ವರುಣಾದಲ್ಲಿ ಸಿಎಂ ಪುತ್ರನಿಗೆ ವರದಾನವಾದ ಬಿಜೆಪಿ ಹೈಡ್ರಾಮಾ!
ಮೈಸೂರು, ಏಪ್ರಿಲ್ 24 : ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಚಾರದಲ್ಲಿ ನಡೆದ ಹೈಡ್ರಾಮಾದಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗಿದೆ. ತೋಟದಪ್ಪ ಬಸವರಾಜು ಅವರು ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಂಗಳವಾರ ಮಧ್ಯಾಹ್ನ ನಾಮಪತ್ರವನ್ನು ಸಲ್ಲಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಕೆಲವು ದಿನಗಳಿಂದ ವರುಣಾ ಕ್ಷೇತ್ರದತ್ತ ಹೆಚ್ಚಿನ ಕಾಳಜಿ ವಹಿಸಿದ್ದರು. ಪುತ್ರ ಡಾ.ಯತೀಂದ್ರ ಪರ ಪ್ರಚಾರ ಮಾಡುತ್ತಿದ್ದರು. ಆದರೆ, ಬಿಜೆಪಿಯಲ್ಲಿ ನಡೆದ ಬೆಳವಣಿಗೆಗಳ ಬಳಿಕ ಅವರು ನಿಟ್ಟುಸಿರು ಬಿಟ್ಟಿದ್ದಾರೆ.
ವಿಜಯೇಂದ್ರ ಸ್ಪರ್ಧೆ : 'ಐತಿಹಾಸಿಕ' ನಿರ್ಧಾರ ಪ್ರಕಟಿಸಿದ ಪ್ರಕಾಶ್ ಜಾವಡೇಕರ್!
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರು ವರುಣಾದಿಂದ ಬಿಜೆಪಿ ಅಭ್ಯರ್ಥಿ ಎಂಬ ಸುದ್ದಿ ಹಬ್ಬಿದಾಗ ಕ್ಷೇತ್ರದಲ್ಲಿ ಮಿಂಚಿನ ಸಂಚಾರವಾಗಿತ್ತು. ಈ ವೇಳೆ ಹೆಚ್ಚಿನ ಆಸಕ್ತಿ ತೋರಿಸಿದ ಸಿದ್ದರಾಮಯ್ಯ ಅವರು, ಕ್ಷೇತ್ರದ ಹಳ್ಳಿಗಳಿಗೆ ತೆರಳಿ ಜನರನ್ನು ಭೇಟಿ ಮಾಡಿ ಪುತ್ರನನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದ್ದರು.
ಆ ಒಂದು ಕರೆಯಿಂದಾಗಿ ಬಿಎಸ್ವೈ ಪುತ್ರ ವಿಜಯೇಂದ್ರಗೆ ಕೈ ತಪ್ಪಿತು ಟಿಕೆಟ್!
ಆದರೆ, ಈಗ ರಾಜಕೀಯ ಚಿತ್ರಣ ಬದಲಾಗಿದೆ. ಬಿ.ವೈ.ವಿಜಯೇಂದ್ರ ಅವರು ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ. ಡಾ.ಯತೀಂದ್ರ ಅವರ ವಿರುದ್ಧ ತೋಟದಪ್ಪ ಬಸವರಾಜು ಅವರು ಬಿಜೆಪಿ ಅಭ್ಯರ್ಥಿಯಾಗಿದ್ದು, ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಮಂಗಳವಾರ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಯತೀಂದ್ರ ಅವರು ಗೆಲುವು ಗಟ್ಟಿಯಾಗಿದೆ
ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ವರುಣಾ ಕ್ಷೇತ್ರದಲ್ಲಿ ಯತೀಂದ್ರ ಅವರ ಗೆಲುವು ಗಟ್ಟಿಯಾಗಿದೆ. ಅವರ ಮುಂದೆ ಇನ್ನು ಯಾವುದೇ ಅಭ್ಯರ್ಥಿಗಳನ್ನು ನಿಲ್ಲಿಸಿದರೂ ಗೆಲುವು ಕಷ್ಟ ಎಂದು ಕ್ಷೇತ್ರದ ಜನರೇ ಮಾತನಾಡಿಕೊಳ್ಳುತ್ತಿದ್ದಾರೆ.
