ರಾಮಾಯಣ ವಿವಾದ: ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಸ್ಪಷ್ಟೀಕರಣ
ಮೈಸೂರು, ಜನವರಿ 28: ನಿನ್ನೆ ( ಭಾನುವಾರ) ಮೈಸೂರಿನ ಮನೆಯಂಗಳದಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟುರವರು ರಾಮ, ಸೀತೆಯ ಕುರಿತಾಗಿ ಹೇಳಿಕೆಯೊಂದನ್ನು ನೀಡಿದ್ದು, ಎಲ್ಲೆಡೆ ವಿವಾದಕ್ಕೆ ಕಾರಣವಾಗಿತ್ತು. ಆದರೆ ನಾನು ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ದಿನೇಶ್ ಅಮಿನ್ ಮಟ್ಟುರವರು ಒನ್ ಇಂಡಿಯಾ ಕನ್ನಡಕ್ಕೆ ಸ್ಪಷ್ಟನೆ ನೀಡಿದ್ದಾರೆ. ಅವರು ನೀಡಿರುವ ಸ್ಪಷ್ಟೀಕೃತ ಸಾರಾಂಶ ಇಲ್ಲಿದೆ...
1. ರಾಮಾಯಣ ಮತ್ತು ಮಹಾಭಾರತ ಎಂಬ ಎರಡು ಕೃತಿಗಳನ್ನು ಪುರಾಣ, ಇತಿಹಾಸ ಮತ್ತು ಮಹಾಕಾವ್ಯಗಳಾಗೆ ಬೇರೆ ಬೇರೆ ನೋಟಗಳ ಮೂಲಕ ನೋಡಲು ಸಾಧ್ಯ ಇದೆ. ಮೊದಲನೆ ನೋಟದಲ್ಲಿ ಕಣ್ಣುಮುಚ್ಚಿ ಆರಾಧಿಸುವ ಭಕ್ತಿ ಇದೆ, ಎರಡನೇ ನೋಟದಲ್ಲಿ ಸಂಶೋಧನೆಯ ಕಣ್ಣು ಇದೆ, ಮೂರನೇ ನೋಟದಲ್ಲಿ ಸೃಜನಶೀಲ ಮನಸ್ಸಿನ ಹುಡುಕಾಟ ಇದೆ.
ಧಾರಣಾವಾದಿಗಳಿಂದ ಹಿಂದೂ ಧರ್ಮ ಉಳಿದಿದೆ : ದಿನೇಶ್ ಅಮಿನ್ ಮಟ್ಟು
2. ಪುರಾಣವನ್ನಾಗಿ ನೋಡುವವರಿಗೆ ರಾಮ, ಕೃಷ್ಣ ದೇವರಾಗಿದ್ದಾರೆ, ಅವರು ಕಣ್ಣುಮುಚ್ಚಿಕೊಂಡಿರುವುದರಿಂದ ಅವರಿಗೆ ಯಾವ ತಪ್ಪು-ಒಪ್ಪುಗಳು ಕಾಣುವುದಿಲ್ಲ. ಅವರ ಜತೆ ಚರ್ಚೆ ಮಾಡಿಯೂ ಯಾರಿಗೂ ಪ್ರಯೋಜನ ಇಲ್ಲ. ಈ ಎರಡು ಕೃತಿಗಳು ಇತಿಹಾಸ ಅಲ್ಲ ಎಂದು ಬಾಬಾಸಾಹೇಬ್ ಅಂಬೇಡ್ಕರ್ ಅವರಿಂದ ಹಿಡಿದು ಖ್ಯಾತ ಇತಿಹಾಸತಜ್ಞರಾದ ಆರ್.ಜಿ.ಭಂಡಾರ್ ಕರ್ ಅವರ ವರೆಗೆ ಹಲವಾರು ಸಂಶೋಧಕರು, ಇತಿಹಾಸಕಾರರು ಹೇಳಿದ್ದಾರೆ.
