ಬಿಜೆಪಿ ಪ್ರಕಾರ ಹಿಂದುತ್ವ ಎಂದರೆ ತಳವರ್ಗದವರನ್ನು ಅವಮಾನದಿಂದ ಕಾಣುವುದು
ಮೈಸೂರು, ಜೂನ್ 27: ಅರ್ಚಕರ ವೃತ್ತಿಗೆ ಪರಿಶಿಷ್ಟ ಜಾತಿಯವರನ್ನು ನೇಮಿಸುವ ಪ್ರಸ್ತಾವನೆಗೆ ಸರಕಾರ ಅನುಮೋದನೆ ನೀಡದೇ ಇರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಬೇಸರ ವ್ಯಕ್ತ ಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಹದೇವಪ್ಪ, ಹಿಂದೂ ನಾವೆಲ್ಲ ಒಂದು ಎನ್ನುವ ಘೋಷಣೆ ಬಿಜೆಪಿಯವರಿಂದ ಚುನಾವಣೆಯ ವೇಳೆ ಮಾತ್ರ ಬರುತ್ತದೆ ಎಂದು ಲೇವಡಿ ಮಾಡಿದ್ದಾರೆ. ಈ ವಿಚಾರದಲ್ಲಿ ಮಹದೇವಪ್ಪ ಮಾಡಿರುವ ಟ್ವೀಟ್ ಹೀಗಿದೆ.
ಜಾತಿಶ್ರೇಷ್ಠತೆ, ಫ್ಯೂಡಲ್ ರಾಜಕಾರಣ: ಸಿದ್ದರಾಮಯ್ಯನವರ ವಿಷಯದಲ್ಲೂ ಇದೇ ನಡೆಯುತ್ತಿರುವುದು
"ಹಿಂದೂ ನಾವೆಲ್ಲಾ ಒಂದು ಎಂಬ ಘೋಷಣೆಯನ್ನು ಚುನಾವಣೆಯ ವೇಳೆ ಹೇಳುವಂತಹ @BJP4Karnataka ಅರ್ಚಕರ ವೃತ್ತಿಗೆ ಪರಿಶಿಷ್ಟ ಜಾತಿಯ ಜನರನ್ನು ನೇಮಕ ಮಾಡುವ ಪ್ರಸ್ತಾಪವನ್ನೇ ಒಪ್ಪಿಕೊಳ್ಳಲು ಸಿದ್ಧರಿಲ್ಲ"ಎಂದು ಮಹದೇವಪ್ಪ ಟ್ವೀಟ್ ಮಾಡಿದ್ದಾರೆ.
"ಅಲ್ಲಿಗೂ ಬಾಬಾ ಸಾಹೇಬರು ಹೇಳಿದಂತೆ ಅರ್ಚಕರಾಗಿ ಸೇವೆ ಸಲ್ಲಿಸುವುದು ಶೋಷಿತ ವರ್ಗಗಳ ಗುರಿಯಾಗಬಾರದು ಬದಲಿಗೆ ಅಕ್ಷರ ಜ್ಞಾನವೇ ಅವರ ವಿಮೋಚನೆಯ ಮಾರ್ಗವಾಗಬೇಕಿರುವುದು ಎಲ್ಲಾ ಕಾಲಕ್ಕೂ ಸಲ್ಲುವ ಮಾತು. ಕಾರಣ ಶಾಸ್ತ್ರದ ಹೆಸರಲ್ಲಿ ಶೋಷಣೆ ಮಾಡುವುದನ್ನೇ ಈಗ ಬಹಳಷ್ಟು ಮಂದಿ ಮಾಡುತ್ತಿರುವುದು".
"ಆದರೂ ಕೂಡಾ ಸಮಾನ ಅವಕಾಶಗಳ ದೃಷ್ಟಿಯಿಂದ ನೋಡಿದಾಗ ಈಗಲೂ ಕೂಡಾ ಹಿಂದುತ್ವದ ಹೆಸರಿನಲ್ಲಿ ಮನುವಾದ ಮತ್ತು ಅಸಮಾನತೆಯನ್ನೇ ಮುನ್ನಲೆಗೆ ತರುತ್ತಿರುವ ಬಿಜೆಪಿಗರ ಪ್ರಕಾರ ಹಿಂದುತ್ವ ಎಂದರೆ ತಳವರ್ಗದ ಜನರನ್ನು ಅವಮಾನದಿಂದ ಕಾಣುವುದು.
"ಮತ್ತು ಅವರನ್ನು ಅವಕಾಶ ವಂಚಿತರಾಗಿಸಿ ಅವರನ್ನು ಧರ್ಮದ ಹೆಸರಲ್ಲಿ ಶೋಷಣೆಗೆ ನೂಕುವುದೇ ಆಗಿದೆ"ಎಂದು ಮಹದೇವಪ್ಪ ಟ್ವೀಟ್ ಮೂಲಕ ಬೇಸರ ವ್ಯಕ್ತ ಪಡಿಸಿದ್ದಾರೆ.