ಸಿಎಂ ಕುಮಾರಸ್ವಾಮಿಯಿಂದ ಅಂಶಿ ಪ್ರಸನ್ನಕುಮಾರ್ ಅವರ ಪುಸ್ತಕ ಲೋಕಾರ್ಪಣೆ
ಮೈಸೂರು, ಮೇ 18 : ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ರೂಪ ಪ್ರಕಾಶನದ ಸಹಯೋಗದಲ್ಲಿ ಮೇ.19ರ ನಾಳೆ ನಗರದ ಕಲಾಮಂದಿರದಲ್ಲಿ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಅವರು ಬರೆದ ಸಮುದಾಯದ ನಾಯಕರು (ಮೈಸೂರು ಚಾಮರಾಜನಗರ ರಾಜಕೀಯ ಇತಿಹಾಸ ಭಾಗ -2 ), ಮತ್ತು ಸಮಾಜಮುಖಿ ಶ್ರೀಸಾಮಾನ್ಯರು ಕೃತಿಗಳ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮೇ 18ರಂದು ಪದ್ಮಶ್ರೀ ದೊಡ್ಡರಂಗೇಗೌಡರ ಕೃತಿ ಲೋಕಾರ್ಪಣೆ
ಬೆಳಿಗ್ಗೆ 11ಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೃತಿ ಬಿಡುಗಡೆ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ, ಮಾಜಿ ಸಚಿವ ಡಾ.ಮಹದೇವಪ್ಪ, ಸಂಸದ ಧ್ರುವನಾರಾಯಣ್ ಹಾಗೂ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಸೇರಿದಂತೆ ಮುಂತಾದವರು ಭಾಗವಹಿಸುವರು. ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಹಾಗೂ ಗುಬ್ಬಿಗೂಡು ರಮೇಶ್ ಕೃತಿಗಳ ಕುರಿತು ಮಾತನಾಡಲಿದ್ದಾರೆ.
ಸಮುದಾಯದ ನಾಯಕರು ಪುಸ್ತಕದ ನಾಲ್ಕು ಭಾಗಗಳಲ್ಲಿ ಹರಡಿಕೊಂಡಿದ್ದು, ಈ ಕೃತಿಯಲ್ಲಿ ಮೊದಲ ಭಾಗದಲ್ಲಿ ಮೈಸೂರು, ಚಾಮರಾಜನಗರ ಭಾಗದಿಂದ 10 ಪ್ರಮುಖ ಸಮುದಾಯಗಳಿಂದ ಚುನಾಯಿತರಾದವರು, ಸತತ ಒಂದರಿಂ ಎಂಟು ಬಾರಿ ಆಯ್ಕೆಯಾದವರ ಮಾಹಿತಿ ಕೃತಿಯಲ್ಲಿದೆ. ಇನ್ನು ಸಮಾಜಮುಖಿ ಶ್ರೀಸಾಮಾನ್ಯರು ಕೃತಿಯಲ್ಲಿ ಸಮಾಜ ಸೇವೆಯಲ್ಲಿ ಎಲೆಮರೆ ಕಾಯಿಯಂತೆ ಶ್ರಮಿಸುತ್ತಿರುವ ವ್ಯಕ್ತಿಗಳ ಚಿತ್ರಗಳನ್ನು ಒಳಗೊಂಡಿದೆ.