ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ನಡೆದು ಬಂದ ದಾರಿ
Recommended Video
ಮೈಸೂರು, ಆಗಸ್ಟ್.05: ಜೆಡಿಎಸ್ ನೂತನ ರಾಜ್ಯಾಧ್ಯಕ್ಷರಾಗಿ ಮಾಜಿ ಸಚಿವ, ಹುಣಸೂರಿನ ಶಾಸಕ ಅಡಗೂರು ಎಚ್.ವಿಶ್ವನಾಥ್ ನೇಮಕಗೊಂಡಿದ್ದಾರೆ.
ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರು, ಎಚ್.ವಿಶ್ವನಾಥ್ ಅವರನ್ನು ಪಕ್ಷದ ನೂತನ ಅಧ್ಯಕ್ಷರೆಂದು ಇಂದು ಭಾನುವಾರ ಘೋಷಣೆ ಮಾಡಿದ್ದು, ಎಚ್.ಡಿ.ಕುಮಾರಸ್ವಾಮಿ ಅವರು ನೂತನ ಅಧ್ಯಕ್ಷರಿಗೆ ಬಾವುಟ ನೀಡುವ ಮೂಲಕ ಅಧಿಕಾರ ಹಸ್ತಾಂತರ ಮಾಡಿದರು.
ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಎಚ್. ವಿಶ್ವನಾಥ್ ನೇಮಕ
ಕುರುಬ ಸಮುದಾಯದ ಪ್ರಮುಖ ನಾಯಕರೂ ಆಗಿರುವ ವಿಶ್ವನಾಥ್ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದರು. ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಗೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಸಿದ್ದರಾಮಯ್ಯ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದ ವಿಶ್ವನಾಥ್ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದರು.
ರಾಜಕೀಯದಲ್ಲಿ ವಿಶ್ವನಾಥ್ ಹೆಜ್ಜೆಗಳು
ಹಳ್ಳಿಹಕ್ಕಿ ವಿಶ್ವನಾಥ್ ಲೋಕಸಭೆಗೆ ಕಾಂಗ್ರೆಸ್ ನಿಂದ 2014ರಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. 2009ರಲ್ಲಿಯೂ ಸಹ ಕಾಂಗ್ರೆಸ್ ನಿಂದ ಅಖಾಡಕ್ಕಿಳಿದು ಗೆದ್ದಿದ್ದನ್ನು ಮರೆಯುವಂತಿಲ್ಲ. ಮೊದಲಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ 1997ರಲ್ಲಿ ಕಾಂಗ್ರೆಸ್ (ಐ)ನಿಂದ ಸ್ಫರ್ಧಿಸಿ ಗೆಲುವು ಸಾಧಿಸಿದರು.
ಮತ್ತೊಮ್ಮೆ 1983, 1985ರಲ್ಲಿಯೂ ಕಾಂಗ್ರೆಸ್ ನಿಂದ ಕಣಕ್ಕಿಳಿದು ಸೋಲನ್ನುಂಡರು. ಇದಾದ ಬಳಿಕ 1989ರಲ್ಲಿ ಕಾಂಗ್ರೆಸ್ ನಿಂದ ಹ್ಯಾಟ್ರಿಕ್ ಗೆಲುವು ಬಾರಿಸಿದರು. 1994ರಲ್ಲಿ ಕೈ ಪಾಳಯದಿಂದ ಸೋಲು, 1999ರಲ್ಲಿ ಗೆಲುವಿನ ನಗೆ ಬೀರಿದರು. ನಂತರ 2004 ಹಾಗೂ 2008ರ ಚುನಾವಣೆಯಲ್ಲಿಯೂ ಸೋಲಿನ ಸನಿಹಕ್ಕೆ ಸರಿದು ಈ ಬಾರಿಯ ಚುನಾವಣೆಯಲ್ಲಿ ದಿಗ್ವಿಜಯ ಕಂಡಿದ್ದಾರೆ.
