ಕನ್ನಡ ಶಾಲೆ ಮುಚ್ಚದಂತೆ ಕನ್ನಡಪರ ಹೋರಾಟಗಾರರ ಪ್ರತಿಭಟನೆ
ಮೈಸೂರು, ಅಕ್ಟೋಬರ್ 12: ಕನ್ನಡ ಪ್ರಾಥಮಿಕ ಶಾಲೆಯೊಂದನ್ನು ಶಿಕ್ಷಣ ಇಲಾಖೆ ಮುಚ್ಚಲು ಮುಂದಾಗಿರುವುದನ್ನು ವಿರೋಧಿಸಿ ಇಂದು ಮೈಸೂರಿನಲ್ಲಿ ಪ್ರತಿಭಟನೆ ನಡೆಸಲಾಗಿದೆ.
ಇಲ್ಲಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಮಹಾರಾಣಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಬಾರದೆಂದು ಕನ್ನಡಪರ ಹೋರಾಟಗಾರರು ಶಾಲೆಯ ಎದುರು ಪ್ರತಿಭಟನೆ ನಡೆಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಸ್ಮಶಾನದಲ್ಲೇ ನಿರ್ಮಾಣವಾದ ಕನ್ನಡ ಶಾಲೆಯಲ್ಲಿ ಅಕ್ಷರ ದಾಸೋಹ
ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರೊ.ನಂಜರಾಜೇ ಅರಸ್ ಮಾತನಾಡಿ, "ಇಲ್ಲಿ ಕಲಿಯುವವರೆಲ್ಲ ಬಡಮಕ್ಕಳೇ ಆಗಿದ್ದಾರೆ. ಅವರಿಗೆ ಹೆಚ್ಚಿನ ಪ್ರಮಾಣದಲ್ಲಿ ಶಾಲಾ ಶುಲ್ಕ ಭರಿಸಲು ಶಕ್ತಿ ಇಲ್ಲ. ಈ ವರ್ಷ 48 ಮಕ್ಕಳು ಇಲ್ಲಿ ಕಲಿಯುತ್ತಿದ್ದು, ಶಾಲೆ ಮುಚ್ಚಿದರೆ ಅವರ ಭವಿಷ್ಯಕ್ಕೆ ಕುತ್ತಾಗಲಿದೆ" ಎಂದರು.
ಪ್ರತಿಭಟನಾಕಾರರು ಕನ್ನಡ ಶಾಲೆ ಉಳಿಯಲಿ, ಕನ್ನಡ ವಿರೋಧಿಗಳಿಗೆ ಧಿಕ್ಕಾರ, ಇತಿಹಾಸವಿರುವ ಕನ್ನಡ ಶಾಲೆ ಉಳಿಯಲಿ ಉಳಿಯಲಿ ಎಂದು ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ಕನ್ನಡಪರ ಹೋರಾಟಗಾರರಾದ ಪ.ಮಲ್ಲೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.