ಕೆಲವೇ ದಿನಗಳಲ್ಲಿ ಮರಳಿ ಸಿಗಲಿದೆ ರಾಜ್ಯ ಮುಕ್ತ ವಿವಿಗೆ ಮಾನ್ಯತೆ: ಕುಲಪತಿ ಬಸವರಾಜು
ಮೈಸೂರು, ಜುಲೈ 6: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕರಾಮುವಿ)ಕ್ಕೆ ಕಳೆದ 5 ವರ್ಷಗಳಿಂದ ಆವರಿಸಿದ್ದ ಕತ್ತಲು ಕರಗಿ ಬೆಳಕು ಮೂಡುವ ದಿನ ಹತ್ತಿರವಾಗಿದೆ. ದಿಲ್ಲಿಯಲ್ಲಿ ನಿನ್ನೆ ನಡೆದ ಯುಜಿಸಿ ತಜ್ಞರ ಸಮಿತಿ ಮತ್ತು ಕರಾಮುವಿ ಅಧಿಕಾರಿಗಳ ಸಭೆ ಯಶಸ್ವಿಯಾಗಿದ್ದು, ಇದೇ ಮೊದಲ ಬಾರಿಗೆ ಕರಾಮುವಿಗೆ ಮತ್ತೆ ಮಾನ್ಯತೆ ನೀಡುವ ಭರವಸೆ ದೊರೆತಿದೆ.
ದಿಲ್ಲಿಯ ಯುಜಿಸಿ ಕಚೇರಿಯಲ್ಲಿ ತಜ್ಞರ ಸಮಿತಿ ಅಧ್ಯಕ್ಷ ವಿ.ಎಚ್.ಚೌಹಾಣ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಮುಕ್ತ ವಿವಿ ಅಧಿಕಾರಿಗಳು ಸಲ್ಲಿಸಿದ ಎಲ್ಲಾ ದಾಖಲೆಗಳನ್ನು 6 ಸದಸ್ಯರ ಸಮಿತಿ ಪರಿಶೀಲಿಸಿ ತೃಪ್ತಿ ವ್ಯಕ್ತಪಡಿಸಿತು ಎಂದು ಗೊತ್ತಾಗಿದೆ.
ಈ ಬಗ್ಗೆ ಮಾತನಾಡಿದ ಕರಾಮುವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಅವರು, ಲಕ್ಷಾಂತರ ವಿದ್ಯಾರ್ಥಿಗಳನ್ನು ಕಾಡುತ್ತಿದ್ದ ಅನಿಶ್ಚಿತತೆ ಹಾಗೂ ಕೆಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕರಾಮುವಿ ಮಾನ್ಯತೆ ಕುರಿತ ಊಹಾ ಪೋಹಗಳಿಗೆ ಇನ್ನು ತೆರೆ ಬೀಳಲಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಪ್ರವೇಶ ಪ್ರಕ್ರಿಯೆ ಆರಂಭವಾಗುವುದು ನಿಶ್ಚಿತ ಎಂದು ಹೇಳಿದರು.
ಕರ್ನಾಟಕ ಮುಕ್ತ ವಿವಿಯಲ್ಲಿ 35 ಕೋರ್ಸ್ಗಳಿಗೆ ಶೀಘ್ರ ಮಾನ್ಯತೆ
ಯುಜಿಸಿ ಹೊಸ ನಿಯಮದಂತೆ ಪ್ರತಿ ವಿಷಯಕ್ಕೆ ಒಬ್ಬ ಸಹ ಪ್ರಾಧ್ಯಾಪಕರು, ಇಬ್ಬರು ಸಹಾಯಕ ಪ್ರಾಧ್ಯಾಪಕರಿರಬೇಕು. ಅದರಂತೆ ರಾಜ್ಯ ಸರ್ಕಾರದ ಅನುಮತಿಯೊಂದಿಗೆ 7 ಸಹ ಪ್ರಾಧ್ಯಾಪಕರು ಮತ್ತು 22 ಸಹಾಯಕ ಪ್ರಾಧ್ಯಪಕರನ್ನು ಡಿಸೆಂಬರ್ನಲ್ಲೇ ನೇಮಕ ಮಾಡಿಕೊಳ್ಳಲಾಗಿದೆ. ಪಠ್ಯಗಳು, ನೋಟ್ಸ್ಗಳನ್ನು ಸಿದ್ಧಪಡಿಸಲಾಗಿದೆ ಎಂದರು.
32 ಕೋರ್ಸ್ಗಳಿಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದೆವು. ಈಗಾಗಲೇ ಅವರು ಕೇಳಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದು, ನಾವು ಆನ್ಲೈನ್ನಲ್ಲಿ ಸಲ್ಲಿಸಿರುವ ದಾಖಲೆಗಳ ಮುದಿತ ಪ್ರತಿಗಳ 3 ಸೆಟ್ಗಳನ್ನು ಸಭೆಯಲ್ಲಿ ಮಂಡಿಸಿದೆವು. ಜತೆಗೆ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕವೂ ವಿವರ ನೀಡಲಾಯಿತು. ಅದೆಲ್ಲವನ್ನೂ ನೋಡಿ ಯುಜಿಸಿ ಅಧಿಕಾರಿಗಳು ತೃಪ್ತರಾದ ಭಾವನೆ ವ್ಯಕ್ತವಾಯಿತು ಎಂದು ಶಿವಲಿಂಗಯ್ಯ ಹೇಳಿದರು.
ಕೆಎಸ್ಒಯು ಮಾನ್ಯತೆ ಕೇಂದ್ರದ ಹೊಣೆಯಲ್ಲ, ಯುಜಿಸಿಯದ್ದು: ಜಾವಡೇಕರ್
ಕರಾಮುವಿಯು ಯುಜಿಸಿ ಕಾನೂನು ಮತ್ತು ನಿಯಮಗಳನ್ನು ಉಲ್ಲಂಘಿಸಿ ಕರ್ನಾಟಕದ ಹೊರಗೆ ನೂರಾರು ಅಧ್ಯಯನ ಕೇಂದಗಳನ್ನು ತೆರೆದಿದ್ದೇ ಅಲ್ಲದೆ, ಖಾಸಗಿ ಸಂಸ್ಥೆಗಳೊಂದಿಗೆ ಒಡಂಬಡಿಕೆ(ಎಂಒಯು) ಮಾಡಿಕೊಂಡು ತಾಂತ್ರಿಕ, ಅರೆ ವೈದ್ಯಕೀಯ ಮತ್ತು ವಿಜ್ಞಾನ ಆಧಾರಿತ ಕೋರ್ಸ್ಗಳನ್ನು ಸಂಬಂಧಪಟ್ಟ ಸಂಸ್ಥೆಗಳ ಒಪ್ಪಿಗೆ ಇಲ್ಲದೆ ತೆರೆದಿದ್ದ ಕಾರಣ 2013ರಿಂದ ಸಂಸ್ಥೆಯ ಮಾನ್ಯತೆ ರದ್ದಾಗಿತ್ತು.