ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲ: ಎಚ್.ವಿಶ್ವನಾಥ್
ಮೈಸೂರು, ಮೇ 26: ಕೊರೊನಾ ನಿರ್ವಹಣೆ ವಿಚಾರದಲ್ಲಿ ರಾಜ್ಯ ಸರ್ಕಾರದ ಆಡಳಿತ ವೈಖರಿ ಬಗ್ಗೆ ಮತ್ತೆ ಚಾಟಿ ಬೀಸಿರುವ ಬಿಜೆಪಿ ಎಂಎಲ್ಸಿ ಎಚ್.ವಿಶ್ವನಾಥ್, ತೆವಲಿಗೆ ಅಧಿಕಾರ ಉಳಿಸಿಕೊಳ್ಳಲು ಜನರನ್ನು ಬಲಿ ಕೊಡಬೇಡಿ ಎಂದು ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಲಾಕ್ಡೌನ್ ವಿಷಯದಲ್ಲಿ ಸರ್ಕಾರ ತನ್ನದೇ ದಾರಿಯಲ್ಲಿ ನಡೆಯುತ್ತಿದೆ. ಇನ್ನು ಜೂನ್ 7ರ ನಂತರವೂ ಲಾಕ್ಡೌನ್ ಮುಂದುವರಿಸುವ ಬಗ್ಗೆ ಕೆಲವು ಸಚಿವರು ಹೇಳಿಕೆ ನೀಡಿದ್ದು, ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಎಚ್.ವಿಶ್ವನಾಥ್, ಇದು ಸರಿಯಲ್ಲ, ಸರ್ಕಾರ ಪ್ಯಾಕೇಜ್ ಸಹ ಕೊಟ್ಟಿಲ್ಲ. ಈಗ ಜನ ಕೊರೊನಾದಿಂದ ಸಾಯುತ್ತಿದ್ದಾರೆ. ಆಮೇಲೆ ಇತರೆ ಸಮಸ್ಯೆಯಿಂದ ಸಾಯುತ್ತಾರೆ ಎಂದು ಹರಿಹಾಯ್ದರು.
ರಾಜ್ಯದಲ್ಲಿ ಕೊರೊನಾದಿಂದ ಹೆಚ್ಚು ಸಾವು
ರಾಜ್ಯದಲ್ಲಿ ಕೊರೊನಾದಿಂದ ಹೆಚ್ಚು ಸಾವು ಸಂಭವಿಸುತ್ತಿದೆ. ಆರೋಗ್ಯ ಇಲಾಖೆಯನ್ನು 5 ಭಾಗ ಮಾಡಿದ್ದೀರಿ. ಇಬ್ಬರನ್ನು ಹಾಸಿಗೆ ಮಂತ್ರಿ ಮಾಡಿದ್ದೀರಿ. ಒಬ್ಬ ಆಕ್ಸಿಜನ್ ಮಂತ್ರಿ ಮಾಡಿದ್ದೀರಿ. ಅದು ಸರಿಯಾಗಿ ಸಿಗುತ್ತಿಲ್ಲ. ಹೀಗಾಗಿ ಹೆಣದ ಮೇಲೆ ಹಣ ಎತ್ತಬೇಡಿ ಎಂದು ತಮ್ಮದೇ ಪಕ್ಷದ ಸರ್ಕಾರಕ್ಕೆ ಎಚ್.ವಿಶ್ವನಾಥ್ ಚಾಟಿ ಬೀಸಿದರು.
ತಜ್ಞರ ಮಾತನ್ನು ಸರ್ಕಾರ ಕೇಳಲೇ ಇಲ್ಲ. ಸಚಿವ ಸಂಪುಟದಲ್ಲಿ ನಿಮ್ಮ ಇಷ್ಟ ಬಂದ ರೀತಿ ತೀರ್ಮಾನ ಮಾಡಿ ಮತ್ತೆ ಲಾಕ್ಡೌನ್ ಮಾಡುವುದಾದರೆ ಪ್ರತಿಯೊಬ್ಬರಿಗೂ 10 ಸಾವಿರ ಕೊಟ್ಟು ಮಾಡಿ. ಕೇವಲ ನಿಮ್ಮ ತೆವಲಿಗೆ ಅಧಿಕಾರ ಉಳಿಸಿಕೊಳ್ಳಲು ಜನರನ್ನು ಬಲಿ ಕೊಡಬೇಡಿ ಎಂದು ಸ್ವಪಕ್ಷದ ಆಡಳಿತ ವೈಖರಿ ವಿರುದ್ಧ ಎಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಕಡಿಮೆ ಬೆಲೆಗೆ ಬೂಮಿ ಮಾರಾಟ
ಇದೇ ವೇಳೆ ಜಿಂದಾಲ್ ಕಂಪನಿಗೆ ಭೂಮಿ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಗುತ್ತಿಗೆ ನವೀಕರಿಸಿ ಮಾರಾಟ ಮಾಡಬೇಡಿ. ನಾಳೆ ಸಚಿವ ಸಂಪುಟ ಸಭೆ ಇದೆ. ಪರಭಾರೆ ತೀರ್ಮಾನ ದೃಢಿಕರಣಕ್ಕೆ ಬರುತ್ತದೆ. ಅಲ್ಲಿ ಅದನ್ನು ದೃಢಿಕರಣ ಮಾಡಬಾರದು. ಒಂದು ಎಕರೆ ಭೂಮಿಗೆ 1 ಕೋಟಿ ಬೆಲೆ ಇದೆ. ಹೀಗಿರುವಾಗ ಕಡಿಮೆ ಬೆಲೆಗೆ ಮಾರಾಟ ಮಾಡಲು ಸರ್ಕಾರ ಹೊರಟಿರುವುದು ಸರಿಯಲ್ಲ ಎಂದು ಹೇಳಿದರು.
