ಮೈಸೂರಿನ 11 ಕ್ಷೇತ್ರಗಳಲ್ಲಿ ಯಾರಿಗೆ ಹಿಟ್ಟಿನ ಮೇಲೆ ಅವರೆಕಾಳ್?
ಮೈಸೂರು, ಮೇ 9 : ಇಡೀ ದೇಶವೇ ಗಮನ ಸೆಳೆದಿರುವ ಸಿಎಂ ತವರು ಜಿಲ್ಲೆ ಎಂದೇ ಖ್ಯಾತಿಯಾಗಿರುವ ಮೈಸೂರು ಈ ಬಾರಿ ಸಾಕಷ್ಟು ಕುತೂಹಲ ಬದಲಾವಣೆಗೆ ಮುನ್ನುಡಿಯಾಗಲಿದೆ. ತಮ್ಮ ತವರಿನಲ್ಲಿ ಗೆಲ್ಲಲೇ ಬೇಕೆಂಬ ಹಠ ಒಂದೆಡೆಯಾದರೇ, ಮತ್ತೊಂದಡೆ ಪ್ರತಿಷ್ಠೆಯ ಕಣ. ಕಾಂಗ್ರೆಸ್ ಗೆ ಸೆಡ್ಡು ಹೊಡೆಯಲು ಹಿಂದಿನಿಂದಲೂ ಪ್ರಾಬಲ್ಯ ಹೊಂದಿರುವ ಜೆಡಿಎಸ್ ಕೂಡ ಇಟ್ಟ ಹೆಜ್ಜೆಯನ್ನು ಮರೆತಿಲ್ಲ.
ಇನ್ನೊಂದೆಡೆ ಬಿಜೆಪಿ - ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದೆ ಎಂಬ ಮಾತುಗಳು ಸಹ ದಟ್ಟವಾಗಿ ಕೇಳಿಬರುತ್ತಿದೆ. ಹೀಗೆ ನಡೆದರೇ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಕಾಂಗ್ರೆಸ್ ಗೆಲುವಿನ ಓಟಕ್ಕೆ ಕಡಿವಾಣ ಹಾಕುವ ಸಾಧ್ಯತೆ ಇದೆ. ಈ ಹಿಂದಿನ ಚುನಾವಣೆಯಲ್ಲಿ ಜಿಲ್ಲೆಯ ಒಟ್ಟು 11 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 7, ಜೆಡಿಎಸ್ 3ರಲ್ಲಿ ಗೆಲುವು ಸಾಧಿಸಿದ್ದವು.
ಎಚ್.ಸಿ.ಮಹದೇವಪ್ಪಗೆ ಸೋಲುಣಿಸಲು ಸಜ್ಜಾದರೆ ಟಿ.ನರಸೀಪುರದ ಜನತೆ?
ಇತ್ತ ಸಂಘಟನೆ ದೃಷ್ಟಿಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಂದಿದ್ದು, ಬಿಜೆಪಿ ಕೆಲ ಕ್ಷೇತ್ರಗಳಲ್ಲಿ ಮಾತ್ರ ಪ್ರಾಬಲ್ಯ ಹೊಂದಿದೆ. ಹಾಗಾದರೆ ಈ ಬಾರಿಯ 11 ಕ್ಷೇತ್ರಗಳಲ್ಲಿ ಯಾವ ಅಭ್ಯರ್ಥಿಗಳ ನಡುವೆ ನೇರಾ ಹಣಾಹಣಿ ಇದೆ ಎಂಬುದರ ಸಂಪೂರ್ಣ ಚಿತ್ರಣ ಇಲ್ಲಿದೆ...
ಚಾಮುಂಡೇಶ್ವರಿ ಕೃಪೆ ಯಾರ ಮೇಲೆ?
