ರಾಜೀನಾಮೆ ವಿಚಾರದ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಮಾತೇನು?
ಮೈಸೂರು, ಜನವರಿ 1: ಜೆಡಿಎಸ್ ನಲ್ಲಿ ನನ್ನನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಳ್ಳಲಾಗಿದೆ. ನನಗೆ ಪಕ್ಷದ ನಾಯಕರ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ನನ್ನ ಉಸಿರು ಇರುವವರೆಗೂ ಜಾತ್ಯತೀತ ಜನತಾ ದಳಕ್ಕೆ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಋಣಿಯಾಗಿದ್ದೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಎಚ್.ವಿಶ್ವನಾಥ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ರಾಜೀನಾಮೆ ನಿರ್ಧಾರಕ್ಕೆ ಯಾವುದೇ ನಕಾರಾತ್ಮಕ ಕಾರಣಗಳಿಲ್ಲ. ಇದು ಪಕ್ಷದ ಹಿತದೃಷ್ಟಿಯಿಂದ ಹಾಗೂ ಪಕ್ಷ ಸಂಘಟನೆ ದೃಷ್ಟಿಯಿಂದ ನಾನೇ ತೆಗೆದುಕೊಂಡಿರುವ ನಿರ್ಧಾರ. ಈ ಬಗ್ಗೆ ನನ್ನ ಮನವಿಯನ್ನು ಪಕ್ಷದ ವರಿಷ್ಠರಿಗೆ ಸಲ್ಲಿಸುತ್ತೇನೆ ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆ ತ್ಯಜಿಸಲಿದ್ದಾರೆ ವಿಶ್ವನಾಥ್, ಕಾರಣ ಏನು?
ಸುಮಾರು ಒಂದೂವರೆ ವರ್ಷಗಳ ಕಾಲ ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ಪಡೆದ ನನಗೆ ದೂರ ಪ್ರಯಾಣ ಮಾಡಲು ಸಾಧ್ಯವಿಲ್ಲ. ನನ್ನ ಹಿಪ್ ಗಳು ರೀಪ್ಲೇಸ್ ಮೆಂಟ್ ಆಗಿವೆ. ಕಾಲು ನೋವು... ಹೀಗೆ ನನ್ನ ಆರೋಗ್ಯ ಕೂಡ ಪಕ್ಷದ ಸಂಘಟನೆಗೆ ಅವಕಾಶ ನೀಡುತ್ತಿಲ್ಲ. ಕೆಲವು ಜಿಲ್ಲೆಗಳಿಗೆ ಈವರೆಗೂ ಹೋಗಲು ಸಾಧ್ಯವಾಗಿಲ್ಲ. ಇದರಿಂದ ನನಗೆ ನೋವಾಗಿದೆ. ಪಕ್ಷಕ್ಕೆ ನ್ಯಾಯ ಒದಗಿಸುತ್ತಿಲ್ಲ ಎಂಬ ಕೊರಗಿದೆ ಎಂದು ಹೇಳಿದರು.
ಹುಣಸೂರು ಜನರ ಋಣ ತೀರಿಸಲು ಆಗುತ್ತಿಲ್ಲ
ಸ್ವಾಭಿಮಾನಿ ಮತ್ತು ಅಪಾರ ರಾಜಕೀಯ ಅನುಭವ ಹೊಂದಿರುವ ಎಚ್.ವಿಶ್ವನಾಥ್ ಅವರು ಕ್ಷೇತ್ರ ಪ್ರವಾಸದ ನಡುವೆಯೇ ತಮ್ಮ ಅಂತರಾಳದ ನುಡಿಗಳನ್ನು ಹಂಚಿಕೊಂಡರು. ಬೇರೆ ತಾಲೂಕಿನಿಂದ ಬಂದ ನನಗೆ ದೇವರಾಜ ಅರಸು ಅವರ ಕರ್ಮಭೂಮಿಯಲ್ಲಿ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ಹುಣಸೂರು ತಾಲೂಕಿನ ಜನತೆಗೂ ನ್ಯಾಯ ಒದಗಿಸಲು ಹಾಗೂ ಅವರ ಋಣ ತೀರಿಸಲು ಸಾಧ್ಯವಾಗುತ್ತಿಲ್ಲ. ಕ್ಷೇತ್ರದಲ್ಲಿ ಕೃತಜ್ಞತೆ ಸಲ್ಲಿಸಲು ಕೆಲವು ಹಳ್ಳಿಗಳಿಗೆ ಭೇಟಿ ಕೊಡಲು ಸಾಧ್ಯವಾಗಿಲ್ಲ. ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದ ಸಚಿವ ಜಿ.ಟಿ.ದೇವೇಗೌಡರಿಗೂ ಗೌರವ ದೊರೆಯುವಂತೆ ಮಾಡುವುದು ನನ್ನ ಕರ್ತವ್ಯ. ಲೋಕಸಭಾ ಚುನಾವಣೆ ಬರುತ್ತಿದ್ದು, ಪಕ್ಷವನ್ನು ಸಂಘಟಿಸಬೇಕಿದೆ. ಪ್ರತಿ ಜಿಲ್ಲೆಯಲ್ಲಿಯೂ ಸಮಾವೇಶಗಳನ್ನು ಮಾಡಬೇಕಿದೆ ಎಂದರು.
