ಪಾಪ ಕಳೆಯುವ ನಂಜನಗೂಡಿನ ಕಪಿಲ ನದಿಯೇ ಕಲ್ಮಶ!
Recommended Video
ಮೈಸೂರು, ಜೂನ್ 2: ದಕ್ಷಿಣಕಾಶಿ ಎಂದೇ ಕರೆಯಲ್ಪಡುವ ನಂಜನಗೂಡಿನ ನಂಜುಂಡೇಶ್ವರನ ಸನ್ನಿಧಿಗೆ ಲಕ್ಷಾಂತರ ಭಕ್ತರು ಬರುತ್ತಾರೆ. ಹೀಗೆ ಬರುವ ಭಕ್ತರು ದೇಗುಲದ ಮುಂಭಾಗದಲ್ಲಿ ಹರಿಯುವ ಕಪಿಲ ನದಿಯಲ್ಲಿ ಸ್ನಾನ ಮಾಡಿ ಪಾಪ ಕಳೆಯಿತೆಂದು ನಂಬುತ್ತಾರೆ.
ಒಂದು ವೇಳೆ ಈ ನದಿಗೆ ಪಟ್ಟಣದ ಕಲುಷಿತ ನೀರು ಸೇರುತ್ತಿರುವುದನ್ನು ನೋಡಿದರೆ ಖಂಡಿತಾ ಭಕ್ತರು ಬೆಚ್ಚಿ ಬೀಳುವುದಂತು ಖಚಿತ. ಕಪಿಲ ನದಿಗೆ ಪಟ್ಟಣದ ಕಲುಷಿತ ನೀರು ಹರಿದು ಬರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಸಿಕ್ಕ ವಸ್ತು, ಬಟ್ಟೆಗಳನ್ನು ಎಸೆಯುವುದು ಕಂಡು ಬರುತ್ತಿದೆ.
ಕಾಶಿ ಗಂಗಾ ತಟದಲ್ಲಿ ಶವಸಂಸ್ಕಾರ: ಉತ್ತರಪ್ರದೇಶ ಸರಕಾರದ ಹೊಸ ಆದೇಶ
ಕೆಲವು ಸಮಯಗಳ ಹಿಂದೆ ಇದೇ ನದಿಯಿಂದ ಟನ್ ಗಟ್ಟಲೆ ಕಸವನ್ನು ಹೊರತೆಗೆದು ನದಿಯನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಸಮಾಜ ಸೇವಾ ಸಂಘಟನೆಗಳು ಮಾಡಿದ್ದರು.
ಲಕ್ಷಾಂತರ ಜನ ಇಲ್ಲಿಗೆ ಭೇಟಿ ನೀಡಿ ಪೂಜಾಕೈಂಕರ್ಯ ಮಾಡುವುದರೊಂದಿಗೆ ತಾವು ತಂದ ಪದಾರ್ಥಗಳನ್ನೆಲ್ಲ ನದಿಗೆ ಎಸೆಯುತ್ತಾರೆ. ಹೀಗೆ ಎಸೆದ ವಸ್ತುಗಳು ನದಿಯಲ್ಲಿ ಶೇಖರಣೆಯಾಗಿ ನದಿ ಕಲುಷಿತಗೊಳ್ಳುತ್ತಿದೆ.
ಈ ನಡುವೆ ನಂಜನಗೂಡು ಪಟ್ಟಣವು ಅಭಿವೃದ್ಧಿಯಾಗುತ್ತಿದ್ದು, ಒಳಚರಂಡಿ ವ್ಯವಸ್ಥೆಯಿದ್ದರೂ ಕೊಳಚೆ ಮತ್ತು ಕಲ್ಮಶ ನೀರು ಅಷ್ಟೇ ಅಲ್ಲದೆ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳ ರಾಸಾಯನಿಕ ಪದಾರ್ಥವೂ ಚರಂಡಿಯಲ್ಲಿ ಹರಿದು ಬಂದು ನದಿಯನ್ನು ಸೇರುತ್ತಿದೆ ಎನ್ನಲಾಗಿದೆ. ಇದರಿಂದ ಶುದ್ಧವಾಗಿ ಹರಿಯಬೇಕಾಗಿದ್ದ ನೀರು ಕಲುಷಿತವಾಗಿ ರೋಗ ರುಜಿನಗಳನ್ನು ಹರಡುವ ಭಯವೂ ಇಲ್ಲದಿಲ್ಲ.