ರಾಜ್ಯ ರಾಜಕಾರಣದ ಗಮನ ಸೆಳೆಯುತ್ತಿರುವ ಕ್ಷೇತ್ರ ಚಾಮುಂಡೇಶ್ವರಿ. 1983ರಲ್ಲಿ ಸಿದ್ದರಾಮಯ್ಯ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸಿ ಇಲ್ಲಿ ಗೆಲುವು ಸಾಧಿಸಿದ್ದರು. ಇದು ನನ್ನ ಕೊನೆ ಚುನಾವಣೆ. ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರದಿಂದಲೇ ಚುನಾವಣೆ ಎದುರಿಸುತ್ತೇನೆಂದು ಘೊಷಿಸಿದ ಸಿದ್ದರಾಮಯ್ಯ, ತಮ್ಮ ಸ್ವಕ್ಷೇತ್ರ ವರುಣವನ್ನು ಮಗ ಯತೀಂದ್ರನಿಗೆ ಒಪ್ಪಿಸಿ ಚಾಮುಂಡೇಶ್ವರಿಯಿಂದ ಈ ಬಾರಿ ಕಣಕ್ಕೆ ಇಳಿದಿದ್ದಾರೆ. ಇಲ್ಲಿ ಜೆಡಿಎಸ್ ಅಭ್ಯರ್ಥಿ ಶಾಸಕ ಜಿ.ಟಿ. ದೇವೇಗೌಡ ಹಾಗೂ ಸಿದ್ದರಾಮಯ್ಯ ನಡುವೆ ನೇರ ಹಣಾಹಣಿ ಇದೆ. ಈ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಶೂನ್ಯವಾಗಿದ್ದರೂ ಸಿದ್ದರಾಮಯ್ಯ ಸೋಲಿಸುವ ಗುರಿಯೊಂದೇ ಜೆಡಿಎಸ್ ಗಿದೆ.
ಗ್ರೌಂಡ್ ರಿಪೋರ್ಟ್: ಪಿರಿಯಾಪಟ್ಟಣದಲ್ಲಿ ಮಹದೇವು ಒಂದು ಹೆಜ್ಜೆ ಮುಂದೆ
ಬಣ್ಣ ಮಾಸಿದ ವರುಣಾ ಕಥೆ
ಈ ಹಿಂದೆ ವರುಣದಲ್ಲಿ ಸಿದ್ದರಾಮಯ್ಯ ಸತತ ಎರಡು ಬಾರಿ ಗೆಲುವು ಸಾಧಿಸಿದ್ದರು. ಈಗ ಪುತ್ರ ಡಾ.ಯತೀಂದ್ರಗೆ ಕ್ಷೇತ್ರ ಬಿಟ್ಟುಕೊಟ್ಟು ಚಾಮುಂಡೇಶ್ವರಿ ಮತ್ತು ಬಾದಾಮಿಯಿಂದ ಸ್ಪರ್ಧೆಗೆ ಇಳಿದಿದ್ದಾರೆ. ಕಳೆದ ಕೆಲವು ತಿಂಗಳಿನಿಂದಲೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ಇಲ್ಲಿನ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಹೈಕಮಾಂಡ್ ವಿಜಯೇಂದ್ರಗೆ ಟಿಕೆಟ್ ನಿರಾಕರಿಸಿ ಸಾಮಾನ್ಯ ಕಾರ್ಯಕರ್ತ ತೋಟದಪ್ಪ ಬಸವರಾಜು ಕಣಕ್ಕಿಳಿಸಿದೆ. ಹೀಗಾಗಿ ಪ್ರಬಲ ಪೈಪೋಟಿ ಕಂಡುಬರುತ್ತಿಲ್ಲ. ಸಂಘಟನೆ ಹಾಗೂ ಪ್ರಚಾರದ ದೃಷ್ಟಿಯಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿದ್ದು, ನಂತರದ ಸ್ಥಾನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಇದೆ.
