ಮೈಸೂರು: ಕೊರೊನಾ ಸೋಂಕಿತನ ಮೇಲೆ ಗ್ರಾಮಸ್ಥರ ಹಲ್ಲೆ
ಮೈಸೂರು, ಮೇ 14: ಹೋಂ ಕ್ವಾರಂಟೈನ್ ಆಗಿದ್ದ ಕೊರೊನಾ ಸೋಂಕಿತನ ಮೇಲೆ ಗ್ರಾಮದ ಕೆಲವು ಪುಂಡರು ಕಲ್ಲಿನಿಂದ ಹಲ್ಲೆ ನಡೆಸಿರುವ ಘಟನೆ ಮೈಸೂರು ಜಿಲ್ಲೆಯ ಕಾರಪುರ ಗ್ರಾಮದಲ್ಲಿ ನಡೆದಿದೆ.
ಕೊರೊನಾ ಸೋಂಕಿತನು ಮನೆಯಿಂದ ಹೊರ ಬಂದಿದ್ದಕ್ಕೆ ಜನರ ಗುಂಪು ಕಲ್ಲಿನಿಂದ ಹಲ್ಲೆ ನಡೆಸಿದ್ದು, ಕೊರೊನಾ ಪಾಸಿಟಿವ್ ಆದ ಯುವಕನಿಗೆ ಗ್ರಾಮ ಪಂಚಾಯತಿ ಸದಸ್ಯರು ಮನೆಯಿಂದ ಹೊರಗೆ ಹೋಗದಂತೆ ಸೋಂಕಿತನ ಕುಟುಂಬಕ್ಕೆ ಹೇಳಿದ್ದರು. ಅವರಿಗೆ ಔಷಧಿಗಳನ್ನು ಪೂರೈಸಲಾಗುವುದು ಎಂದೂ ಸಹ ಭರವಸೆ ನೀಡಿದ್ದರು.
ಸೋಂಕಿತ ಯುವಕ ಮನೆಯ ಹೊರಗೆ ಕುಳಿತಿದ್ದಾನೆ ಎಂದು ಮುತ್ತೇಗೌಡ ಮತ್ತು ಬಲರಾಮ್ ನೇತೃತ್ವದ ದುಷ್ಕರ್ಮಿಗಳು, ಕಲ್ಲುಗಳಿಂದ ಹಲ್ಲೆ ಮಾಡಿ ಯುವಕನ ಬಲ ಮೊಣಕೈ ಮುರಿಯುವಂತೆ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಯುವಕ ಮತ್ತು ಅವರ ಕುಟುಂಬದ ಮೇಲೆ ಹಲ್ಲೆ ನಡೆಸಲು ಗ್ರಾಮದ ಇತರರು ಪ್ರೇರೇಪಿಸಿದ್ದಾರೆ. ಸೋಂಕು ಇತರರಿಗೆ ಹರಡಬಹುದು ಎಂದು ಅವರ ಕುಟುಂಬವನ್ನು ಹಳ್ಳಿಯಿಂದ ಹೊರಹೋಗುವಂತೆ ಬೆದರಿಕೆ ಹಾಕಿದರು. ನಂತರ, ಇತರ ಕೆಲವು ಗ್ರಾಮಸ್ಥರು ಆಂಬ್ಯುಲೆನ್ಸ್ ಗೆ ಕರೆ ಮಾಡಿ ಎಚ್.ಡಿ ಕೋಟೆಯ ತಾಲ್ಲೂಕು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ತನಗೆ ಕೋವಿಡ್ ಪಾಸಿಟಿವ್ ಎಂದು ತಿಳಿದು ಕೋಪಗೊಂಡು ದಾಳಿ ನಡೆಸಿದ್ದಾರೆ ಎಂದು ಸಂತ್ರಸ್ತ ಹೇಳಿದ್ದು, ಮುತ್ತಯ್ಯ, ದಾಸೇಗೌಡ, ಬಲರಾಮ ಈ ದಾಳಿಯ ಮಾಸ್ಟರ್ ಮೈಂಡ್ ಎಂದು ಆರೋಪಿಸಿ, ಅವರು ವಿಡಿಯೋ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಯುವಕನನ್ನು ನಿಜವಾಗಿಯೂ ಗ್ರಾಮಸ್ಥರು ಕೆಟ್ಟದಾಗಿ ಥಳಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಸುನಿಲ್ ಹೇಳಿದ್ದಾನೆ.