3. ಈ ಕೃತಿಗಳನ್ನು ಮಹಾಕಾವ್ಯವನ್ನಾಗಿ ನೋಡಿದಾಗ ಅಲ್ಲಿನ ಪಾತ್ರಗಳು ಕಾಣುವ ರೀತಿಯೇ ಬೇರೆ. ಗಾನಸುಮಾ ಪಟ್ಟಹಳ್ಳಿ ಅವರು ತಮ್ಮ ಕವನ ಸಂಕಲನದಲ್ಲಿ ಈ ಕೃತಿಗಳ ಪಾತ್ರಗಳಾದ ಸೀತೆ, ಮಂಡೋದರಿ,ಶೂರ್ಪನಖಿ, ಹೋಲಿಕಾ ಮೊದಲಾದವರನ್ನು ಎತ್ತಿಕೊಂಡು ಸ್ವಗತದ ಮೂಲಕ ಮಾತನಾಡಿಸಿದ್ದಾರೆ. ಈ ದೃಷ್ಟಿಯಿಂದ ನೋಡುವ ಯಾವ ಮನುಷ್ಯರಿಗೂ ಹೆಂಡತಿ ಸೀತೆಯ ಶೀಲ ಶಂಕಿಸಿ ಎರಡೆರಡು ಬಾರಿ ಬೆಂಕಿಗೆ ತಳ್ಳಿದ ರಾಮನಿಗಿಂತ, ಆಕೆಯನ್ನು ಇಷ್ಟಪಟ್ಟರೂ ಬಲವಂತ ಮಾಡದೆ ಮನಪರಿವರ್ತನೆಗಾಗಿ ಕಾದ ರಾವಣ ಇಷ್ಟವಾಗುತ್ತಾನೆ. ಮಹಾಭಾರತದಲ್ಲಿ ಪಾಂಡವರಿಗಿಂತ ಕರ್ಣ ಇಷ್ಟವಾಗುತ್ತಾನೆ.
ನೀಲಿಕಣ್ಣಿನ ಹುಡುಗ'ನ ಒಡನಾಟದ ಬಗ್ಗೆ ದಿನೇಶ್ ಅಮಿನ್ ಮಟ್ಟು ಭಾವುಕ ಮಾತುಗಳು..
4. ರಾಮಾಯಣವನ್ನು ಬರೆದ ವಾಲ್ಮೀಕಿಗೆ ರಾಮನನ್ನು ದೇವರು ಮಾಡುವ ಉದ್ದೇಶ ಇದ್ದಿರಲಾರದು, ಇದ್ದಿದ್ದರೆ ಆ ವ್ಯಕ್ತಿತ್ವದಲ್ಲಿ ಅಷ್ಟೊಂದು ಓರೆಕೋರೆಗಳನ್ನು ಯಾಕೆ ಇಟ್ಟುಕೊಳ್ಳಬೇಕಾಗಿತ್ತು? ವಿ.ಆರ್.ನಾರ್ಲರೂ ಸೇರಿದಂತೆ ಹಲವಾರು ವಿದ್ವಾಂಸರು ಹೇಳಿರುವ ಪ್ರಕಾರ ನಾವು ಈಗ ಓದುತ್ತಿರುವ ರಾಮಾಯಣವನ್ನು ಪೂರ್ತಿಯಾಗಿ ವಾಲ್ಮೀಕಿ ಬರೆದಿರಲಾರರು ಎಂದು ಹೇಳಿದ್ದಾರೆ. ಯಾಕೆಂದರೆ ಈ ಎರಡು ಕೃತಿಗಳನ್ನು ಜನ ತಮಗೆ ಬೇಕಾದ ರೀತಿಯಲ್ಲಿ ಬೆಳೆಸುತ್ತಾ ವಿಸ್ತರಿಸುತ್ತಾ ಹೋಗಿದ್ದಾರೆ. ಹೀಗೆ ಬೆಳೆಸುವಾಗ ಪಾತ್ರದ ಗುಣಸ್ವಭಾವಗಳೇ ಬದಲಾಗಿವೆ.
5. ಬ್ರಿಟಿಷರು ವಿಷ್ಣು ಸೂಕ್ತಂಕರ್ ಅವರಿಗೆ ಅಧಿಕೃತ ಮಹಾಭಾರತ ಬರೆಯುವ ಹೊಣೆ ಒಪ್ಪಿಸಿದ್ದರು. ಅವರು ದೇಶಾದ್ಯಂತ ಸುತ್ತಾಡಿ ಮಹಾಭಾರತದ 160ಕ್ಕೂ ಹೆಚ್ಚು ಪ್ರತಿ ಸಂಗ್ರಹಿಸಿದ್ದರು. ತಮಿಳುನಾಡಿನಲ್ಲಿ ರಾವಣನನ್ನು ಆರಾಧಿಸುತ್ತಾರೆ, ಅಲ್ಲಿನ ಕರಗದಲ್ಲಿ ದ್ರೌಪದಿಯೇ ಮುಖ್ಯ ದೇವತೆ, ಹಿಮಾಚಲ ಪ್ರದೇಶದ ಮಂಡಿಯಲ್ಲಿ ಹಿಡಿಂಬೆಗೆ ದೇವಾಲಯ ಇದೆ. ಅಲ್ಲಿನ ಬುಡಕಟ್ಟು ಜನಾಂಗಕ್ಕೆ ಜರಾಸಂಧನೇ ದೈವ. ಈಶಾನ್ಯ ರಾಜ್ಯಗಳಲ್ಲಿ ಕೌರವನಿಗೆ ಹೆಚ್ಚು ಗೌರವ. ಕೆಲವು ರಾಮಾಯಣಗಳಲ್ಲಿ ರಾಮ ಮತ್ತು ಸೀತೆ ಅಣ್ಣ-ತಂಗಿಯಾಗಿದ್ದಾರೆ.