ಕೈ-ಕಮಲ ಫೈಟ್ ಗೆ ಕೃಷ್ಣರಾಜ ಸಾಕ್ಷಿ
ಕೃಷ್ಣರಾಜ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪ್ರಾಬಲ್ಯ ಹೊಂದಿದೆ . ಬ್ರಾಹ್ಮಣರು ಹಾಗೂ ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಇಲ್ಲಿ ಬಿಜೆಪಿ ಅಭ್ಯರ್ಥಿ ರಾಮದಾಸ್ ಮೂರು ಬಾರಿ, ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಎಂ.ಕೆ.ಸೋಮ ಶೇಖರ್ ಎರಡು ಬಾರಿ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿ ನಗರಪಾಲಿಕೆ ಸದಸ್ಯ ಕೆ.ವಿ.ಮಲ್ಲೇಶ್ ಕಣಕ್ಕಿಳಿದಿದ್ದಾರೆ.ಬಿಜೆಪಿ ಪರವಾಗಿ ಹೆಚ್ಚಿನ ಒಲವಿರುವ ಕ್ಷೇತ್ರ ಇದಾಗಿದೆ. ಇಲ್ಲಿ ಕಾಂಗ್ರೆಸ್ ಹಿನ್ನಡೆಗೆ ದಲಿತ ಸಿಎಂ ವಿಚಾರ ಸಾಕಷ್ಟು ಚರ್ಚೆಗೆ ಬಂದಿರುವುದು ಕಾರಣವಾಗಲಿದೆ.
ನರಸಿಂಹರಾಜದಲ್ಲಿ ಧರ್ಮದ ಆಧಾರದ ಮೇಲೆ ತೂಕ
ನರಸಿಂಹರಾಜ ಕ್ಷೇತ್ರದಲ್ಲಿ ಧರ್ಮದ ಆಧಾರದ ಮೇಲೆ ಚುನಾವಣೆ ನಡೆಯುತ್ತದೆ. ಮುಸ್ಲಿಂ ಮತದಾರರಿಗಿಂತ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಹಿಂದುಗಳಿದ್ದರೂ 1994ರಲ್ಲಿ ಬಿಜೆಪಿಯ ಮಾರುತಿರಾವ್ ಪವಾರ್ ಹೊರುತುಪಡಿಸಿದರೆ ಯಾವುದೇ ಹಿಂದು ಅಭ್ಯರ್ಥಿಗಳು ಗೆದ್ದಿಲ್ಲ. ಹಿಂದುಗಳ ಮತ ಹರಿದು ಹಂಚಿ ಹೋಗುತ್ತಿರುವುದೇ ಇದಕ್ಕೆ ಕಾರಣ.
2013ರ ಚುನಾವಣೆಯಲ್ಲಿ ಎಸ್ಡಿಪಿಐ ಸ್ಪರ್ಧೆಯೊಂದಿಗೆ ಕ್ಷೇತ್ರದಲ್ಲಿ ಚುನಾವಣಾ ಚಿತ್ರಣ ಬದಲಾಗಲು ಪ್ರಾರಂಭ ಆಗಿದ್ದು, ಮುಸ್ಲಿಂ ಮತಗಳು ಕೂಡ ದೊಡ್ಡ ಪ್ರಮಾಣದಲ್ಲಿ ವಿಭಜನೆಯಾಗುತ್ತಿವೆ. ಇದರ ಲಾಭ ಈ ಬಾರಿ ಯಾರಿಗೆ? ಎಂಬ ಕುತೂಹಲ ಪ್ರಾರಂಭವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಮತ್ತು ಸಚಿವ ತನ್ವೀರ್ಸೇಠ್ ಮತ್ತು ಎಸ್ಡಿಪಿಐ ಅಭ್ಯರ್ಥಿ ಅಬ್ದುಲ್ ಮಜೀದ್ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದ್ದು, ಬಿಜೆಪಿ ಅಭ್ಯರ್ಥಿ ಸಂದೇಶ್ ಸ್ವಾಮಿ ಮತ ವಿಭಜನೆಯ ಲಾಭ ಪಡೆಯುವ ಪ್ರಯತ್ನದಲ್ಲಿದ್ದಾರೆ. ಜೆಡಿಎಸ್ ನಿಂದ ಅಬ್ದುಲ್ ಅಜೀಜ್ ಕಣದಲ್ಲಿದ್ದಾರೆ.
