ಜೀವದ ಹಂಗು ತೊರೆದು ಕಬಿನಿ ಜಲಾಶಯ ಕ್ರಸ್ಟ್ ಗೇಟ್ ಬಳಿ ಸಿಬ್ಬಂದಿಯ ದುರಸ್ತಿ ಕೆಲಸ
ಮೈಸೂರು, ಆಗಸ್ಟ್ 11 : ಮಳೆಯ ಆರ್ಭಟದಿಂದಾಗಿ ಈಗಾಗಲೇ ಕಬಿನಿ ಜಲಾಶಯದಿಂದ ನದಿಗಳಿಗೆ 1 ಲಕ್ಷ ಕ್ಯೂಸೆಕ್ ನೀರು ಹರಿಯಬಿಡಲಾಗುತ್ತಿದೆ. ಈ ನಡುವೆ ಡ್ಯಾಂ ಗೇಟ್ ನ ವೈಪರ್ ವಯರ್ ಕಡಿತಗೊಂಡು ಅಲ್ಲಿನ ಸಿಬ್ಬಂದಿ ಜೀವದ ಹಂಗು ತೊರೆದು, ಕ್ರಸ್ಟ್ ಗೇಟ್ ಬಳಿ ನಿಂತು ಕೆಲಸ ಮಾಡುತ್ತಿದ್ದು ಸ್ಥಳೀಯರು ವಿಡಿಯೋ ಮಾಡಿದ್ದಾರೆ.
ಕೆ ಆರ್ ಎಸ್, ಕಬಿನಿ ಭರ್ತಿಗೆ ಕೆಲವೇ ಅಡಿಗಳಷ್ಟು ಬಾಕಿ
ಈಗಾಗಲೇ ಕಬಿನಿ ಡ್ಯಾಂನಿಂದ 4 ಗೇಟ್ ಮೂಲಕ ನೀರು ಹರಿಸಲಾಗುತ್ತಿದೆ. ಈಗಾಗಲೇ 3 ಗೇಟ್ ನಿಂದ 1 ಲಕ್ಷ ಕ್ಯೂಸೆಕ್ ನೀರು ಹರಿದು ಹೋಗುತ್ತಿದ್ದು, 3 ಗೇಟ್ ಗಳ ಮೇಲೆ ಒತ್ತಡ ಹೆಚ್ಚಿದೆ. ಸದ್ಯ ಕಳೆದ ನಾಲ್ಕು ದಿನದಿಂದ ಮೊದಲ ಗೇಟ್ ನ ವೈಪರ್ ವಯರ್ ಕಡಿತಗೊಂಡು, ಸಿಬ್ಬಂದಿ ಕ್ರಸ್ಟ್ ಗೇಟ್ ಬಳಿ ನಿಂತು ಕೆಲಸ ಮಾಡುತ್ತಿದ್ದಾರೆ. ರಾತ್ರಿ ವೇಳೆಯಲ್ಲೂ ಸಿಬ್ಬಂದಿ ಡ್ಯಾಂ ಕೆಲಸ ಮಾಡುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಡ್ಯಾಂನ ವೈಪರ್ ಕಟ್ ಆಗಿರುವ ಬಗ್ಗೆ ಮಾಹಿತಿ ಇದ್ದರೂ ಅಧಿಕಾರಿಗಳು ಜಾಣಮೌನ ಪ್ರದರ್ಶಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ರಿಪೇರಿ ಮಾಡಿಸಲು ಅಧಿಕಾರಿಗಳು ಮುಂದಾಗದೆ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇಷ್ಟು ದಿನ ಸುಮ್ಮನಿದ್ದು, ಡ್ಯಾಂನ ಗೇಟ್ ಎತ್ತುವ ವೈಪರ್ ವೈಯರ್ ರಿಪೇರಿ ಮಾಡಿಸಲು ಮುಂದಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗೆ ಸಿಬ್ಬಂದಿ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದು, ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.