ಸುತ್ತೂರು ಕಾಡುಮಠದ ಗದ್ದಿಗೆಗೆ ಕಪಿಲೆಯ ದಿಗ್ಬಂಧನ
ಮೈಸೂರು, ಆಗಸ್ಟ್ 10: ಕಳೆದ ವರ್ಷದಂತೆ ಈ ಬಾರಿಯೂ ಕಪಿಲೆ ತುಂಬಿ ಹರಿದ ಪರಿಣಾಮ ಸುತ್ತೂರು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ. ಇದೇ ಪ್ರಥಮ ಬಾರಿಗೆ ಕಾಡುಮಠದ ಗದ್ದುಗೆ ಆವರಣಕ್ಕೆ ನದಿ ನೀರು ನುಗ್ಗಿದ್ದು, ಸುತ್ತಮುತ್ತಲಿನ ಸಾವಿರಾರು ಎಕರೆ ಜಮೀನು ಜಲಾವೃತವಾಗಿವೆ.
ಕೇರಳದ ವೈನಾಡು ಮತ್ತು ಎಚ್.ಡಿ.ಕೋಟೆ, ನಂಜನಗೂಡು, ಮೈಸೂರು ಮೊದಲಾದ ಕಡೆಗಳಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದೆ. ವೈನಾಡು ವ್ಯಾಪ್ತಿಯಿಂದ ಮಳೆ ನೀರು ನೇರವಾಗಿ ಕಬಿನಿ ಜಲಾಶಯವನ್ನು ಸೇರುತ್ತಿದೆ. ಈ ಜಲಾಶಯವಲ್ಲದೆ, ಈ ಬಾರಿ ಇನ್ನೆರಡು ಜಲಾಶಯಗಳಾದ ತಾರಕ ಮತ್ತು ನುಗು ಜಲಾಶಯಗಳು ತುಂಬಿ ಹರಿಯುತ್ತಿರುವುದರಿಂದ ಕಪಿಲೆ ಇನ್ನಷ್ಟು ರೌದ್ರಾವಾತಾರ ತಾಳುವಂತಾಗಿದ್ದು, ಎಲ್ಲೆಡೆ ಜಲಪ್ರವಾಹ ಸೃಷ್ಟಿಯಾಗಿದೆ.
ಮಹಾಮಳೆಗೆ ಧುಮ್ಮಿಕ್ಕುತ್ತಿವೆ ಕಾವೇರಿ ಕೊಳ್ಳದ ಅಣೆಕಟ್ಟೆಗಳು
ಇದೀಗ ಕಬಿನಿ, ತಾರಕ ಮತ್ತು ನುಗು ಜಲಾಶಯಗಳಿಂದ ಕಪಿಲ ನದಿಗೆ ಸುಮಾರು 1.25 ಲಕ್ಷ ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ. ಇದರಿಂದ ಎಚ್.ಡಿ.ಕೋಟೆ ವ್ಯಾಪ್ತಿಯ ಹಲವು ಸೇತುವೆಗಳು ಮುಳುಗಡೆಯಾಗಿವೆ. ನಂಜನಗೂಡು ಶ್ರೀಕಂಠೇಶ್ವರ ದೇಗುಲ ಜಲಾವೃತವಾಗಿದೆ. ಇದಾದ ಬಳಿಕ ಮುಂದೆ ಸಾಗಿದಂತೆ ಮೈಸೂರಿಗೆ ಸಂಪರ್ಕ ಕಲ್ಪಿಸುವ ಸುತ್ತೂರು ಸೇತುವೆ ಜಲಾವೃತವಾಗಿದೆ.
ಕಳೆದ ವರ್ಷವೂ ಕಬಿನಿ ಜಲಾಶಯದಿಂದ ನೀರು ಹರಿಸಿದಾಗ ಈ ಸೇತುವೆ ಮುಳುಗಡೆಯಾಗಿತ್ತು. ಇದೀಗ ಮತ್ತೆ ಈ ಬಾರಿಯೂ ಸೇತುವೆ ಮುಳುಗಡೆಯಾಗಿ ಜನ ಸಂಕಷ್ಟ ಅನುಭವಿಸುವಂತಾಗಿದೆ.
ಕಬಿನಿಯಿಂದ ನದಿಗೆ ಹೆಚ್ಚುವರಿ ನೀರು... ನಂಜನಗೂಡಲ್ಲಿ ಪ್ರವಾಹದ ಭಯ
ಕಳೆದ ವರ್ಷ ಇದೇ ರೀತಿಯ ಪ್ರವಾಹ ಬಂದಿತ್ತು. ಆ ಬಾರಿಯೂ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದರು. ಈ ಬಾರಿ ಮುಂಗಾರು ಆರಂಭದಲ್ಲಿ ಅಬ್ಬರಿಸದ ಕಾರಣ ಕೃಷಿಗೆ ನೀರು ಸಿಗುತ್ತಾ ಎಂಬ ಭಯದಲ್ಲಿಯೇ ಭತ್ತವನ್ನು ಬೆಳೆದಿದ್ದರು. ಈಗಾಗಲೇ ಕೆಲವೆಡೆ ನಾಟಿ ಮಾಡಲಾಗಿತ್ತು. ಆದರೆ ಇದೀಗ ಪ್ರವಾಹದಲ್ಲಿ ಎಲ್ಲವೂ ಕೊಚ್ಚಿಹೋಗಿದ್ದು ರೈತರು ತಲೆ ಮೇಲೆ ಕೈಹೊತ್ತು ಕೂತಿದ್ದಾರೆ.
ಗುರುವಾರದಿಂದಲೇ ಕಬಿನಿ, ತಾರಕ, ನುಗು ಜಲಾಶಯದಿಂದ ಸುಮಾರು 1.25 ಲಕ್ಷ ಕ್ಯುಸೆಕ್ ನೀರನ್ನು ಬಿಡಲಾಗಿದ್ದು ಈ ನೀರು ಕಪಿಲೆಯ ರೌದ್ರತೆಯನ್ನು ಹೆಚ್ಚಿಸಿದೆ. ತಗ್ಗು ಪ್ರದೇಶಗಳನ್ನೆಲ್ಲ ಆವರಿಸಿಕೊಂಡು ಹರಿಯುತ್ತಿದೆ. ಕೆಲವು ಮನೆಗಳಿಗೂ ನೀರು ನುಗ್ಗಿದೆ. ಇದರಿಂದ ಇನ್ನು ಜಮೀನುಗಳಿಗೆ ನೀರು ನುಗ್ಗಿದ್ದು ಕೋಟ್ಯಂತರ ರೂ. ನಷ್ಟ ಸಂಭವಿಸಿದೆ. ಕೇರಳದಲ್ಲಿ ಮಳೆ ಕಡಿಮೆಯಾಗಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಕಡಿಮೆಯಾದರೆ ಮಾತ್ರ ಇಲ್ಲಿನ ಜನ ನೆಮ್ಮದಿಯಾಗಿರಲು ಸಾಧ್ಯವಾಗಿದೆ.