ನಂಜನಗೂಡು ಜುಬಿಲಿಯಂಟ್ ಕಾರ್ಖಾನೆ ಕುರಿತು ಡಿಸಿ ಹೇಳುತ್ತಿರುವುದೇನು?
ಮೈಸೂರು, ಏಪ್ರಿಲ್ 07: ಮೈಸೂರಿನಲ್ಲಿ ಮೊದಲ ಕೊರೊನಾ ಪ್ರಕರಣದ ಸೋಂಕಿತ ವ್ಯಕ್ತಿ ಗುಣಮುಖನಾಗಿದ್ದು, ಡಿಸ್ಚಾರ್ಜ್ ಆಗುವ ಸಾಧ್ಯತೆ ಇರುವುದಾಗಿ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.
"ಇಂದು ಅವರಿಗೆ ಎರಡನೇ ಸ್ಯಾಂಪಲ್ ಟೆಸ್ಟ್ ಮಾಡುತ್ತಿದ್ದೇವೆ. ಅವರೀಗ ಸಂಪೂರ್ಣ ಗುಣಮುಖರಾಗಿದ್ದಾರೆ. ಇಂದಿಗೆ ಅವರ ಕ್ವಾರಂಟೈನ್ ಅವಧಿ ಮುಕ್ತಾಯವಾಗಿದೆ.
ಕ್ವಾರಂಟೈನ್ ಪೋಸ್ಟರ್ ಕಿತ್ತರೆ ಕ್ರಿಮಿನಲ್ ಕೇಸ್: ಮೈಸೂರು ಡಿಸಿ
ಇಂದು ಅವರ ಪರೀಕ್ಷೆ ನಡೆಸಿ ವರದಿ ತರಿಸಿಕೊಂಡು ಇಂದು ಅಥವಾ ನಾಳೆಯಲ್ಲಿ ಅವರನ್ನು ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ" ಎಂದು ತಿಳಿಸಿದ್ದಾರೆ. ಈ ನಡುವೆ ನಂಜನಗೂಡಿನ ಜುಬಿಲಿಯಂಟ್ ಕಾರ್ಖಾನೆ ವ್ಯಕ್ತಿಗಳಿಗೆ ತಗುಲಿರುವ ಸೋಂಕಿನ ಮೂಲದ ಕುರಿತೂ ತನಿಖೆ ನಡೆಯುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾಹಿತಿ ನೀಡಿದ್ದಾರೆ.
ವರದಿ ನೆಗೆಟಿವ್ ಬರುವವರೆಗೂ ಕಾರ್ಖಾನೆ ತೆರೆಯಲ್ಲ
ಇದೇ ಸಂದರ್ಭ ನಂಜನಗೂಡು ಜುಬಿಲಿಯಂಟ್ ಕಾರ್ಖಾನೆ ತೆರೆಯುವ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ, "ಎಲ್ಲರ ವರದಿ ನೆಗೆಟಿವ್ ಬರುವವರೆಗೆ ಕಾರ್ಖಾನೆ ಬಂದ್ ಮಾಡುವುದು ಅನಿವಾರ್ಯ. ಇಡೀ ಕಾರ್ಖಾನೆ ಸಿಬ್ಬಂದಿ ವರದಿ ನೆಗೆಟಿವ್ ಬಂದ ಮೇಲಷ್ಟೇ ಮತ್ತೆ ಕಾರ್ಖಾನೆ ತೆರೆಯಲು ಅವಕಾಶ" ಎಂದು ತಿಳಿಸಿದರು.
"ಎಸ್ ಪಿ ರಿಷ್ಯಂತ್ ಉತ್ತರಿಸುತ್ತಾರೆ"
ಕಾರ್ಖಾನೆ ನೌಕರರಿಗೆ ಕೊರೊನಾ ಹೇಗೆ ತಗುಲಿತು ಎಂಬುದರ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ. ಕಂಟೈನರ್ ಮೂಲಕ ಹರಡಿರುವ ಸಾಧ್ಯತೆಗಳ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ. ಪುಣೆ ಲ್ಯಾಬ್ ಗೆ ಮಾದರಿಗಳನ್ನು ಕಳುಹಿಸಿದ್ದೇವೆ, ವರದಿ ನಿರೀಕ್ಷೆಯಲ್ಲಿದ್ದೇವೆ. ಕಾರ್ಖಾನೆ ನಿರ್ಲಕ್ಷ್ಯದ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಚೀನಾದಿಂದ ನಂಜನಗೂಡಿಗೆ ಕಂಟೇನರ್ ಮೂಲಕ ಪ್ರಯಾಣ ಬೆಳೆಸಿತ್ತಾ ಕೊರೊನಾ...