ಚಾಮರಾಜದಲ್ಲಿ ತ್ರಿಕೋನ ಸ್ಪರ್ಧೆ
ಹಾಲಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ವಾಸು, ಬಿಜೆಪಿಯ ನಾಗೇಂದ್ರ ಹಾಗೂ ಜೆಡಿಎಸ್ನ ಕೆ.ಎಸ್.ರಂಗಪ್ಪ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಒಕ್ಕಲಿಗರೇ ಅಧಿಕವಾಗಿರುವ ಕ್ಷೇತ್ರದಲ್ಲಿ ಕಳೆದ 5 ವರುಷದಲ್ಲಿ ಕ್ಷೇತ್ರದಲ್ಲಾಗಿರುವ 1500 ಕೋಟಿಗಳ ಅಭಿವೃದ್ಧಿ ಕಾಮಗಾರಿಯನ್ನು ಮುಂದಿಟ್ಟುಕೊಂಡು ವಾಸು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಚಾಮರಾಜ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪ್ರಾಬಲ್ಯ ಹೊಂದಿರುವ ಕ್ಷೇತ್ರ. ಈ ಬಾರಿ ಜೆಡಿಎಸ್ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪರನ್ನು ಕಣಕ್ಕಿಳಿಸಿದೆ. ಟಿಕೆಟ್ ವಂಚಿತ ಹರೀಶ್ ಗೌಡ ಬಂಡಾಯ ಅಭ್ಯರ್ಥಿಯಾಗಿ ಅಬ್ಬರದ ಪ್ರಚಾರದಲ್ಲಿ ತೊಡಗಿರುವುದು ಜೆಡಿಎಸ್ಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.
ಕೆ.ಆರ್ ನಗರದಲ್ಲಿ ಕಾಂಗ್ರೆಸ್ – ಜೆಡಿಎಸ್ ನ ನೇರ ಹಣಾಹಣಿ
ಕೆ.ಆರ್ ನಗರದಲ್ಲಿ ಜೆಡಿಎಸ್-ಕಾಂಗ್ರೆಸ್ ಪ್ರಾಬಲ್ಯ ಹೊಂದಿದ್ದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿದ್ದಾರೆ. ಇನ್ನು ಇವರಿಗೆ ಪ್ರಬಳ ಸ್ಫರ್ಧಿಯಾಗಿ ಕಾಂಗ್ರೆಸ್ನ ರವಿಂಶಂಕರ್ ಸ್ಪರ್ಧೆಗಿಳಿಯುತ್ತಿದ್ದಾರೆ. ಬಿಜೆಪಿ ಇಲ್ಲಿ ದುರ್ಬಲ ಅಭ್ಯರ್ಥಿಯಾದ ಶ್ವೇತಾ ಗೋಪಾಲ್ ರನ್ನು ಕಣಕ್ಕಿಳಿಸಿದ್ದು, ಇದು ಜೆಡಿಎಸ್ಗೆ ಲಾಭವಾಘುವ ಸಾಧ್ಯತೆಯೇ ಹೆಚ್ಚು. ಒಂದು ವೇಳೆ, ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಒಕ್ಕಲಿಗ ಸಮುದಾಯಕ್ಕೆ ಸೇರಿದ ಹೊಸಹಳ್ಳಿ ವೆಂಕಟೇಶ್ಗೆ ಟಿಕೆಟ್ ನೀಡಿದ್ದರೆ ಜೆಡಿಎಸ್ನ ಸಾ.ರಾ.ಮಹೇಶ್ಗೆ ಪ್ರಬಲ ಪೈಪೋಟಿಯಾಗುತ್ತಿದ್ದರಲ್ಲಿ ಸಂಶಯವೇ ಇಲ್ಲ. ಒಕ್ಕಲಿಗರು ಹಾಘೂ ಕುರುಬರು ಬಹುಸಂಖ್ಯಾತರಾಗಿರುವ ಕ್ಷೇತ್ರದಲ್ಲಿ ಸದಾ ಕಾಂಗ್ರೆಸ್ ಹಾಗೂ ಜನತಾ ಪರಿವಾರದ ನಡುವೆಯೇ ಜಿದ್ದಾಜಿದ್ದಿ.
