ಬೇಸಿಗೆಯಲ್ಲಿ ಪ್ರಾಣಿ-ಪಕ್ಷಿಗಳ ದಾಹ ನೀಗಿಸುತ್ತಿರುವ ಮೈಸೂರು ಕನ್ನಡ ವೇದಿಕೆ ತಂಡ
ಮೈಸೂರು, ಏಪ್ರಿಲ್ 1: ಬೇಸಿಗೆ ಬಂತೆಂದರೆ ಪ್ರತಿಯೊಬ್ಬರೂ ಬಿಸಿಲಿನ ಬೇಗೆ ತಾಳಲಾರದೆ ಅಬ್ಬಬ್ಬಾ.! ಎಂತ ಬಿಸಿಲಪ್ಪ ಅನ್ನೋ ಪರಿಸ್ಥಿತಿ ಇದೆ. ಅದರಲ್ಲೂ ಮೈಸೂರಿನಂತಹ ನಗರದಲ್ಲಿ ಬಿಸಿಲಿನ ಧಗೆಯಿಂದ ತಪ್ಪಿಸಿಕೊಳ್ಳಲೂ ಕೂಲ್ ಕೂಲ್ ಜ್ಯೂಸ್ ಅಥವಾ ತಣ್ಣನೆಯ ನೀರು ಬೇಕೇ ಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೀಗಿರುವಾಗ ನಗರ ಪ್ರದೇಶಗಳಲ್ಲಿ ವಾಸಿಸುವ ಮೂಕ ಪ್ರಾಣಿ-ಪಕ್ಷಿಗಳ ಕಥೆ ಏನಾಗಿರಬೇಡ ಅಂತ ಒಮ್ಮೆ ಯೋಚಿಸಿದರೂ ಅಯ್ಯೊ ಪಾಪ ಎನಿಸುತ್ತೆ. ಇಲ್ಲೊಂದು ತಂಡ ಪರಿಸರ ಮತ್ತು ಪ್ರಾಣಿ, ಪಕ್ಷಿಗಳನ್ನೂ ಬದುಕಿಸುವ ಪ್ರಯತ್ನ ನಡೆಸಿ ಪರಿಸರ ಕಾಳಜಿ ಮೆರೆಯುತ್ತಿದೆ.
ಬೇಸಿಗೆಯಲ್ಲಿ ನೀರು ಆಹಾರವನ್ನಿಟ್ಟು ಪ್ರಾಣಿ-ಪಕ್ಷಿಗಳ ರಕ್ಷಿಸೋಣ
ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಸಮಯ ಸಿಕ್ಕಾಗಲೆಲ್ಲಾ ಪ್ರಾಣಿ ಪಕ್ಷಿ ಮತ್ತು ಪರಿಸರಕ್ಕೆ ನೆರವಾಗುತ್ತಾ ಬಂದಿದ್ದಾರೆ. ನಾವು ಚೆನ್ನಾಗಿದ್ದರೆ ಸಾಲದು ನಮ್ಮ ಜೊತೆಗಿನ ಪರಿಸರವೂ ಚೆನ್ನಾಗಿರಬೇಕು ಎಂದು ಯೋಚಿಸಿರುವ ಈ ತಂಡ, ಪ್ರಾಣಿ-ಪಕ್ಷಿಗಳ ದಣಿವಾರಿಸಲು ಅಗತ್ಯವಿರುವ ಕಡೆ ನೀರು ಪೂರೈಕೆ ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳಿಂದ ಮರಗಳಿಗೆ ಮಣ್ಣಿನ ಮಡಿಕೆ ಕಟ್ಟಿ ನೀರು ಪೂರೈಸುತ್ತಿರುವ ಇವರು ತಮ್ಮ ಸ್ವಂತ ಖರ್ಚಿನಲ್ಲಿ ಮಡಿಕೆ ಖರೀಧಿಸಿ ಪ್ರಾಣಿ ಪಕ್ಷಿ ಸಂಕುಲದ ಜೀವ ಉಳಿಸಲು ಮುಂದಾಗಿದ್ದಾರೆ. ಇವರ ಈ ಮಾನವೀಯ ಕೆಲಸ ಜನರ ಪ್ರಶಂಸೆಗೆ ಪಾತ್ರವಾಗಿದೆ.
ಒಟ್ಟಾರೆ ಬೇಸಿಗೆಯ ಸುಡು ಬಿಸಿಲಿಗೆ ಮನುಷ್ಯನ ಜತೆಗೆ ಪ್ರಾಣಿ ಪಕ್ಷಿಗಳು ತತ್ತರಿಸುತ್ತಿವೆ ಈ ಪರಿಸ್ಥಿತಿಯಲ್ಲಿ ಪ್ರಾಣಿ ಹಾಗೂ ಪಕ್ಷಿಗಳಿಗೂ ಗುಟುಕು ನೀರು ನೀಡುತ್ತಿರುವ ಮೈಸೂರು ಕನ್ನಡ ವೇದಿಕೆಯ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ.
Recommended Video
ಕ್ಷಣ ಕ್ಷಣದ ಸುದ್ದಿಗಳಿಗಾಗಿ ಒನ್ ಇಂಡಿಯಾ ಕನ್ನಡ ಟೆಲಿಗ್ರಾಂ ಚಾನಲ್ ಸೇರಿ