ಕಳೆದೊಂದು ವರ್ಷದಿಂದ ಕ್ಷೇತ್ರದಲ್ಲೇ ಅಡ್ಡಾಡುತ್ತಿರುವ ಯತೀಂದ್ರ ಅವರು ಪ್ರತಿ ಹಳ್ಳಿಗಳ ಜನರ ಒಡನಾಟವನ್ನು ಹೊಂದಿದ್ದು, ಈಗಾಗಲೇ ಹಲವು ಬಾರಿ ಎಲ್ಲ ಮತದಾರರ ಮನೆಬಾಗಿಲಿಗೆ ಹೋಗಿ ಬಂದಿದ್ದಾರೆ.
ಸಿದ್ದರಾಮಯ್ಯ ಅವರ ಪ್ರಭಾವ
ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಪ್ರಭಾವ ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ. ಇನ್ನು ಅವರ ಪುತ್ರ ಎಂದ ಮೇಲೆ ಯಾವುದೇ ಕಾರಣಕ್ಕೂ ಅವರ ಕೈ ಬಿಡುವ ಮಾತೇ ಇಲ್ಲ.
ಇವತ್ತಿನವರೆಗೂ ಬಿಜೆಪಿಯಲ್ಲಿ ನಡೆದಿರುವ ಬೆಳವಣಿಗೆಯನ್ನು ಗಮನಿಸಿದ ಸಿದ್ದರಾಮಯ್ಯ ಅವರು, 'ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಈ ಬಗ್ಗೆ ಯಾರು ಕೂಡ ಆತಂಕ ಪಡಬೇಕಾಗಿಲ್ಲ ಎಂದಿದ್ದಾರೆ'.
ವರುಣಾ ಕ್ಷೇತ್ರದ ವ್ಯಾಪ್ತಿಯ ಇಮ್ಮಾವು ಗ್ರಾಮದ ಒಕ್ಕಲಿಗ ಸಮುದಾಯದ ಹಿರಿಯ ಜೆಡಿಎಸ್ ಮುಖಂಡ ಶಿವಣ್ಣ ಹಾಗೂ ಬಿಜೆಪಿ ಮುಖಂಡ ದಳಪತಿ ಶಿವಣ್ಣ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ಗೆಲುವಿಗೆ ಸಹಕಾರಿಯಾಗಿದೆ.
ಸಿದ್ದರಾಮಯ್ಯ ಪ್ರಚಾರ
'ಕಳೆದ 10ವರ್ಷಗಳಿಂದ ನನ್ನನ್ನು ಗೆಲ್ಲಿಸುವ ಮೂಲಕ ಕ್ಷೇತ್ರದ ಜನತೆ ಹಾಗೂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಶ್ರಮಿಸಿ ರಾಜ್ಯದ ಮಖ್ಯಮಂತ್ರಿಯಾಗಲು ಅವಕಾಶ ಕೊಟ್ಟಿದ್ದೀರಿ. ನಿಮ್ಮ ಈ ಋಣವನ್ನು ತೀರಿಸಲು ಸಾಧ್ಯವಿಲ್ಲ. ಆದರೂ ನಿಮ್ಮ ಋಣದ ಭಾರವನ್ನು ಕಡಿಮೆ ಮಾಡಿಕೊಳ್ಳಲು ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ದೊರಕುವಂತೆ ಮಾಡಲು ಶ್ರಮಿಸುವುದಾಗಿ' ಸಿದ್ದರಾಮಯ್ಯ ಪ್ರಚಾರ ಮಾಡುತ್ತಿದ್ದಾರೆ.
ವರುಣಾ ಕ್ಷೇತ್ರದ ಹಣಾಹಣಿ
ಕ್ಷೇತ್ರದಲ್ಲಿ ಬಿಜೆಪಿ ನಡೆಸಿದ ಹೈಡ್ರಾಮಾದಿಂದ ಬೇಸತ್ತಿರುವ ಜನ ಮುಂದೆ ಏನು ಮಾಡುತ್ತಾರೆ? ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಿದೆ. ಆದರೆ, ವರುಣಾದಲ್ಲಿನ ಕಾಂಗ್ರೆಸ್ ಆತಂಕ ಸ್ವಲ್ಪ ದೂರವಾದಂತೆ ಭಾಸವಾಗಿದೆ.
ಕಾಂಗ್ರೆಸ್ನಿಂದ ಯತೀಂದ್ರ ಸಿದ್ದರಾಮಯ್ಯ, ಬಿಜೆಪಿಯಿಂದ ತೋಟದಪ್ಪ ಬಸವರಾಜು, ಜೆಡಿಎಸ್ನಿಂದ ಅಭಿಷೇಕ್ ಹುರಿಯಾಳುಗಳು.