ಹುಣಸೂರಿನಲ್ಲಿ ವಿಶ್ವನಾಥ್ ಗೆಲುವು ಸುಲಭವೇ ?
ಶಾಸಕ ಹೆಚ್. ಪಿ ಮಂಜುನಾಥ್, ಮಾಜಿ ಸಂಸದ ವಿಶ್ವನಾಥ್, ಜಿ ಪಂ ಮಾಜಿ ಸದಸ್ಯ ರಮೇಶ್ ಕುಮಾರ್ ಕಣದಲ್ಲಿದ್ದಾರೆ. ಬಿಜೆಪಿ ಇಲ್ಲಿ ಪ್ರಾಬಲ್ಯದಲ್ಲಿದ್ದೂ ಇತ್ತೀಚಿನ ವರುಷಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಹೋರಾಟ ನಡೆಯುತ್ತಲೇ ಇದೆ. ಕಾಂಗ್ರೆಸ್ನಿಂದ ಸತತ ಎರಡು ಸಲ ಗೆಲುವು ಸಾಧಿಸಿರುವ ಎಚ್.ಪಿ.ಮಂಜುನಾಥ್ ಈ ಬಾರಿ ಹ್ಯಾಟ್ರಿಕ್ ಬಾರಿಸುವ ಉತ್ಸಾಹದಲ್ಲಿದ್ದಾರೆ. ಒಕ್ಕಲಿಗ ಹಾಗೂ ಕುರುಬ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರದಲ್ಲಿ ಕುರುಬ ಸಮುದಾಯದ ಮಾಜಿ ಸಚಿವ ಎಚ್.ವಿಶ್ವನಾಥ್ರನ್ನು ಜೆಡಿಎಸ್ ಕಣಕ್ಕಿಳಿಸಿ ಕಾಂಗ್ರೆಸ್ಗೆ ಆಘಾತ ನೀಡಲು ಮುಂದಾಗಿದೆ.
ಮಹದೇವಪ್ಪಗೆ ಈ ಬಾರಿ ಗೆಲುವು ಸುಲಭವಲ್ಲ
ಎಸ್ಸಿ ಮೀಸಲು ಕ್ಷೇತ್ರದಲ್ಲಿ ಸತತ ಐದು ಬಾರಿ ಗೆಲುವು ಸಾಧಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಈ ಬಾರಿ ಒಲ್ಲದ ಮನಸ್ಸಿನಿಂದಲೇ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್ನಿಂದ ಅಶ್ವಿನ್ಕುಮಾರ್, ಬಿಜೆಪಿಯಿಂದ ಎಸ್.ಶಂಕರ್ ಕಣದಲ್ಲಿದ್ದಾರೆ. ಕಳೆದ ಬಾರಿ ಮಹದೇವಪ್ಪ 323 ಮತಗಳ ಅಂತರದ ಗೆಲುವು ಸಾಧಿಸಿದ್ದರು.ಆರಂಭದಲ್ಲಿ ದುರ್ಬಲರಂತೆ ಕಾಣುತ್ತಿದ್ದ ಅಶ್ವಿನ್ ಕುಮಾರ್ ದಿನದಿಂದ ದಿನಕ್ಕೆ ಬೆಂಬಲ ಹೆಚ್ಚಿಸಿಕೊಂಡಿದ್ದಾರೆ. ಕಳೆದೆರಡು ಚುನಾವಣೆಗಳಲ್ಲಿ ಜೆಡಿಎಸ್ ಪರ ಪ್ರಚಾರ ಮಾಡಿದ್ದ ಮಾಜಿ ಶಾಸಕಿ ಸುನಿತಾ ವೀರಪ್ಪಗೌಡ, ಚಿಕ್ಕಮಾದನಾಯಕ ಬಾರಿ ಬಿಜೆಪಿ ಸೇರಿರುವುದು ಪ್ಲಸ್ ಪಾಯಿಂಟ್.
