ಕಬಿನಿ ವ್ಯಾಪ್ತಿಯ ಗ್ರಾಮಗಳ ರೈತರದು ಸಂಕಷ್ಟದ ಬದುಕು!
ಮೈಸೂರು, ಆಗಸ್ಟ್ 10: ಕಣ್ಣು ಹಾಯಿಸಿದಲ್ಲೆಲ್ಲ ನೀರು. ಮುಳುಗಡೆಯಾದ ಭತ್ತ, ಕಬ್ಬು, ಬಾಳೆ ಬೆಳೆಗಳು.. ರಸ್ತೆ ಸಂಪರ್ಕವಿಲ್ಲದೆ ಪರದಾಟ.. ಇದು ಕಬಿನಿ ಜಲಾಶಯ ವ್ಯಾಪ್ತಿಯ ಗ್ರಾಮಗಳಲ್ಲಿ ಕಂಡು ಬರುತ್ತಿರುವ ಜನರ, ರೈತರ ಸಂಕಷ್ಟದ ಚಿತ್ರಣಗಳು..
ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಬಿನಿ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಹೆಚ್ಚುವರಿ ನೀರನ್ನು ಅನಿವಾರ್ಯವಾಗಿ ನದಿಗೆ ಬಿಟ್ಟಿರುವುದರಿಂದ ತಗ್ಗುಪ್ರದೇಶಗಳು ಜಲಾವೃತವಾಗಿದ್ದು, ರೈತರ ಜಮೀನು ನೀರಿನಲ್ಲಿ ಮುಳುಗಿದ್ದರೆ, ರಸ್ತೆ ಸಂಪರ್ಕ ಕಡಿತಗೊಂಡಿದೆ.
ಭಾರಿ ಮಳೆ ಸುರಿದರೂ ರಾಜ್ಯದ 18 ಜಿಲ್ಲೆಗಳಲ್ಲಿ ಮಳೆ ಕೊರತೆ
ಇನ್ನು ಕೇರಳದಲ್ಲಿ ಮಳೆಯ ಆರ್ಭಟ ಹಾಗೂ ಭೂ ಕುಸಿತಕ್ಕೆ ಒಂದೇ ದಿನದಲ್ಲಿ ಇಬ್ಬರು ಮಕ್ಕಳು ಸೇರಿದಂತೆ 22 ಮಂದಿ ಮೃತಪಟ್ಟಿದ್ದಾರೆ. ಮೂವರು ಕಾಣೆಯಾಗಿದ್ದಾರೆ. ನದಿಗಳು ಮೈದುಂಬಿ ಹರಿಯುತ್ತಿದೆ. ನದಿ ತೀರದ ಮನೆಗಳು ಹಾಗೂ ಗ್ರಾಮಗಳಿಗೆ ನೀರು ನುಗ್ಗಿ , ಮನೆಗಳು ಜಲಾವೃತವಾಗಿದೆ.
ಇಡುಕಿಯಲ್ಲಿ ಸಂಭವಿಸಿದ ಭೂಕುಸಿತಕ್ಕೆ 10 ಮಂದಿ, ಮಲ್ಲಪುರಂನಲ್ಲಿ 5 ಮಂದಿ, ಕಣ್ಣೂರಿನಲ್ಲಿ 2 ಮಂದಿ, ವಯನಾಡಿನಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ. ಈ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಭೀತಿ ಎದುರಾಗಿದೆ.
50 ವರ್ಷಗಳಿಂದ ಈ ಪರಿಸ್ಥಿತಿ ಬಂದಿರಲಿಲ್ಲ
ಕಬಿನಿ ಜಲಾಶಯ ವ್ಯಾಪ್ತಿಗೆ ಬರುವ ಗ್ರಾಮೀಣ ಪ್ರದೇಶಗಳ ಜನ ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಸುಮಾರು ನಾಲ್ಕೈದು ದಶಕಗಳ ಹಿಂದೆ ಇಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಮೆಲುಕು ಹಾಕುತ್ತಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಮಳೆಯಿಲ್ಲದೆ ಅನಾವೃಷ್ಠಿಯಿಂದ ಸಂಕಷ್ಟ ಎದುರಿಸಿದ ರೈತರು ಇದೀಗ ಅತಿವೃಷ್ಠಿಯಿಂದ ಪರದಾಡುವಂತಾಗಿದೆ.
