ಮರೀಗೌಡ ಶರಣಾಗತಿ, ನ್ಯಾಯಾಂಗ ಬಂಧನ, ಜಾಮೀನಿಗೆ ಅರ್ಜಿ
ಮೈಸೂರು, ಆಗಸ್ಟ್ 03 : ಕಾಂಗ್ರೆಸ್ ಮುಖಂಡ ಕೆ.ಮರೀಗೌಡ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಎದುರಿಸುತ್ತಿರುವ ಮರೀಗೌಡ ಅವರು ಬುಧವಾರ ಮಧ್ಯಾಹ್ನ ಪೊಲೀಸರ ಮುಂದೆ ಶರಣಾಗಿದ್ದರು.
ಮೈಸೂರಿನ ನಜರಾಬಾದ್ ಠಾಣೆ ಪೊಲೀಸರು ಬುಧವಾರ ಸಂಜೆ ಮರೀಗೌಡ ಅವರನ್ನು 3ನೇ ಜೆಎಂಎಫ್ಸಿ ಕೋರ್ಟ್ಗೆ ಹಾಜರುಪಡಿಸಿದರು. ನ್ಯಾಯಾಧೀಶೆ ಜಿ.ದೀಪಾ ಅವರು 14 ದಿನಗಳ ಕಾಲ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಮರೀಗೌಡ ಅವರನ್ನು ಮೈಸೂರಿನ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.[ಪೊಲೀಸರ ಮುಂದೆ ಶರಣಾದ ಕೆ.ಮರೀಗೌಡ]
ಜಾಮೀನಿಗೆ ಅರ್ಜಿ : ಮರೀಗೌಡ ಅವರ ಪರ ವಕೀಲರಾದ ಸಿ.ಎಂ.ಜಗದೀಶ್ ಅವರು ನ್ಯಾಯಾಲಯದ ಮುಂದೆ ಜಾಮೀನು ನೀಡಬೇಕು ಎಂದು ಅರ್ಜಿ ಸಲ್ಲಿಸಿದರು. ಕೋರ್ಟ್ ಅರ್ಜಿಯ ವಿಚಾರಣೆಯನ್ನು ಆಗಸ್ಟ್ 4ಕ್ಕೆ ಮುಂದೂಡಿದೆ.[ಮರೀಗೌಡ ನಿರೀಕ್ಷಣಾ ಜಾಮೀನು ಅರ್ಜಿ ವಾಪಸ್]
ಜುಲೈ 4ರಂದು ತಮ್ಮ ವಿರುದ್ಧ ದೂರು ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಕೆ.ಮರೀಗೌಡ ಅವರು ಮೈಸೂರು ಜೆಎಂಎಫ್ಸಿ ಕೋರ್ಟ್ಗೆ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿತ್ತು. ನಂತರ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು, ಆದರೆ, ಅಲ್ಲಿಯೂ ಜಾಮೀನು ಸಿಕ್ಕಿರಲಿಲ್ಲ. ಆಗಸ್ಟ್ 2ರ ಮಂಗಳವಾರ ಅವರು ಜಾಮೀನು ಅರ್ಜಿಯನ್ನು ವಾಪಸ್ ಪಡೆದಿದ್ದರು.[ಮರೀಗೌಡನ ಬಂಧನಕ್ಕಾಗಿ ಮೈಸೂರಲ್ಲಿ ಹಾರಿತು ಗಾಳಿಪಟ!]
ಎಲ್ಲಿಯೂ ಜಾಮೀನು ಸಿಗದ ಕಾರಣ ಆಗಸ್ಟ್ 3ರ ಬುಧವಾರ ಮೈಸೂರಿನ ನಜರಾಬಾದ್ ಠಾಣೆಗೆ ವಕೀಲರ ಜೊತೆ ಬಂದು ಶರಣಾಗಿದ್ದರು. ಗುರುವಾರ ಅವರಿಗೆ ಜಾಮೀನು ಸಿಗುವುದೇ ಎಂದು ಕಾದು ನೋಡಬೇಕು.