'ಜಗತ್ತಿಗೆ ಕಾಣುವ ಅಮಿನ್ ಮಟ್ಟು ಬೇರೆ, ಅವರ ಅಂತರಂಗವೇ ಬೇರೆ'
6. ಬಾಬಾ ಸಾಹೇಬ್ ಅಂಬೇಡ್ಕರ್ ಸೇರಿದಂತೆ ಹಲವಾರು ವಿದ್ವಾಂಸರು ಈ ಕೃತಿಗಳ ಪಾತ್ರ ವಿಶ್ಲೇಷಣೆ ಮಾಡಿದ್ದಾರೆ. ಅವರ ರಾಮ-ಕೃಷ್ಣರ ಒಗಟುಗಳು ಪುಸ್ತಕ ಇದೇ ಕಾರಣಕ್ಕಾಗಿ ವಿವಾದಕ್ಕೀಡಾಗಿತ್ತು. ಹಾಗೆ ನೋಡಿದರೆ ಕೆ.ಎಸ್. ಭಗವಾನ್ ಹೇಳಿದ್ದೇನು ಮೊದಲ ಸಲವೇನಲ್ಲ, ಅದನ್ನು ಮೊದಲು ಹೇಳಿದ್ದು ಅಂಬೇಡ್ಕರ್, ಅವರು ಬದುಕಿದ್ದರೆ ಈಗ ಅವರ ಮೇಲೆಯೂ ಪೊಲೀಸರಿಗೆ ದೂರು ನೀಡುತ್ತಿದ್ದರು.
7. ನಾನು ದೇವರುಗಳ ಊರಿನಿಂದ ಬಂದವನಲ್ಲ, ದೈವಗಳ-ಭೂತಗಳ ಊರಿನಿಂದ ಬಂದವನು. ನಮಗೆ ರಾಮ,ಕೃಷ್ಣ,ಕಾಳಿ ದುರ್ಗಿಗಳಿಗಿಂತ ಜುಮಾದಿ,ಜಾರಾಂದಾಯೆ, ಕೋರ್ದಪ್ಪು, ತನಿಮನಿಗಾ, ಕಲ್ಲುರ್ಟಿಗಳ ಮೇಲೆ ಹೆಚ್ಚು ಭಕ್ತಿ.
8. ಆಶ್ಚರ್ಯವೆಂದರೆ ಶ್ರೀರಾಮ ನಮ್ಮಲ್ಲಿ ಬಹಳಷ್ಟು ಚರ್ಚೆಗೆ ಕಾರಣವಾದರೂ ನಮ್ಮಲ್ಲಿ ಶ್ರೀರಾಮ ದೇವಸ್ಥಾನಗಳು ಕಡಿಮೆ, ಶ್ರೀ ಕೃಷ್ಣನ ದೇವಾಲಯಗಳಿವೆ. ಇದಕ್ಕೆ ಮುಖ್ಯ ಕಾರಣ ಶ್ರೀರಾಮನಿಗೆ ರಾಜಕಾರಣಿಯ ವೇಷ ಹಾಕಿದ್ದು. ಧರ್ಮದಲ್ಲಿ ರಾಜಕಾರಣದ ಪ್ರವೇಶದಿಂದಾಗಿ ವಾದ, ಜಗಳ ಮಾಡಿಕೊಂಡು ತಮ್ಮ ಪಾಡಿಗೆ ತಾವಿದ್ದ ದೇವರುಗಳ ಕೈಗೆ ಕತ್ತಿ ಕೊಡಲಿ ಕೊಟ್ಟು ಹೊಡೆದಾಟಕ್ಕೆ ಇಳಿಸಿದ್ದೇವೆ.