ರೈತರ ಜಮೀನಿಗೆ ನುಗ್ಗುತ್ತಿರುವ ನೀರು
ಕೆಲವು ದಿನಗಳ ಕಾಲ ಬಿಡುವುಕೊಟ್ಟಿದ್ದ ಮಳೆ ಮತ್ತೆ ಕೇರಳದಲ್ಲಿ ಸುರಿಯುತ್ತಿರುವುದರಿಂದಾಗಿ ಅಲ್ಲಿಂದ ನೀರು ಹರಿದು ಬಂದು ಕಬಿನಿ ಜಲಾಶಯವನ್ನು ಸೇರುತ್ತಿದೆ. ಇದರಿಂದಾಗಿ ಸದ್ಯ ಸುಮಾರು 50ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಹೀಗಾಗಿ ನೀರು ಎಲ್ಲೆಂದರಲ್ಲಿ ರೈತರ ಜಮೀನಿಗೆ ನುಗ್ಗುತ್ತಿದೆ. ಪರಿಣಾಮ ಈ ವ್ಯಾಪ್ತಿಯ ಸಾಗರೆ ಮಾಗುಡಿಲ್ಲುಗೆ ತೆರಳುವ ರಸ್ತೆ ನೀರಿನಲ್ಲಿ ಮುಳಗಡೆಯಾಗಿದ್ದು, ಜನ ರಸ್ತೆ ಸಂಪರ್ಕವಿಲ್ಲದೆ ಪರದಾಡುವಂತಾಗಿದೆ. ಮುಂಗಾರು ಉತ್ತಮವಾಗಿದ್ದರಿಂದ ಸಂತಸದಿಂದ ರೈತರು ಮಾಡಿದ್ದ ಭತ್ತದ ಕೃಷಿ ನೀರುಪಾಲಾಗಿದೆ.
ರೈತರಿಗೆ ಗಾಯದ ಮೇಲೆ ಬರೆ
ಈಗಾಗಲೇ ಸಾಲ ಮಾಡಿಕೊಂಡು ಸಂಕಷ್ಟದಲ್ಲಿರುವ ರೈತರಿಗೆ ಇದೀಗ ಗಾಯದ ಮೇಲೆ ಬರೆ ಹಾಕಿದಂತಾಗಿದೆ. ಕೇರಳದಲ್ಲಿ ಮಳೆ ಕಡಿಮೆಯಾದರೆ ಮಾತ್ರ ಕಬಿನಿ ಜಲಾಶಯದಿಂದ ಬಿಡುಗಡೆ ಮಾಡುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗಲು ಸಾಧ್ಯ. ಇಲ್ಲದಿದ್ದರೆ ಜಲಾಶಯದ ವ್ಯಾಪ್ತಿಗೊಳಪಡುವ ರೈತರ ಸಮಸ್ಯೆ ಮುಂದುವರೆಯಲಿದೆ.
ರೈತರದು ಮಳೆ ನಿಲ್ಲುವುದನ್ನು ಕಾಯೋ ಸ್ಥಿತಿ
ಇಷ್ಟರಲ್ಲಿಯೇ ನದಿ ದಡದ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕಿತ್ತು. ಆದರೆ ಪ್ರವಾಹ ಪರಿಸ್ಥಿತಿ ತಲೆದೋರಿದ ಕಾರಣ ಮಾಡಿದ ಬೆಳೆ ನೀರುಪಾಲಾಗಿದೆ. ಇದುವರೆಗೆ ಪ್ರವಾಹದ ಭಯವಿಲ್ಲದೆ ತಮ್ಮ ಪಾಡಿಗೆ ಕೃಷಿ ಮಾಡಿಕೊಂಡಿದ್ದ ರೈತರ ಜಮೀನಿಗೂ ನೀರು ನುಗ್ಗಿದ್ದು ಬೆಳೆ ನಾಶವಾಗಿದೆ. ಇದು ರೈತರನ್ನು ದುಃಖದ ಮಡುವಿಗೆ ತಳ್ಳಿದೆ. ಒಟ್ಟಾರೆ ಈ ಬಾರಿಯ ಮುಂಗಾರು ಮಲೆನಾಡು ಮತ್ತು ಬಯಲು ಸೀಮೆಯ ರೈತರಿಗೆ ಸಂಕಷ್ಟವನ್ನು ತಂದಿರುವುದಂತು ಸತ್ಯ. ಸದ್ಯ ಮಳೆ ಯಾವಾಗ ಕಡಿಮೆಯಾಗುತ್ತದೆಯೋ ಎಂದು ಕಾಯುವಂತಾಗಿದೆ.