ಪಿರಿಯಾಪಟ್ಟಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 8ಲಕ್ಷ ರೂ.ವಶ
ಮೈಸೂರು, ಮೇ 07: ಯಾವುದೇ ದಾಖಲೆಗಳಿಲ್ಲದೆ ಕಾರಿನಲ್ಲಿ ಕೊಂಡೊಯ್ಯುತ್ತಿದ್ದ 8ಲಕ್ಷ ರೂ.ಗಳನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಮೈಸೂರಿನ ಪಿರಿಯಾಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಬಿ.ಎಂ.ರಸ್ತೆಗೆ ಹೊಂದಿಕೊಂಡಂತಿರುವ ಹರಿಪ್ರಿಯ ಹೋಟೆಲ್ ಎದುರು ಟೊಯೋಟಾ ಪಾರ್ಚ್ಯೂನರ್ ಕಾರಿನಲ್ಲಿ ಸಂಗ್ರಹಿಸಿಟ್ಟಿದ್ದ 8 ಲಕ್ಷ ರೂ.ಗಳನ್ನು ಖಚಿತ ಮಾಹಿತಿ ಮೇರೆಗೆ ಚುನಾವಣಾಧಿಕಾರಿ ಹಾಗೂ ಪುರಸಭಾ ಮುಖ್ಯಾಧಿಕಾರಿ ಕೃಷ್ಣರವರು ವಶಕ್ಕೆ ಪಡೆದರು.
ಪಿರಿಯಾಪಟ್ಟಣ ಕಾಂಗ್ರೆಸ್ ಅಭ್ಯರ್ಥಿಯಿಂದ ಹಣ ಹಂಚಿಕೆ!
ಪಾರ್ಚ್ಯೂನರ್ ಕಾರು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಡಾ. ಬಿ.ಜೆ.ವಿಜಯ್ ಕುಮಾರ್ ರವರ ಸಹೋದರ ಪಿರಿಯಾಪಟ್ಟಣ ತಾಲೂಕು ಕಾಂಗ್ರೆಸ್ ಘಟಕದ ಖಜಾಂಚಿಯಾಗಿರುವ ಬಿ.ಜೆ.ಬಸವರಾಜ್ ರವರದಾಗಿದೆ. ಶಾಸಕ ಮತ್ತು ಕಾಂಗ್ರೆಸ್ ಅಭ್ಯರ್ಥಿ ಕೆ.ವೆಂಕಟೇಶ್ ರವರ ಪರವಾಗಿ ಮತ ಕೇಳಲು ಈ ಹಣವನ್ನು ತೆಗೆದುಕೊಂಡು ತೆರಳಲಾಗುತಿತ್ತು ಎಂಬ ಜೆಡಿಎಸ್ ಮುಖಂಡರ ದೂರಿನ ಆಧಾರದ ಮೇಲೆ ಅಧಿಕಾರಿಗಳು ಕಾರನ್ನು ಶೋಧಿಸಿದ್ದಾರೆ.
ತಹಸೀಲ್ದಾರ್ ಗೋವಿಂದ್ ರಾಜ್ ಮತ್ತು ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಪ್ರದೀಪ್ ನೇತೃತ್ವದಲ್ಲಿ ಅರೆಸೇನಾಪಡೆ ಬಂದೋಬಸ್ತ್ ನೊಂದಿಗೆ ಕಾರನ್ನು ಶೋಧಿಸಿದಾಗ ಎರಡು ಸಾವಿರ ಮುಖ ಬೆಲೆಯ ನೋಟಿನ ನಾಲ್ಕು ಕಂತೆಗಳು ಮತ್ತು ಹಂಚಬೇಕಾದ ಗ್ರಾಮ ಮತ್ತು ಮುಖಂಡರ ಹೆಸರುಗಳ ಪಟ್ಟಿ ಸೇರಿದಂತೆ ಇನ್ನಿತರ ದಾಖಲಾತಿಗಳು ದೊರೆತಿವೆ. ಇವುಗಳನ್ನು ಆಧರಿಸಿ ಸೆಕ್ಟರ್ ಮ್ಯಾಜೆಸ್ಟ್ರೇಟ್ ಕೃಷ್ಣ ನೀಡಿದ ದೂರಿನ ಮೇರೆಗೆ ಹಣ, ದಾಖಲಾತಿ ಮತ್ತು ಕಾರು ಹಾಗೂ ಚಾಲಕ ಗಣೇಶ್ ನನ್ನು ವಶಪಡಿಸಿಕೊಂಡು ದೂರು ದಾಖಲಿಸಿಕೊಳ್ಳಲಾಗಿದೆ.