ಎಚ್ ಡಿ ಕೋಟೆಯಲ್ಲಿ ಫಲಿಸೀತೇ ಸಿದ್ದರಾಮಯ್ಯ ತಂತ್ರ?
ಮೈಸೂರು, ಏಪ್ರಿಲ್ 23: ಮೈಸೂರು ಜಿಲ್ಲೆಯ ತಾಲೂಕು ಕೇಂದ್ರಗಳ ಪೈಕಿ ಹೆಚ್.ಡಿ.ಕೋಟೆಯನ್ನು ಹಿಂದುಳಿದ ತಾಲೂಕು ಹಣೆಪಟ್ಟಿಯನ್ನು ಕಟ್ಟಿಕೊಂಡು ಬರಲಾಗುತ್ತಿದೆ. ಇಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರು, ಬುಡಕಟ್ಟು ಜನಾಂಗದವರಿದ್ದು, ತಾಲೂಕನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಇದುವರೆಗೆ ಹೇಳಿಕೊಳ್ಳುವ ಕಾರ್ಯಗಳು ಮಾತ್ರ ನಡೆದಿಲ್ಲ.
ಮೈಸೂರು: ಹೆಚ್. ಡಿ ಕೋಟೆ ಜನರ ಬವಣೆ ಕೇಳುವವರಿಲ್ಲ!
ಹಾಗೆಂದು ರಾಜಕಾರಣ ಮಾತ್ರ ಇಲ್ಲಿ ಯಾವತ್ತೂ ಹಿಂದುಳಿದಿಲ್ಲ. ಒಂದಷ್ಟು ನಾಯಕರು ಇಲ್ಲಿಂದಲೇ ತಮ್ಮ ಛಾಪು ಮೂಡಿಸಿದ್ದಾರೆ. ಸಚಿವರೂ ಆಗಿದ್ದಾರೆ. ಆದರೆ ಹಿಂದುಳಿದ ಎಂಬ ಹಣೆಪಟ್ಟಿಯಿಂದ ಬಿಡುಗಡೆ ಮಾಡುವ ಯತ್ನವನ್ನು ಮಾಡುವ ಯತ್ನಗಳಂತು ಆಗಲೇ ಇಲ್ಲ. ಪ್ರತಿ ಚುನಾವಣೆ ಬಂದಾಗಲೂ ಅಭಿವೃದ್ಧಿ ಮಂತ್ರ ಪಠಿಸುವ ನಾಯಕರು ಬಳಿಕ ಮೌನಕ್ಕೆ ಶರಣಾಗುವುದು ಹೊಸದೇನಲ್ಲ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಆದರೆ ಇದುವರೆಗಿನ ಚುನಾವಣೆಗಿಂತ ಈ ಬಾರಿಯ ಚುನಾವಣೆ ಒಂದಷ್ಟು ವಿಶೇಷತೆಯನ್ನು ಹೊಂದಿದೆ. ಅಷ್ಟೇ ಅಲ್ಲ ಜಿದ್ದಾಜಿದ್ದಿಯ ಚುನಾವಣೆಯೂ ಆಗಿರುವುದರಿಂದ ತಾಲೂಕಿನಲ್ಲಿ ಅದರಲ್ಲೂ ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಈ ಸಲದ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಎಲ್ಲ ಸಾಧ್ಯತೆಯೂ ಇದೆ.
