ಮೈಸೂರು: ಪಿಕ್ ಪಾಕೆಟರ್ ನಿಂದ 14 ಲಕ್ಷ ರೂ. ಮೌಲ್ಯದ ಆಭರಣ ವಶ
ಮೈಸೂರು, ಸೆಪ್ಟೆಂಬರ್ 15: ಕೆ.ಎಸ್.ಆರ್.ಟಿ.ಸಿ ಬಸ್ ಗಳಲ್ಲಿ ಪ್ರಯಾಣಿಕರ ಲಗೇಜ್ ಕಳ್ಳತನ ಮಾಡುತ್ತಿದ್ದ ಭಾರಿ ಐನಾತಿ ಕಳ್ಳನೊಬ್ಬನನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.
ಕಳೆದ ಜನವರಿ ತಿಂಗಳ 6ನೇ ತಾರೀಖೀನಂದು ಪ್ರಯಾಣಿಕರಾದ ಪ್ರೇಮಾ.ಟಿ ಎಂಬುವರು ರಾಮನಗರದಿಂದ ಮಡಿಕೇರಿಗೆ ಹೋಗುವ ವೇಳೆ ಲಗೇಜ್ ಬ್ಯಾಗ್ ಕ್ಯಾರಿಯರ್ ನಲ್ಲಿ ಇಟ್ಟಿದ್ದ 89 ಗ್ರಾಂ.ನಷ್ಟು ಚಿನ್ನಾಭರಣಗಳಿದ್ದ ಬ್ಯಾಗ್ ನಾಪತ್ತೆ ಆಗಿತ್ತು. ಈ ಬಗ್ಗೆ ಲಷ್ಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ರೆಸಾರ್ಟ್ ನಲ್ಲಿ ಡ್ರಗ್ಸ್ ಪತ್ತೆಯಾದರೆ ಮಾಲೀಕರೇ ಹೊಣೆ: ಮೈಸೂರು ಎಸ್ಪಿ
ದೂರಿನ ಮೇಲೆ ಪತ್ತೆ ಕಾರ್ಯ ಆರಂಭಿಸಿದ ಪೊಲೀಸರು ಬಸ್ ನಿಲ್ದಾಣದಲ್ಲಿ ಗಸ್ತು ನಡೆಸಿದ್ದರು. ಇಂದು ಠಾಣಾ ಸಿಬ್ಬಂದಿ ಮಂಜುನಾಥ್ ಮತ್ತು ಪ್ರದೀಪ, ಚಿನ್ನಪ್ಪ ಕಲ್ಲೋಳಿ ಅವರು ಗಸ್ತು ತಿರುಗುತ್ತಿದ್ದ ವೇಳೆ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದವನನ್ನು ಗಮನಿಸಿದ್ದಾರೆ.
ಠಾಣೆಯ ಹಳೆಯ ಕ್ರಿಮಿನಲ್ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ತ್ಯಾಗರಾಜ್ ಕಾಲೊನಿಯ ಮೊಹಮ್ಮದ್ ಇಮ್ರಾನ್ ಅಲಿಯಾಸ್ ಇಮ್ರಾನ್ ಬಿನ್ ಲೇಟ್ ನಸೀರ್ ಅಹ್ಮದ್(37)ನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.
ತಾನು ಇಸ್ಪೀಟ್ ಆಟ ಆಡುತ್ತಿದ್ದು, ಕೈ ತುಂಬಾ ಸಾಲ ಮಾಡಿಕೊಂಡಿದ್ದೆ. ಸಾಲಗಾರರ ಕಾಟ, ಮನೆಯ ನಿರ್ವಹಣೆಗೆ ಬಸ್ ಗಳಲ್ಲಿ ಕಳ್ಳತನಕ್ಕೆ ಇಳಿದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಬಂಧಿತನಿಂದ 13,85,000 ರೂ.ಬೆಲೆ ಬಾಳುವ ಸುಮಾರು 277 ಗ್ರಾಂ ತೂಕದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.