ಸಿದ್ದರಾಮಯ್ಯ ಒಬ್ಬ ಮಹಾನ್ ಸುಳ್ಳುಗಾರ : ಶ್ರೀನಿವಾಸ್ ಪ್ರಸಾದ್
ಮೈಸೂರು, ಮೇ 8 : 'ರಾಜ್ಯದ ಮುಖ್ಯಮಂತ್ರಿ ಓರ್ವ ಸುಳ್ಳುಗಾರ. ಅತ್ಯಂತ ಕೆಟ್ಟ ಜಾತಿವಾದಿ ಹಾಗೂ ದಲಿತವಿರೋಧಿ ಸಿದ್ದರಾಮಯ್ಯ ರಾಜ್ಯವನ್ನು ಲೂಟಿ ಹೊಡೆದಿದ್ದಾರೆ' ಎಂದು ದಲಿತ ಮುಖಂಡ ವಿ. ಶ್ರೀನಿವಾಸ ಪ್ರಸಾದ್ ಟೀಕಿಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಶ್ರೀನಿವಾಸ್ ಪ್ರಸಾದ್, 'ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಮಾಡಿದ್ದಕ್ಕೆ ಈಗ ಪಶ್ಚಾತ್ತಾಪವಾಗುತ್ತಿದೆ. ಅತ್ಯಂತ ದಲಿತ ವಿರೋಧಿ ಎಂದರೆ ಸಿದ್ದರಾಮಯ್ಯರೇ. ಅವರು 100% ದಲಿತ ವಿರೋಧಿ. ದಲಿತರನ್ನು ಒಬ್ಬೊಬ್ಬರಾಗಿ ಮುಗಿಸಿದರು. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಮೂಲೆಗುಂಪಾದರು. ಡಾ. ಮಹದೇವಪ್ಪ, ಆಂಜನೇಯ ಅವರಿಗೆ ಸಿದ್ದರಾಮಯ್ಯರ ವಿರುದ್ಧ ಮಾತನಾಡುವ ಶಕ್ತಿ ಇದೆಯಾ. ನನ್ನನ್ನೂ ಕಾಂಗ್ರೆಸ್ನಲ್ಲಿ ಮುಗಿಸಿದರು. ಸಚಿವ ಸಂಪುಟದಿಂದ ನನ್ನನ್ನು ಯಾಕೆ ತೆಗೆದರೆಂದು ಈಗಲೂ ಕಾರಣ ಕೊಟ್ಟಿಲ್ಲ. ನಾನು ಯಾವುದರಲ್ಲಿ ಕಡಿಮೆ ಇದ್ದೆ. ನಿಮಗಿಂತಲೂ ಚೆನ್ನಾಗಿಯೇ ಇದ್ದೆ. ನೀವ್ಯಾಕೆ ನನ್ನನ್ನು ಸಂಪಟದಿಂದ ತೆಗೆದ್ರಿ," ಎಂದು ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಪ್ರಶ್ನಿಸಿದರು.
ಸಿಎಂ ಸಮಾಜವಾದಿಯಲ್ಲ, ಆತನ ಸೋಲಿಸಿಯೇ ಸಿದ್ದ:ಶ್ರೀನಿವಾಸ ಪ್ರಸಾದ್
ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಪ್ರಶ್ನಿಸಿದ ಪ್ರಸಾದ್, ನಾಟಿಕೋಳಿ ಸಾರು, ರಾಗಿಮುದ್ದೆ ತಿನ್ನೋಕೆ ಸಿದ್ದರಾಮಯ್ಯ ಇಲ್ಲಿಗೆ ಬರುತ್ತಿದ್ರು. ಈಗ ಬದಾಮಿಗೆ ಡ್ರೈಫ್ರೂಟ್ಸ್ ತಿನ್ನೋಕೆ ಹೋಗಿದ್ದಾರೆ. ಚಾಮುಂಡೇಶ್ವರಿಯ ಹೆಸರನ್ನು ಅವರು ಇನ್ಮುಂದೆ ಹೇಳುವುದಿಲ್ಲ. ಆ ರೀತಿಯಲ್ಲಿ ಜನರು ಈ ಬಾರಿ ಸಿದ್ದರಾಮಯ್ಯರಿಗೆ ಬುದ್ಧಿ ಕಲಿಸುತ್ತಾರೆ. ಸಿದ್ದರಾಮಯ್ಯರನ್ನು ಸೋಲಿಸುವುದೇ ನನ್ನ ಗುರಿ ಎಂದು ಕಿಡಿಕಾರಿದರು.
ಮಲ್ಲಿಕಾರ್ಜುನ ಖರ್ಗೆ ನಾಯಕರೇನ್ರೀ. ಅವರೊಬ್ಬ ಪಲಾಯನವಾದಿ. 2008ರ ಚುನಾವಣೆಯಲ್ಲಿ ಖರ್ಗೆ ಅವರೇ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಆದರೆ, ನಂತರದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಬಿಟ್ಟು ಕೇಂದ್ರಕ್ಕೆ ಓಡಿ ಹೋದ್ರು. ಸಿದ್ದರಾಮಯ್ಯ ಸಿಎಂ ಆಗುವಾಗ ಶಾಸಕಾಂಗ ಸಭೆಯಲ್ಲಿ ಇದೇ ಖರ್ಗೆ ಕಣ್ಣೀರು ಹಾಕಿದ್ರು. 30-40 ವರ್ಷದಿಂದ ಕಾಂಗ್ರೆಸ್ ಕಟ್ಟಿದ್ದೇವೆ. 2-3 ವರ್ಷಗಳ ಹಿಂದೆ ಬಂದ ಸಿದ್ದರಾಮಯ್ಯ ಸಿಎಂ ಆಗುತ್ತಿದ್ದಾರೆ ಅಂತ ನೀವೇ ಕಣ್ಣೀರು ಹಾಕಲಿಲ್ಲವೇ? ನಿಮಗೆ ಇದೆಲ್ಲಾ ಮರೆತುಹೋಗಿದೆಯಾ ಖರ್ಗೆ? ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ತೊರೆದು ಜೆಡಿಎಸ್ ಸೇರಲಿದ್ದಾರಾ ವಿ. ಶ್ರೀನಿವಾಸ್ ಪ್ರಸಾದ್?
ಬಿಜೆಪಿ ಎಲ್ಲಿಯೂ ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿಲ್ಲ. ಪ್ರಣಾಳಿಕೆಯಲ್ಲೆಲ್ಲೂ ಉಲ್ಲೇಖಿಸಿಲ್ಲ. ರಾಹುಲ್ ಗಾಂಧಿ, ಸಿದ್ದರಾಮಯ್ಯ ಅನಗತ್ಯ ಹೇಳಿಕೆ ನೀಡುತ್ತಿದ್ದಾರೆ. ದಲಿತರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಕೆಲ ಪ್ರಗತಿಪರರನ್ನು ಕಟ್ಟಿಕೊಂಡು ಸಿದ್ದರಾಮಯ್ಯ ಅಪಪ್ರಚಾರ ಮಾಡುತ್ತಿದ್ದಾರೆ. ಭಾರತದ ಸಂವಿಧಾನವನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ ಎಂದರು.