ಮಿಸ್ಟರ್ ಸಿದ್ದರಾಮಯ್ಯ ನಿಮ್ಮ ನಿಲುವು ಏನು
ಈ ಹಿಂದೆ ಜಿಂದಾಲ್ ಕಂಪನಿಗೆ ಭೂಮಿ ನೀಡಬಾರದು ಎಂದು ಸಿಎಂ ಯಡಿಯೂರಪ್ಪ ಅಹೋರಾತ್ರಿ ಹೋರಾಟ ಮಾಡಿದ್ದರು. ಇದೀಗ ಅವರೇ ಭೂಮಿ ನೀಡಲು ಮುಂದಾಗಿರುವುದನ್ನು ನೋಡಿದರೆ, ಇಂತಹ ಸರ್ಕಾರ ತಂದಿದ್ದಕ್ಕೆ ವ್ಯಥೆಯಾಗುತ್ತಿದೆ. ಆದರೆ ಯಾವುದೇ ಕಾರಣಕ್ಕೂ ಭೂಮಿ ನೀಡುವುದನ್ನು ಧೃಡಿಕರಿಸಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಇನ್ನೂ ಜಿಂದಾಲ್ಗೆ ಭೂಮಿ ನೀಡುವ ವಿಚಾರದ ಕುರಿತಂತೆ ಮಿಸ್ಟರ್ ಸಿದ್ದರಾಮಯ್ಯ ನಿಮ್ಮ ನಿಲುವು ಏನು? ಕಾಂಗ್ರೆಸ್ ನಿಮ್ಮ ಪಕ್ಷದ ನಿಲುವು ಏನು? ಸಿದ್ದರಾಮಯ್ಯ ಹಾಗೂ ಎಚ್.ಡಿ ಕುಮಾರಸ್ವಾಮಿ ಏಕೆ ಬಾಯಿ ಬಿಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಯಾವ ಮುಲಾಜಿಗೆ ಇದ್ದೀರಾ, ಎಷ್ಟು ಕಿಕ್ಬ್ಯಾಕ್ ತೆಗೆದುಕೊಂಡಿದ್ದೀರಾ ಎಂದು ಪ್ರತಿಪಕ್ಷ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಎಲ್ಲವನ್ನೂ ಬೇರೆಯವರಿಗೆ ಕೊಟ್ಟು ಕುಳಿತ ಬಿಎಸ್ವೈ
ಇದೇ ವೇಳೆ ಮೈಸೂರಿನಲ್ಲಿ ಟಾಸ್ಕ್ಪೋರ್ಸ್ ರಚನೆ ಕುರಿತು ಮಾತನಾಡಿದ ಅವರು, ಇದಕ್ಕೆ ಯಾವುದೇ ಮಹತ್ವ ಇಲ್ಲ. ದಸರಾ ಸಮಿತಿಯಂತೆ ಟಾಸ್ಕ್ ಪೋರ್ಸ್ ಮಾಡಲಾಗಿದೆ. ಇದರಿಂದ ಗೊಂದಲ ಸೃಷ್ಟಿಸಿ ಅಧಿಕಾರಿಗಳ ನಡುವೆ ಜಗಳ ತಂದು ಹಾಕುತ್ತಿದ್ದೀರಾ. ಪಾಲಿಕೆ ಆಯುಕ್ತರ ಹೆಗಲ ಮೇಲೆ ಬಂದೂಕು ಇಟ್ಟು ಡಿಸಿಗೆ ಶೂಟ್ ಮಾಡುತ್ತಿದ್ದೀರಾ. ನಿಮ್ಮ ನಿಮ್ಮ ತೀಟೆಗೆ ಕೆಲಸ ಮಾಡುತ್ತಿದ್ದೀರಾ? ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರನ್ನು ಪ್ರಶ್ನಿಸಿದರು.
ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಎಲ್ಲವನ್ನೂ ಬೇರೆಯವರಿಗೆ ಕೊಟ್ಟು ಕುಳಿತಿದ್ದು, ಏನು ಸರಿಯಾಗಿ ಸಿಗುತ್ತಿಲ್ಲ. ಸುಮ್ಮನೇ ಟಾಸ್ಕ್ಪೋರ್ಸ್ ಮಾಡಿದ್ದಾರೆ. ರಾತ್ರಿ ಎಂ.ಜಿ ರಸ್ತೆಯಲ್ಲಿ ರೈತರು ನೂರಾರು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶಕ್ಕೆ ಕೊರೊನಾ ಹಬ್ಬುತ್ತಿದೆ. ನಗರ ಪೊಲೀಸ್ ಆಯುಕ್ತರು, ಪಾಲಿಕೆ ಆಯುಕ್ತರು ಏನು ಮಾಡುತ್ತಿದ್ದಾರೆ ಎಂದು ಎಚ್.ವಿಶ್ವನಾಥ್ ಪ್ರಶ್ನೆ ಮಾಡಿದರು.