ಮೊದಲ ಯತ್ನದಲ್ಲೇ ವಿಧಾನಸಭೆಗೆ ಪ್ರವೇಶ
ಕೃಷ್ಣರಾಜನಗರ ಕ್ಷೇತ್ರದ ಶಾಸಕರಾಗಿದ್ದ ಎಚ್.ಬಿ.ಕೆಂಚೇಗೌಡ ಹಾಗೂ ಡಿ.ದೇವರಾಜು ಅರಸು ನಡುವೆ 70ರ ದಶಕದಲ್ಲಿ ಮನಸ್ತಾಪ ಉಂಟಾಯಿತು. ಕೆಂಚೇಗೌಡರು ಕಾಂಗ್ರೆಸ್ ತೊರೆದು ಜನತಾ ಪಕ್ಷ ಸೇರಿದರು. ಆಗ ಅರಸು ಅವರ ಕಣ್ಣಿಗೆ ಬಿದ್ದಿದ್ದು ಅಡಗೂರು ಎಚ್.ವಿಶ್ವನಾಥ್.
1978ರಲ್ಲಿ ಈ ಕ್ಷೇತ್ರದಿಂದ ಕಾಂಗ್ರೆಸ್ (ಐ)'ಬಿ' ಫಾರಂ ಪಡೆದು ಸ್ಪರ್ಧಿಸಿದ ವಿಶ್ವನಾಥ್ ಮೊದಲ ಯತ್ನದಲ್ಲಿಯೇ ವಿಧಾನಸಭೆ ಪ್ರವೇಶಿಸಿದರು.
"ಮೈಸೂರಿನಲ್ಲಿ ವಕೀಲ ವೃತ್ತಿ ಮಾಡಿಕೊಂಡಿದ್ದ ನನ್ನನ್ನು 1976 ಸುಮಾರಿಗೆ ಅರಸು ಅವರು ಕೃಷ್ಣರಾಜನಗರಕ್ಕೆ ಕರೆಸಿಕೊಂಡರು. ಅದಕ್ಕೆ ಕೆಗ್ಗೆರೆ ರಾಮಸ್ವಾಮಿಗೌಡ, ಮಂಚನಹಳ್ಳಿ ವೀರಭದ್ರೇಗೌಡ, ಬಿ.ಶಿವಪ್ಪ ಶೆಟ್ಟರು, ಹೆಬ್ಬಾಳ್ ಸಣ್ಣರಾಮೇಗೌಡರು ಪ್ರಮುಖ ಕಾರಣ. ನಾನು ಜನಿಸಿದ ತಾಲ್ಲೂಕಿನಲ್ಲಿಯೇ ವಕೀಲ ವೃತ್ತಿ ಮುಂದುವರಿಸಿಕೊಂಡಿದ್ದೆ. ಆ ಸಂದರ್ಭದಲ್ಲಿ ಕೆಂಚೇಗೌಡರು ಪಕ್ಷ ತೊರೆದಾಗ ಅರಸು ನನಗೆ ಟಿಕೆಟ್ ನೀಡಿದರು. ಅದು ನನ್ನನ್ನು ವಿಧಾನಸೌಧದ ಮೆಟ್ಟಿಲು ಹತ್ತಿಸಿತು' ಎಂದು ವಿಶ್ವನಾಥ್ ತಿಳಿಸಿದ್ದಾರೆ
ಅರಸು ಜೊತೆ ಗುರುತಿಸಿಕೊಂಡಿದ್ದೇ ನನ್ನ ಜೀವನದ ಮಹತ್ವದ ತಿರುವು. ನನ್ನನ್ನು ಭೂ ನ್ಯಾಯಮಂಡಳಿ ಸಮಿತಿ ಸದಸ್ಯನನ್ನಾಗಿ ಮಾಡಿ ಮಹತ್ವದ ಜವಾಬ್ದಾರಿ ನೀಡಿದ್ದರು. ಅವರು ನನ್ನ ರಾಜಕೀಯ ಗುರು' ಎಂದು ತುಸು ಭಾವುಕರಾಗಿಯೇ ನುಡಿಯುತ್ತಾರೆ.
ಮೊದಲ ಚುನಾವಣೆ ಮರೆಯುವಂತಿಲ್ಲ
ಮೊದಲ ಚುನಾವಣೆಯಲ್ಲಿ ವಿಶ್ವನಾಥ್ 9 ಸಾವಿರ ಮತಗಳಿಂದ ಜನತಾ ಪಕ್ಷದ ಎಸ್.ನಂಜಪ್ಪ ಎದುರು ಗೆದ್ದರು. ಆ ಬಳಿಕ ಇದೇ ಕ್ಷೇತ್ರದಲ್ಲಿ ಸತತ 30 ವರ್ಷಗಳಿಂದ ಸ್ಪರ್ಧೆ ಮಾಡಿಕೊಂಡು ಬಂದಿದ್ದಾರೆ. ಸತತ ಎಂಟು ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ವಿಶೇಷ.