ವೀರಶೈವರ ಪ್ರಾಬಲ್ಯವೇ ಇಲ್ಲಿ ಹೆಚ್ಚು
ಐದು ಬಾರಿ ಪಿರಿಯಾಪಟ್ಟಣದಲ್ಲಿ ಗೆಲುವು ಸಾಧಿಸಿ ದಾಖಲೆ ನಿರ್ವಿುಸಿರುವ ಕಾಂಗ್ರೆಸ್ನ ಕೆ.ವೆಂಕಟೇಶ್ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕೆ.ಮಹದೇವ್ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಕಳೆದ ಬಾರಿ ಮಹದೇವ್ ವಿರುದ್ಧ ವೆಂಕಟೇಶ್ ಅತ್ಯಂತ ಪ್ರಯಾಸದ ಗೆಲುವು ಸಾಧಿಸಿದ್ದರು. ಬಿಜೆಪಿ ಅಭ್ಯರ್ಥಿ ಮಂಜುನಾಥ್ ಸಮಾಜ ಸೇವೆ ಮೂಲಕ ಮತದಾರರ ಮನ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ.
ಶ್ರೀನಿವಾಸ್ ಪ್ರಸಾದ್ ಗೆ ಮತ್ತೊಮ್ಮೆ ಪ್ರತಿಷ್ಠೆಯ ಪ್ರಶ್ನೆ
ಎಸ್ಸಿ ಮೀಸಲು ಕ್ಷೇತ್ರ ಉಪ ಉಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ವಿರುದ್ಧ ಗೆಲುವು ಸಾಧಿಸಿ ಅಚ್ಚರಿ ಮೂಡಿಸಿದ ಕಳಲೆ ಕೇಶವಮೂರ್ತಿ ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿ. ಈ ಬಾರಿ ಶ್ರೀನಿವಾಸಪ್ರಸಾದ್ ಅಳಿಯ ಹರ್ಷವರ್ಧನ್ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದು, ಇಬ್ಬರ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ. ಜೆಡಿಎಸ್ ಅಭ್ಯರ್ಥಿಯಾಗಿ ಎಚ್.ಎಸ್.ದಯಾನಂದಮೂರ್ತಿ ಸ್ಪರ್ಧಿಸಿದ್ದಾರೆ. ಕಾಂಗ್ರಸ್ ಟಿಕೆಟ್ ಗೆ ಸಚಿವ ಮಹದೇವಪ್ಪ ಲ್ಲಿ ಟಿಕೇಟ್ ಆಕಾಂಕ್ಷಿಯಾಗಿದ್ದರು. ಉಪ ಚುನಾವಣೆಯಲ್ಲಾದ ತಪ್ಪುಗಳನ್ನು ಸರಿಪಡಿಸಿಕೊಂಡಲ್ಲಿ ಬಿಜೆಪಿಗೂ ಅವಕಾಶವಿದೆ. ಜೆಡಿಎಸ್ ಹೆಚ್ಚು ಮತ ಪಡೆದಷ್ಟು ಕಾಂಗ್ರೆಸ್ ತೊಂದರೆ ಸಿಲುಕಬಹುದು.
ಅನುಕಂಪದ ಅಲೆ ಮತವಾಗುತ್ತದೆಯೇ?
ಜೆಡಿಎಸ್ ಶಾಸಕ ಚಿಕ್ಕಮಾದು ನಿಧನ ನಂತರ ಎಚ್.ಡಿ.ಕೋಟೆ ಕ್ಷೇತ್ರದಲ್ಲಿ ರಾಜಕೀಯ ಸಾಕಷ್ಟು ಬದಲಾಗಿದೆ. ಅನುಕಂಪದ ಅಲೆ ಮೇಲೆ ಗೆಲುವು ಸಾಧಿಸಲು ಚಿಕ್ಕಮಾದು ಪುತ್ರ ಅನಿಲ್ಕುಮಾರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ಚಿಕ್ಕಣ್ಣ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಸಿದ್ದರಾಜು ಕೂಡ ಪ್ರಬಲವಾಗಿದ್ದಾರೆ. ಕಾಂಗ್ರೆಸ್ - ಜೆಡಿಎಸ್ ನಡುವೆಯೇ ಇಲ್ಲಿ ಪ್ರಬಲ ಪೈಪೋಟಿ.