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಶ್ಯಂತ್ ತನಿಖೆ ನಡೆಸುತ್ತಿದ್ದಾರೆ. ಕಾರ್ಖಾನೆ ಸ್ಪಂದಿಸುತ್ತಿಲ್ಲ ಅನ್ನುವ ಮಾಹಿತಿಗೆ ಎಸ್ಪಿ ಅವರೇ ಉತ್ತರ ಕೊಡ್ತಾರೆ.
ಪರೀಕ್ಷೆಗೆ ಪುಣೆಗೆ ಹೋಗಿರುವ ಮಾದರಿ
ಚೀನಾದಿಂದ ಬಂದ ಕಂಟೈನರ್ ಹಾಗೂ ಕಚ್ಚಾ ವಸ್ತುಗಳ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ನಮ್ಮಲ್ಲಿ ಕಂಟೈನರ್ ಹಾಗೂ ಕಚ್ಚಾವಸ್ತು ಸ್ಯಾಂಪಲ್ ಪರೀಕ್ಷೆ ಮಾಡುವ ವ್ಯವಸ್ಥೆ ಇಲ್ಲ. ಈ ಹಿನ್ನೆಲೆ ಜುಬಿಲೆಂಟ್ ಕಾರ್ಖಾನೆಯ ಎಲ್ಲ ಸ್ಯಾಂಪಲ್ ಟೆಸ್ಟ್ ಪುಣೆಯಲ್ಲಿ ನಡೆಯುತ್ತಿದೆ. ಶೀಘ್ರದಲ್ಲೇ ಅದರ ವರದಿ ನಮ್ಮ ಕೈಸೇರಲಿದೆ. ವರದಿ ಬಂದ ನಂತರ ಕಂಟೈನರ್ ಅಥವಾ ಕಚ್ಚಾವಸ್ತುವಿನಿಂದ ಸೋಂಕು ಬಂದಿದೆಯಾ ಎಂಬುದು ತಿಳಿಯಲಿದೆ. ಅದನ್ನು ಬಿಟ್ಟರೆ ಉಳಿದೆಲ್ಲ ತನಿಖೆಯನ್ನು ಪೊಲೀಸರೇ ಮಾಡುವರು ಎಂದು ತಿಳಿಸಿದ್ದಾರೆ.
"ಕೊರೊನಾ ಸಾಮಾಜಿಕವಾಗಿ ಹರಡುತ್ತಿಲ್ಲ"
ಮೈಸೂರಿನಲ್ಲಿ ಕೊರೊನಾ ಸಾಮಾಜಿಕವಾಗಿ ಹರಡುತ್ತಿಲ್ಲ. ನಮಗೆ ಗೊತ್ತಿಲ್ಲದ ಯಾವುದೋ ವ್ಯಕ್ತಿಗಳಿಗೆ ಸೋಂಕು ಹರಡಿಲ್ಲ. ಆದ್ದರಿಂದ ವೈರಾಣು ಸಾಮಾಜಿಕವಾಗಿ ಹರಡುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ. ಜುಬಿಲಿಯೆಂಟ್ ಕಾರ್ಖಾನೆ ಕಾರ್ಮಿಕರು ಹಾಗೂ ಕುಟುಂಬದವರಿಗೆ ಪಾಸಿಟಿವ್ ಆಗಿದೆ. ದೆಹಲಿಯಿಂದ ಬಂದವರ ಗುರುತು ಪತ್ತೆಯಾಗಿದೆ. ನಾವು ಕ್ವಾರಂಟೈನ್ ಮಾಡಿದ್ದ ವ್ಯಕ್ತಿಗಳಿಗೆ ಪಾಸಿಟಿವ್ ಆಗಿದೆ. ನಿಜಾಮುದ್ದೀನ್ ಜಮಾತ್ ಗೆ ಸಂಬಂಧಪಟ್ಟವರು 17 ಜನರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದರು. ಇಷ್ಟಾಗಿಯೂ ನಮ್ಮ ಗಮನಕ್ಕೆ ಬಾರದೆ ಇರುವ ಯಾವುದೋ ವ್ಯಕ್ತಿಯಲ್ಲಿ ಕೊರೊನಾ ಕಾಣಿಸಿಕೊಂಡಿಲ್ಲ. ಇದು ನಮಗೆ ಸಮಾಧಾನ ತರುವ ವಿಷಯ ಎಂದು ಹೇಳಿದ್ದಾರೆ.