರಣದಲ್ಲಿ ನಡೆದ ತಾಲೀಮಿನಲ್ಲಿ ಪಾಲ್ಗೊಂಡ ದಸರಾ ಗಜಪಡೆ ಮತ್ತು ಅಶ್ವರೋಹಿ ಪಡೆಗಳಿಗೆ 7 ಫಿರಂಗಿ ಗಾಡಿಗಳಿಂದ 21 ಸುತ್ತು ಸಿಡಿಮದ್ದು ಸಿಡಿಸಿ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ತಾಲೀಮು ನೀಡಿದರು.
Mysuru Dasara 2021- Live links
ಮೈಸೂರು ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭ, ಅರಮನೆ ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಜಂಬೂ ಸವಾರಿ ಕಾರ್ಯಕ್ರಮ ವೆಬ್ಸೈಟ್ನಲ್ಲಿ, ಫೇಸ್ಬುಕ್ನಲ್ಲಿ, ಯೂಟ್ಯೂಬ್ ನಲ್ಲಿ ನೇರಪ್ರಸಾರವಾಗಲಿವೆ. ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ವೆಬ್ಸೈಟ್ www.mysoredasara.gov.in ನಲ್ಲಿ ಪ್ರಕಟಿಸಲಾಗಿದೆ.
ಕಾರ್ಯಕ್ರಮಗಳು
ನಡೆಯುವ
ವೇಳೆ
ನೇರಪ್ರಸಾರವನ್ನು
ಮುಂದಿನ
ಲಿಂಕ್ಗಳಲ್ಲಿ
ನೋಡಬಹುದು.
Facebook
Link.
https://www.facebook.com/mysorevarthe/live/
YouTube
Link
https://tinyurl.com/mysurudasara2021
Website
Link
https://mysoredasara.gov.in/
ದಸರಾ ಕಾರ್ಯಕ್ರಮಗಳನ್ನು ವರ್ಚುವಲ್ ಆಗಿ ವೀಕ್ಷಿಸಲು ಈ ಲಿಂಕ್ ಬಳಸಬಹುದು.