ಜೆಡಿಎಸ್ ಗೆ ವಾಲಿದ ಚಿಕ್ಕಣ್ಣ
ಹಾಗೆ ನೋಡಿದರೆ ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ನ ಚಿಕ್ಕಮಾದು ಅವರು ಜಯಭೇರಿ ಭಾರಿಸಿದ್ದರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನಲ್ಲಿ ಒಂದಷ್ಟು ನಾಯಕರಿದ್ದರೂ ಗೆಲ್ಲುವ ಕುದುರೆಯನ್ನೇರುವ ನಾಯಕರ ಕೊರತೆಯಿತ್ತು. ಬದಲಾದ ಪರಿಸ್ಥಿತಿಯಲ್ಲಿ ಶಾಸಕ ಚಿಕ್ಕಮಾದು ಅವರು ನಿಧನರಾದರು. ಅವರ ನಿಧನದ ಬಳಿಕ ಕ್ಷೇತ್ರದಲ್ಲಿ ಒಂದಷ್ಟು ರಾಜಕೀಯ ಬೆಳವಣಿಗೆಗಳು ನಡೆದವು. ಚಿಕ್ಕಮಾದು ಅವರ ಸ್ಥಾನಕ್ಕೆ ಜೆಡಿಎಸ್ ನಲ್ಲಿ ಪೈಪೋಟಿಗಳು ಆರಂಭವಾದವು. ಈ ನಡುವೆ ಚಿಕ್ಕಮಾದು ಅವರ ಪುತ್ರ ಅನಿಲ್ಚಿಕ್ಕಮಾದು ಚಿಕ್ಕವರಾಗಿರುವುದರಿಂದ ಪಕ್ಷದಲ್ಲಿ ಹಿರಿಯ ನಾಯಕರಾದ ಚಿಕ್ಕಣ್ಣರವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡಲು ನಿರ್ಧಾರ ಮಾಡಲಾಯಿತು. ಇದು ಅನಿಲ್ಚಿಕ್ಕಮಾದು ಅವರ ಅಸಮಾಧಾನಕ್ಕೆ ಕಾರಣವಾಯಿತು.
ಹಿಂದುಳಿದ ಕ್ಷೇತ್ರ ಹೆಚ್ಡಿ ಕೋಟೆಯಲ್ಲಿ ಮತದಾರನ ಒಲವು ಯಾರ ಮೇಲಿದೆ ?
ಅನಿಲ್ ಚಿಕ್ಕಮಾದುಗೆ ಕಾಂಗ್ರೆಸ್ ಟಿಕೆಟ್
ಇದನ್ನೇ ತಮ್ಮ ತಂತ್ರಕ್ಕೆ ಬಳಸಿಕೊಂಡ ಸಿಎಂ ಸಿದ್ದರಾಮಯ್ಯ ಅವರು ಅನಿಲ್ ಚಿಕ್ಕಮಾದು ಅವರನ್ನು ಕಾಂಗ್ರೆಸ್ ಗೆ ಸೇರಿಸಿಕೊಳ್ಳುವ ಮೂಲಕ ಮುಂದಿನ ಅಭ್ಯರ್ಥಿ ಅವರೇ ಎಂದು ಘೋಷಿಸಿಬಿಟ್ಟರು! ಇದರ ಹಿಂದೆ ಅನುಕಂಪದ ಮತ ಪಡೆಯುವುದು ಸಿಎಂ ಅವರ ಆಲೋಚನೆಯಾಗಿದೆ. ಆದರೆ ಈ ತೀರ್ಮಾನ ಮೂಲ ಕಾಂಗ್ರೆಸ್ ನ ಕೆಲವು ನಾಯಕರಲ್ಲಿ ಅಸಮಾಧಾನವನ್ನುಂಟು ಮಾಡಿದೆ. ಬೇರೆ ಪಕ್ಷದಿಂದ ಬಂದವರಿಗೆ ಹೀಗೆ ಮಣೆ ಹಾಕುತ್ತಾ ಹೋದರೆ ಪಕ್ಷಕ್ಕಾಗಿ ಇಷ್ಟು ವರ್ಷಗಳಿಂದ ದುಡಿದವರಿಗೆ ಏನು ಸಿಕ್ಕಂತಾಯಿತು ಎಂಬುದು ಹಿರಿಯ ನಾಯಕರ ಪ್ರಶ್ನೆ. ಇದುವರೆಗೆ ಇಲ್ಲಿ ಚುನಾವಣೆಗೆ ನಿಂತು ಸ್ಪರ್ಧಿಸಿದ ನಾಯಕರನ್ನು ಗಮನಿಸಿ ನೋಡಿದರೆ ಅವರಲ್ಲಿ ಹೆಚ್ಚಿನವರು ಕಾಂಗ್ರೆಸ್ ನಿಂದ ಜೆಡಿಎಸ್ ಗೆ, ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಜಿಗಿದವರು. ಮುಖ್ಯಮಂತ್ರಿಗಳೇ ಅನಿಲ್ಚಿಕ್ಕಮಾದು ಅವರೇ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಿಸಿದ ಬಳಿಕ ಅವರಿಗೆ ಎದುರಾಡದೆ ಇತರೆ ನಾಯಕರು ಒಪ್ಪಿಕೊಂಡಿದ್ದಾರೆ.
