ಡಿಸ್ಜಾರ್ಜ್ ನಂತರ ಬಹಿರಂಗ ಪತ್ರ ಬರೆದ ಜುಬಿಲಿಯಂಟ್ ಕಂಪನಿ ಮೊದಲ ಸೋಂಕಿತ
ಮೈಸೂರು, ಏಪ್ರಿಲ್ 11: ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿದ್ದ, ನಂಜನಗೂಡಿನ ಜುಬಿಲಿಯಂಟ್ ಕಂಪನಿಯ ಮೊದಲ ಸೋಂಕಿತ ವ್ಯಕ್ತಿಯು ಇದೀಗ ಸಂಪೂರ್ಣ ಗುಣಮುಖರಾಗಿದ್ದು, ನಿನ್ನೆ ಆಸ್ಪತ್ರೆಯಿಂದ ಡಿಸ್ಟಾರ್ಜ್ ಮಾಡಲಾಗಿದೆ.
ಆಸ್ಪತ್ರೆಯಿಂದ ಡಿಸ್ಟಾರ್ಜ್ ಆದ ನಂತರ ಜಿಲ್ಲಾಡಳಿತಕ್ಕೆ ಇವರು ಬಹಿರಂಗ ಪತ್ರ ಬರೆದಿದ್ದು, ತನಗೆ ಚಿಕಿತ್ಸೆ ನೀಡಿದ ಜಿಲ್ಲಾಡಳಿತ, ಆಸ್ಪತ್ರೆ ಸಿಬ್ಬಂದಿ ಹಾಗೂ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ. ಆ ಪತ್ರದಲ್ಲೇನಿದೆ ನೋಡೋಣ...
"ನನ್ನನ್ನು ಗುಣಮುಖರನ್ನಾಗಿ ಮಾಡಿದ್ದಾರೆ"
ನನಗೆ 10 ದಿನಗಳ ಹಿಂದೆ ಜ್ವರ ಇತ್ತು. ಮೊದಲು ಸ್ಥಳೀಯ ಕ್ಲಿನಿಕ್ಗೆ ತೋರಿಸಿದ್ದೆ. ಮಾರ್ಚ್ 21ರಂದು ನಾನು ಗೋಪಾಲಗೌಡ ಆಸ್ಪತ್ರೆಗೆ ದಾಖಲಾಗಿದ್ದೆ. ನಂತರ ಮಾರ್ಚ್ 25ರಂದು ಕೆ.ಆರ್.ಆಸ್ಪತ್ರೆಗೆ ಕರೆತಂದರು. ನನಗೆ ಎಲ್ಲ ರೀತಿಯ ಪರೀಕ್ಷೆ ಮಾಡಿದರು, ಲಸಿಕೆ ಹಾಕಿದರು. ಮಾರ್ಚ್ 30ರಂದು ನನ್ನನ್ನು ಇ ಡಿ ಆಸ್ಪತ್ರೆಗೆ ಕಳುಹಿಸಿದರು. 14 ದಿನಗಳ ಕಾಲ ನನಗೆ ಚಿಕಿತ್ಸೆ ನೀಡಿ ನನ್ನನ್ನು ಗುಣಮುಖರನ್ನಾಗಿ ಮಾಡಿದ್ದಾರೆ.
"ಸರ್ಕಾರ ಹೇಳಿದಂತೆ ನಡೆದುಕೊಳ್ಳಿ"
"ಕೊರೊನಾ ಪೀಡಿತರನ್ನು ಸರ್ಕಾರ ಚೆನ್ನಾಗಿ ನೋಡಿಕೊಳ್ಳುತ್ತದೆ. ಸರ್ಕಾರ ಹೇಳಿದ ರೀತಿಯನ್ನು ಎಲ್ಲರೂ ಕೇಳಿ. ಆರೋಗ್ಯ ಅಧಿಕಾರಿಗಳು ನೀಡುವ ಸಲಹೆಗಳನ್ನು ಕೇಳಿ. ಮತ್ತು ಆರೋಗ್ಯದಿಂದಿರಿ. ಕೊರೊನಾ ಸೋಂಕಿತರಿಗೆ ಸರ್ಕಾರ ಎಲ್ಲ ರೀತಿಯ ಸಹಾಯ ನೀಡುತ್ತಿದೆ. ಸರ್ಕಾರಕ್ಕೆ ಸಹಕಾರ ನೀಡಿ. ವೈದ್ಯರಿಗೆ, ಸರ್ಕಾರಕ್ಕೆ ಧನ್ಯವಾದ" ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಕಗ್ಗಂಟಾಗಿದ್ದ ವ್ಯಕ್ತಿಯ ಹಿನ್ನೆಲೆ
ಈ ಮೊದಲು ಕೊರೊನಾ ಸೋಂಕು ಜುಬಿಲಿಯಂಟ್ ಕಾರ್ಖಾನೆಯ ಈ ವ್ಯಕ್ತಿಯಲ್ಲಿ ಕಾಣಿಸಿಕೊಂಡಾಗ ಹಲವು ಅನುಮಾನಗಳು ಹುಟ್ಟಿಕೊಂಡಿದ್ದವು. ವಿದೇಶದಿಂದ ಬಂದವರ ಸಂಪರ್ಕ ಇಲ್ಲದಿದ್ದರೂ ಹೇಗೆ ಸೋಂಕು ತಗುಲಿತು ಎಂಬ ವಿಷಯವೇ ಮೊದಲು ಚರ್ಚೆಯಲ್ಲಿತ್ತು. ನಂತರ ಸೋಂಕಿನ ಮೂಲವನ್ನು ಪರಿಶೀಲಿಸುವ ಕೆಲಸ ಮುಂದುವರೆದಿತ್ತು. ಜೊತೆಗೆ ಈ ವ್ಯಕ್ತಿ ಸಂಪರ್ಕದಲ್ಲಿದ್ದವರನ್ನು ಹುಡುಕುವ ಕೆಲಸ ಆರಂಭಗೊಂಡಿತ್ತು.
ಇಂದಿನ ಪರಿಸ್ಥಿತಿ ಹೇಗಿದೆ
ಮೈಸೂರಿನಲ್ಲಿ ಇಂದು ಮತ್ತೆ ಐವರಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಈ ಐವರೂ ಜುಬಿಲಿಯಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಮೂವರು ರೂಂಮೇಟ್ ಗಳಾಗಿದ್ದವರು ಎಂದು ತಿಳಿದುಬಂದಿದೆ. ಹೀಗಾಗಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಗೆ ಸೂಚಿಸಲಾಗಿದೆ. ಜಿಲ್ಲಾಡಳಿತವೂ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ಎಲ್ಲಾ ಪ್ರಯತ್ನವನ್ನೂ ಮಾಡುತ್ತಿದೆ.