ಪ್ರತಿದಿನವೂ ದೂರದ ಊರುಗಳಿಂದ ಇಲ್ಲಿಗೆ ಭಕ್ತರು ಆಗಮಿಸುತ್ತಾರೆ. ಹುಣ್ಣಿಮೆ, ಅಮವಾಸ್ಯೆ, ಇನ್ನಿತರ ವಿಶೇಷ ದಿನಗಳಲ್ಲಿ ಲಕ್ಷಾಂತರ ಭಕ್ತರು ಇಲ್ಲಿ ನೆರೆಯುತ್ತಾರೆ. ಹಾಗೆ ಬಂದ ಭಕ್ತರು ಕಪಿಲ ನದಿಯಲ್ಲಿ ಸ್ನಾನ ಮಾಡಿ ನಂಜುಂಡೇಶ್ವರನ ದರ್ಶನ ಮಾಡಿಕೊಂಡು ತೆರಳುತ್ತಾರೆ. ಇಲ್ಲಿಗೆ ಪ್ರತಿ ತಿಂಗಳು ಭಕ್ತರಿಂದ ಕೋಟ್ಯಂತರ ಹಣ ಹರಕೆಯಾಗಿ ಸಲ್ಲಿಕೆಯಾಗುತ್ತದೆ. ಹುಂಡಿಗೆ ಹಣವೂ ಬೀಳುತ್ತಿದೆ.
ಆದರೆ ಈ ಹಣದಲ್ಲಿ ಒಂದಷ್ಟು ವ್ಯಯ ಮಾಡಿ ಕಪಿಲ ನದಿಯನ್ನು ಸ್ವಚ್ಛಗೊಳಿಸುವ ಕೆಲಸವನ್ನು ಮಾಡಬೇಕಾಗಿದೆ. ಆದರೆ ಯಾರು ಕೂಡ ಈ ಬಗ್ಗೆ ಗಮನಹರಿಸುತ್ತಿಲ್ಲ. ಪರಿಣಾಮ ಪಟ್ಟಣದ ತ್ಯಾಜ್ಯವೆಲ್ಲ ನದಿಯಲ್ಲಿ ವಿಲೀನವಾಗುತ್ತಿದೆ. ಇದ್ಯಾವುದರ ಅರಿವಿಲ್ಲದ ಭಕ್ತರು ನದಿಯಲ್ಲಿ ಸ್ನಾನ ಮಾಡುತ್ತಾರೆ.
ಇದು ಹೀಗೆಯೇ ಮುಂದುವರೆದರೆ ಸ್ನಾನ ಮಾಡಿದವರು ಕಾಯಿಲೆಗಳಿಗೆ ಒಳಗಾಗುವ ಸಾಧ್ಯತೆ ಇಲ್ಲದಿಲ್ಲ. ಇನ್ನಾದರೂ ಸ್ಥಳೀಯ ಆಡಳಿತ ಇತ್ತ ಗಮನಹರಿಸಿ ಪಟ್ಟಣದ ತ್ಯಾಜ್ಯ ನೀರುಗಳು ನದಿಗೆ ಸೇರದಂತೆ ನೋಡಿಕೊಳ್ಳಬೇಕಾಗಿದೆ. ಇಲ್ಲದೆ ಹೋದರೆ ದೇವರ ದರ್ಶನಕ್ಕೆ ಆಗಮಿಸುವ ಭಕ್ತರು ಸ್ಥಳೀಯ ಆಡಳಿತಕ್ಕೆ ಹಿಡಿಶಾಪ ಹಾಕುವ ದಿನಗಳು ದೂರವಿಲ್ಲ.