ಜೆಡಿಎಸ್ ನ ಚಿಕ್ಕಣ್ಣ ಗೆಲ್ಲುತ್ತಾರಾ?
ಜೆಡಿಎಸ್ ನಿಂದ ಚಿಕ್ಕಣ್ಣ ಅವರು ಕಣದಲ್ಲಿದ್ದಾರೆ. 2008ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಗೆಲುವು ಪಡೆದಿದ್ದ ಮಾಜಿ ಶಾಸಕ ಚಿಕ್ಕಣ್ಣ 2013 ರಲ್ಲಿ ಸೋಲು ಕಂಡರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ್ಯೂ ಕೆಲವರ ಮನಸ್ತಾಪದಿಂದ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದರು. ಈ ನಡುವೆ ಜೆಡಿಎಸ್ ಶಾಸಕ ಚಿಕ್ಕಮಾದು ಅವರು ಅನಾರೋಗ್ಯದಿಂದ ನಿಧನರಾದ ಹಿನ್ನಲೆಯಲ್ಲಿ ಜೆಡಿಎಸ್ ನಲ್ಲಿನ ಅಭ್ಯರ್ಥಿಗಳ ಕೊರತೆಯನ್ನು ಗಮನಿಸಿ ಮತ್ತೆ ಜೆಡಿಎಸ್ ಸೇರಿದರು. ಆದರೆ ಟಿಕೆಟ್ ತಮಗೇ ನೀಡುವಂತೆ ಚಿಕ್ಕಮಾದು ಅವರ ಪುತ್ರ ಅನಿಲ್ ಹಠಕ್ಕೆ ಬಿದ್ದಿದ್ದರಿಂದ ಗೊಂದಲ ಏರ್ಪಟ್ಟಿತು. ಇದನ್ನು ಗಮನಿಸಿದ ಸಿಎಂ ಸಿದ್ದರಾಮಯ್ಯ ಅವರು ಅನಿಲ್ ಅವರನ್ನು ಕಾಂಗ್ರೆಸ್ ಗೆ ಕರೆತಂದರು. ಹೀಗಾಗಿ ಚಿಕ್ಕಣ್ಣರವರಿಗೆ ಜೆಡಿಎಸ್ ನಿಂದ ಸ್ಪರ್ಧಿಸುವುದಕ್ಕೆ ಹಾದಿ ಸುಗಮವಾಯಿತು.
ಬಿಜೆಪಿ ಕತೆಯೇನು?
ಬಿಜೆಪಿಯಿಂದ ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಸಿದ್ದರಾಜು ಅವರಿಗೆ ಈ ಬಾರಿ ಟಿಕೆಟ್ ನೀಡಲಾಗಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಅಗ್ರಸ್ಥಾನದಲ್ಲಿದ್ದರೆ, ಕಾಂಗ್ರೆಸ್ ಎರಡನೇ, ಬಿಜೆಪಿ ಮೂರನೇ ಸ್ಥಾನದಲ್ಲಿತ್ತು. ಈ ಬಾರಿ ಕಾಂಗ್ರೆಸ್ನಲ್ಲಿದ್ದವರು ಜೆಡಿಎಸ್ ಗೆ ಬಂದಿದ್ದಾರೆ. ಜೆಡಿಎಸ್ ನಲ್ಲಿದ್ದವರು ಕಾಂಗ್ರೆಸ್ ಗೆ ಹೋಗಿದ್ದಾರೆ. ಹೀಗಾಗಿ ಮತದಾರರು ಯಾರನ್ನು ಕೈಹಿಡಿಯುತ್ತಾರೆ ಎಂಬುದು ನಿಗೂಢವಾಗಿದೆ. ಹೇಗಾದರೂ ಮಾಡಿ ಕಾಂಗ್ರೆಸ್ ಅನ್ನು ಹೆಚ್.ಡಿ.ಕೋಟೆಯಲ್ಲಿ ಅಸ್ಥಿತ್ವಕ್ಕೆ ತರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಯಕೆಯಾಗಿದ್ದು, ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರವನ್ನು ಕೂಡ ನಡೆಸಿದ್ದಾರೆ. ಮೇಲ್ನೋಟದಿಂದ ನೋಡಿದರೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇರುವುದಂತೂ ಸತ್ಯ.