ಪೊಲೀಸರ ಮೇಲೆಯೇ ಎಗರಿ ಎಗರಿ ಬಿದ್ದರಾ ಶಾಸಕರು?
ಮೈಸೂರು, ಡಿಸೆಂಬರ್.08: ಹುಣಸೂರು ಉಪ ಚುನಾವಣೆಯ ಮತದಾನದ ದಿನ ಪೊಲೀಸರ ಕರ್ತವ್ಯಕ್ಕೆ ಶಾಸಕರೇ ಅಡ್ಡಿಪಡಿಸಿದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ಹಾಗೂ ಶಾಸಕ ಅನಿಲ್ ಚಿಕ್ಕಮಾದು ವಿರುದ್ಧ ಮೊಕದ್ದಮೆ ದಾಖಲಾಗಿದೆ.
ಶಾಸಕ ಅನಿಲ್ ಚಿಕ್ಕಮಾದು ಮತ್ತು ಬೆಂಬಲಿಗರು 144 ಸೆಕ್ಷನ್ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಮತಗಟ್ಟೆ ಪರಿಮಿತಿಯಲ್ಲಿ ಅಕ್ರಮವಾಗಿ ಗುಂಪು ಕಟ್ಟಿಕೊಂಡು ಚರ್ಚೆ ನಡೆಸಿದ್ದರು ಎಂದು ಬಿಳಿಕೆರೆ ಪೊಲೀಸರು ಆರೋಪಿಸಿದ್ದಾರೆ.
ಉಪಚುನಾವಣಾ ಫಲಿತಾಂಶಕ್ಕೂ ಮುನ್ನವೇ ಅನರ್ಹರ ಭಾರೀ ಡಿಮಾಂಡ್?
ಕಳೆದ ಡಿಸಂಬರ್.05ರಂದು ಮತದಾನದ ದಿನ ಹೊಸಮಾರನಹಳ್ಳಿ ಮತಗಟ್ಟೆ ಬಳಿ ಕಾಂಗ್ರೆಸ್ ಮುಖಂಡರು, ಕಾನೂನು ಸುವ್ಯವಸ್ಥೆ ಕಾಪಾಡಲು ಹೋದ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು.
ಹೊಸಮಾರನಹಳ್ಳಿ ಗ್ರಾಮದ ಚಾವಡಿಯಲ್ಲಿ ಧರಣಿ ಕುಳಿತು ಪೊಲೀಸರು ಅನುಚಿತವಾಗಿ ವರ್ತಿಸಿದ್ದಾರೆ. ಅವರೆಲ್ಲ ಕ್ಷಮೆ ಹೇಳಬೇಕೆಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು. ಸುಮಾರು 15 ನಿಮಿಷಗಳ ಕಾಲ ರಸ್ತೆ ತಡೆ ನಡೆಸಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಕೂಗಾಡಿದ್ದಾರೆಂದು ಆರೋಪಿಸಲಾಗಿದೆ.
ಅಲ್ಲದೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯಕುಮಾರ್, ಪೊಲೀಸರ ವಿರುದ್ಧ ಏರುಧ್ವನಿಯಲ್ಲಿ ಕೂಗಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಿಳಿಕೆರೆ ಠಾಣೆ ಪಿಎಸ್ಐ ಜಯಪ್ರಕಾಶ್ ದೂರು ದಾಖಲು ಮಾಡಿಕೊಂಡಿದ್ದಾರೆ.
ಕಾಂಗ್ರೆಸ್ ಅದ್ಯಕ್ಷ ವಿಜಯಕುಮಾರ್ ಮೊದಲನೇ ಅರೋಪಿ ಹಾಗೂ ಶಾಸಕ ಅನಿಲ್ ಚಿಕ್ಕಮಾದು ಎರಡನೇ ಅರೋಪಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರಿನಲ್ಲಿ 20ಕ್ಕೂ ಹೆಚ್ಚು ಮಂದಿ ಹೆಸರನ್ನು ಸೇರಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೋಲೀಸರು ತಿಳಿಸಿದ್ದಾರೆ.