ಯುವಕರು ಜೆಡಿಎಸ್ ರಾಜ್ಯಾಧ್ಯಕ್ಷರಾಗಲಿ
ಕಾರ್ಯಕರ್ತರಲ್ಲಿ ಹುರುಪು ತುಂಬಬೇಕಿದೆ. ಚುನಾವಣೆಗೆ ಅಣಿಗೊಳಿಸಬೇಕಿದೆ. ಆದರೆ ಇಂಥ ಸನ್ನಿವೇಶದಲ್ಲಿ ನನಗೆ ಇದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಯುವಕರು, ಶಕ್ತಿಯುತವಾಗಿ ಇರುವವರು ಹಾಗೂ ಸಂಘಟನಾಚತುರರು ಈ ಸ್ಥಾನವನ್ನು ಅಲಂಕರಿಸಬೇಕಿದೆ. ಪಕ್ಷವನ್ನು ಮುನ್ನಡೆಸಬೇಕಿದೆ. ಜೆಡಿಎಸ್ ರಾಷ್ಟ್ರಾಧ್ಯಕ್ಷರು ನನ್ನನ್ನು ಕರೆದು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಶಾಸಕರು, ಸಚಿವರು, ಮಾಜಿ ಸಚಿವರು, ಮಾಜಿ ಶಾಸಕರು, ಜಿಪಂ ಅಧ್ಯಕ್ಷರು, ಮಾಜಿ ಅಧ್ಯಕ್ಷರು, ಮಾಜಿ ಮಹಾಪೌರರು, ಜಿಪಂ ಸದಸ್ಯರು, ಜಿಲ್ಲಾಧ್ಯಕ್ಷರು, ಪ್ರಮುಖ ಮುಖಂಡರ ಸಮಾವೇಶವನ್ನು ಜನವರಿ 3ರಂದು ನಡೆಸುವಂತೆ ಸೂಚಿಸಿದರು. ಅದರಂತೆ ಗುರುವಾರ ಬೆಂಗಳೂರಿನಲ್ಲಿರುವ ಪಕ್ಷದ ಜೆ.ಪಿ.ಭವನದಲ್ಲಿ ಇದಕ್ಕೆ ಪೂರಕವಾಗಿ ಸಿದ್ಧತೆ ಮಾಡುತ್ತಿದ್ದಾಗ ಕೆಲವು ಮಾಧ್ಯಮದವರು ಬಂದರು. ಹೀಗೆ ಮಾತನಾಡುತ್ತಿದ್ದಾಗ ನನ್ನ ಇಂಗಿತ ವ್ಯಕ್ತಪಡಿಸಿದ್ದೇನೆ ಎಂದು ಹೇಳಿದರು
ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರಲ್ಲ
ನನ್ನನ್ನು ಪಕ್ಷಕ್ಕೆ ಬರಮಾಡಿಕೊಂಡ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹುಣಸೂರು ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ನೀಡಿ, ಎಲ್ಲಾ ರೀತಿಯ ಸಹಕಾರ ಕೊಟ್ಟು ಗೆಲ್ಲಿಸಿದ್ದಾರೆ. ನಂತರ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯನ್ನು ನೀಡಿ ಗೌರವಿಸಿದ್ದಾರೆ. ಪ್ರತಿ ಹಂತದಲ್ಲೂ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಹೀಗಾಗಿ ನನಗೆ ಯಾವುದೇ ಅಸಮಾಧಾನವಾಗಲೀ ಬೇಸರವಾಗಲಿ ಇಲ್ಲ. ಲೋಕಸಭಾ ಚುನಾವಣೆಗೆ ಇನ್ನೂ 5 ತಿಂಗಳು ಇದೆ. ನನ್ನ ರಾಜೀನಾಮೆಯಿಂದ ಲೋಕಸಭಾ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಸಾಮರ್ಥ್ಯ ಇರುವವರನ್ನು ಹುದ್ದೆಗೆ ನೇಮಿಸಿದರೆ ಇನ್ನೂ ಹೆಚ್ಚಿನ ಲಾಭವಾಗಲಿದೆ ಎಂದು ಅಭಿಪ್ರಾಯಪಟ್ಟರು.
ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ
ನಾನು ಸಚಿವ ಸ್ಥಾನದ ಆಕಾಂಕ್ಷಿ ಯಲ್ಲ. ಹಿಂದೆಯೂ ನಾನು ಸಚಿವ ಸ್ಥಾನ ಕೇಳಿಲ್ಲ. ಎಂದೂ ಅಧಿಕಾರಕ್ಕಾಗಿ ಲಾಬಿ ಮಾಡಿಲ್ಲ. ಮಾಡುವುದೂ ಇಲ್ಲ. ಶಾಸಕನಾಗಿ ನಾನು ನಿರ್ವಹಿಸಬೇಕಾದ ಜವಾಬ್ದಾರಿಯೇ ದೊಡ್ಡದಿದೆ. ಹೀಗಾಗಿ ನಾನು ಸಚಿವ ಸ್ಥಾನವನ್ನು ಕೇಳಿಲ್ಲ. ನಾನು ಪ್ರತಿನಿಧಿಸಿರುವ ಹುಣಸೂರು ಕ್ಷೇತ್ರಕ್ಕೆ ನ್ಯಾಯ ದೊರಕಿಸಿ ಕೊಡುವ ದೃಷ್ಟಿಯಿಂದ ಹಾಗೂ ಪಕ್ಷದ ಸಂಘಟನೆಗೆ ಹೆಚ್ಚು ಒತ್ತುಕೊಡಲು ಸಾಧ್ಯವಾಗದಿರುವುದರಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ನನ್ನನ್ನು ಬಿಡುಗಡೆ ಮಾಡಿ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರಲ್ಲಿ ವಿನಂತಿ ಮಾಡುತ್ತೇನೆ ಎಂದರು.