'ಹಳ್ಳಿಹಕ್ಕಿ'ಯ ಗೂಡಿಗೆ ಡಿಚ್ಚಿ ಕೊಟ್ಟ 'ಟಗರು'!
ಮೈಸೂರು, ನವೆಂಬರ್.20: ರಾಜ್ಯದಲ್ಲಿ ಉಪ ಚುನಾವಣೆ ಬಿಸಿ ದಿನೇ ದಿನೆ ಏರುತ್ತಿದೆ. ಅನರ್ಹ ಶಾಸಕರಿಗೆ ಪಾಠ ಕಲಿಸಲು ಕಾಂಗ್ರೆಸ್ ಪಣ ತೊಟ್ಟು ನಿಂತಿದೆ. ಈಗಾಗಲೇ ಅಖಾಡಕ್ಕೆ ಧುಮುಕಿರುವ ಮಾಜಿ ಸಿಎಂ ಸಿದ್ದರಾಮಯ್ಯ ಎದುರಾಳಿಗಳಿಗೆ ಮಾತಿನ ಪೆಟ್ಟು ಕೊಟ್ಟಿದ್ದಾರೆ.
ಮೈಸೂರು ಜಿಲ್ಲೆ ಹುಣಸೂರಿನ ಕಣಗಲ್ ಬಳಿ ಮಾಜಿ ಮುಖ್ಮಯಂತ್ರಿ ಸಿದ್ದರಾಮಯ್ಯ ಬಹಿರಂಗ ಪ್ರಚಾರ ನಡೆಸಿದರು. ಈ ವೇಳೆ ಹುಣಸೂರಿನ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಗೆ ಸಿದ್ದರಾಮಯ್ಯ ಮಾತಿನ ಡಿಚ್ಚಿ ಕೊಟ್ಟರು. ಹೆಚ್.ವಿಶ್ವನಾಥ್ ಗೆ ಪಕ್ಷದಿಂದ ಪಕ್ಷಕ್ಕೆ ಜಿಗಿಯುವುದೇ ಕೆಲಸವಾಗಿ ಬಿಟ್ಟಿದೆ ಎಂದರು.
ಕಾಂಗ್ರೆಸ್ ನಲ್ಲಿ ಇದ್ದಾಗ ನನ್ನ ವಿರುದ್ಧವೇ ಮಾತನಾಡುತ್ತಿದ್ದ ಹೆಚ್.ವಿಶ್ವನಾಥ್, ನಂತರ ಜೆಡಿಎಸ್ ಗೆ ಹಾರಿದರು. ಆಗಲೂ ಮತ ಹಾಕಿದ ಜನರ ಅಭಿಪ್ರಾಯ ಕೇಳಲಿಲಲ್ಲ. ಜೆಡಿಎಸ್ ನಲ್ಲಾದರೂ ಪ್ರಾಮಾಣಿಕರಾಗಿ ಇದ್ದರಾ, ಅಲ್ಲೂ ಇಲ್ಲ. ಈಗ ಬಿಜೆಪಿಗೆ ಹೋಗಿದ್ದು, ಈಗಲಾದರೂ ನಿಮ್ಮ ಅಭಿಪ್ರಾಯ ಕೇಳಿದ್ದಾರಾ ಅದೂ ಇಲ್ಲ. ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹೆಚ್.ವಿಶ್ವನಾಥ್ ಗೆ ಬೆಂಬಲ ನೀಡದಂತೆ ಸಿದ್ದರಾಮಯ್ಯ ಗುಡುಗಿದರು.
ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ನಾನೇ ಗೆದ್ದಂತೆ
ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಪರ ಮತಯಾಚನೆ ಮಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದರೆ ತಮ್ಮನ್ನೇ ಗೆಲ್ಲಿಸಿದಂತೆ ಎಂದು ಹೇಳಿದರು. ಮಂಜುನಾಥ್ ಹುಟ್ಟು ಕಾಂಗ್ರೆಸ್ಸಿಗರು. ಅವರು ಗೆದ್ದಾಗಲೂ ಸೋತಾಗಲೂ ನಿಮ್ಮ ಜೊತೆಗೆ ಇದ್ದವರು. ಇಂಥ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.