ಸಾರಿಗೆ ಮುಷ್ಕರ: ಕೋಡಿಹಳ್ಳಿ ಚಂದ್ರಶೇಖರ್ ವಿರುದ್ದ ರೈತಸಂಘವೇ ತಿರುಗಿಬಿತ್ತು
ಮೈಸೂರು, ಡಿ 14: ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಮುಷ್ಕರ ನಿರತ ಸಾರಿಗೆ ಸಂಸ್ಥೆಯ ನೌಕರರ ದಾರಿ ತಪ್ಪಿಸುತ್ತಿದ್ದಾರೆ ಎಂದು ಒಂದು ದಿನದ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಬೇಸರ ವ್ಯಕ್ತ ಪಡಿಸಿದ್ದರು.
ಈಗ, ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಕೂಡಾ ಕೋಡಿಹಳ್ಳಿ ವಿರುದ್ದ ಕಿಡಿಕಾರಿದ್ದಾರೆ. "ನಾಲ್ಕು ದಿನಗಳ ಕಾಲ ಇಡೀ ರಾಜ್ಯದ ಸಾರ್ವಜನಿಕರು ತೊಂದರೆ ಅನುಭವಿಸಿದ್ದು ಕೋಡಿಹಳ್ಳಿ ಚಂದ್ರಶೇಖರ್ ಅವರಿಂದ" ಎಂದು ನಾಗೇಂದ್ರ ಆರೋಪಿಸಿದ್ದಾರೆ.
ಸಾರಿಗೆ ಮುಷ್ಕರ: ಕೋಡಿಹಳ್ಳಿ ಚಂದ್ರಶೇಖರ್ ಹಿಂದಿರುವ ಆ ಕಾಣದ 'ಕೈ'!
"ಕೋಡಿಹಳ್ಳಿಯವರು ಹಸಿರು ಶಾಲು ಹಾಕಿಕೊಂಡು ರೈತರಿಗೆ ಅವಮಾನ ಮಾಡುತ್ತಿದ್ದಾರೆ. ಸಾರಿಗೆ ಸಂಸ್ಥೆ ನೌಕರರ ಪ್ರತಿಭಟನೆಯಲ್ಲಿ ಇವರಿಗೇನು ಕೆಲಸ. ಇವರಿಗೇನು ಪ್ರಚಾರದ ತೆವಲೇ"ಎಂದು ನಾಗೇಂದ್ರ ಪ್ರಶ್ನಿಸಿದ್ದಾರೆ.
"ಇವರಿಗೆ ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ದೆಹಲಿಗೆ ಹೋಗಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕಿತ್ತು. ಅದು ಬಿಟ್ಟು, ಸಾರಿಗೆ ನೌಕರರ ಮುಷ್ಕರದಲ್ಲಿ ಭಾಗವಹಿಸಿ, ಅದನ್ನೂ ಹಳ್ಳ ಹಿಡಿಸೋಕೆ ನೋಡಿದರು"ಎನ್ನುವ ಆರೋಪವನ್ನು ನಾಗೇಂದ್ರ ಅವರು ಕೋಡಿಹಳ್ಳಿ ವಿರುದ್ದ ಮಾಡಿದ್ದಾರೆ.
"ಸಾರಿಗೆ ವ್ಯವಸ್ಥೆ ಸ್ಥಬ್ದಗೊಂಡರೆ ಅದರಿಂದ ಆಗುವ ತೊಂದರೆಯ ಅರಿವು ಕೋಡಿಹಳ್ಳಿಯವರಿಗೆ ಇದೆಯಾ"ಎಂದು ಪ್ರಶ್ನಿಸಿರುವ ನಾಗೇಂದ್ರ, "ಅವರ ಮಾತು ಕೇಳಿಕೊಂಡು ಹೋದರೆ, ನಿಮ್ಮ ಸಂಘಟನೆ ಹಾಳಾದೀತು"ಎನ್ನುವ ಎಚ್ಚರಿಕೆಯನ್ನು ಸಾರಿಗೆ ನೌಕರರ ಸಂಘಕ್ಕೆ ನಾಗೇಂದ್ರ ನೀಡಿದ್ದಾರೆ.
ಸಾರ್ವಜನಿಕ ವಲಯದಲ್ಲೂ ಕೋಡಿಹಳ್ಳಿ ಚಂದ್ರಶೇಖರ್ ಅವರ ನಿಲುವಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಯಡಿಯೂರಪ್ಪ ಸರಕಾರದ ಸಚಿವರುಗಳು ಕೋಡಿಹಳ್ಳಿ ಚಂದ್ರಶೇಖರ್ ವಿರುದ್ದ ಹರಿಹಾಯ್ದಿದ್ದರು.