ಅಷ್ಟೇ ಅಲ್ಲ; 1978ರಿಂದ 1994ರ ವರೆಗೆ ಆರು ಬಾರಿ ವಿಶ್ವನಾಥ್ ಹಾಗೂ ನಂಜಪ್ಪ ನಡುವೆಯೇ ಹಣಾಹಣಿ ನಡೆದಿದೆ. ಅನಾರೋಗ್ಯದ ಕಾರಣ 1999ರಲ್ಲಿ ನಂಜಪ್ಪ ಚುನಾವಣೆಯಿಂದ ಹಿಂದೆ ಸರಿದರು. ಆ ಚುನಾವಣೆಯಲ್ಲಿ ವಿಶ್ವನಾಥ್ ಗೆದ್ದರು.
ಮೊದಲ ಚುನಾವಣೆ ಖರ್ಚಿಗಾಗಿ ನನಗೆ ಅರಸು 20 ಸಾವಿರ ನೀಡಿದ್ದರು. ತಂದೆ 10 ಸಾವಿರ ಹಾಗೂ ಕ್ಷೇತ್ರದ ಜನರು 30 ಸಾವಿರ ನೀಡಿದ್ದರು' ಎಂದು ನೆನಪಿಸಿಕೊಳ್ಳುತ್ತಾರೆ ವಿಶ್ವನಾಥ್.
ವೀರಪ್ಪ ಮೊಯಿಲಿ ಮುಖ್ಯಮಂತ್ರಿಯಾಗಿದ್ದಾಗ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದರು. ಬಳಿಕ ಬಡ್ತಿ ಪಡೆದು ಅರಣ್ಯ ಸಚಿವರಾದರು. ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಶಾರದಾ ವಿಲಾಸ ಕಾಲೇಜಿನಲ್ಲಿ ಕಾನೂನು ಪದವಿ ಓದುತ್ತಿದ್ದಾಗಲೇ ರಾಜಕೀಯ ಮುಖಂಡರ ಸಂಪರ್ಕವಿತ್ತು.
ಅದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಿದ್ದರಾಮಯ್ಯ ಹಾಗೂ ನಾನು ಉತ್ತಮ ಸ್ನೇಹಿತರಾಗಿದ್ದೆವು. ವಿ.ಶ್ರೀನಿವಾಸಪ್ರಸಾದ್ ಹಾಗೂ ಎ.ಕೆ.ಆಂಟನಿ ಅವರೊಂದಿಗೂ ಆಗಲೇ ಸ್ನೇಹ ಬೆಳೆಸಿಕೊಂಡಿದ್ದೆ' ಎಂದು ಮೆಲುಕು ಹಾಕಿದರು.
'1973ರಲ್ಲಿ ವಕೀಲ ವೃತ್ತಿ ಆರಂಭಿಸಿದ ನಾನು 1974ರಲ್ಲಿ 'ಸಂಪೂರ್ಣ ಕ್ರಾಂತಿ'ಯಲ್ಲಿ ಭಾಗಿಯಾಗಿದ್ದೆ. ಯುವಜನ ಸಮಾಜವಾದಿ ಸಭಾದಲ್ಲಿದ್ದೆ. ವಿದ್ಯಾರ್ಥಿ ಚಳವಳಿ, ಕನ್ನಡ ಚಳವಳಿಯಲ್ಲಿ ಪಾಲ್ಗೊಳ್ಳುತ್ತಿದ್ದೆ. ಎನ್ಎಸ್ಯುಐನಲ್ಲಿ ಸಕ್ರಿಯವಾಗಿದ್ದೆ' ಎಂದು ನುಡಿಯುತ್ತಾರೆ.
ಸಿದ್ದರಾಮಯ್ಯ ಜೊತೆ ಮುನಿಸು
2004ರಲ್ಲಿ ಮಂಚನಹಳ್ಳಿ ಮಹದೇವ್ ಎದುರು ವಿಶ್ವನಾಥ್ ಕೇವಲ 323 ಮತಗಳಿಂದ ಸೋಲು ಕಂಡಿದ್ದರು. 2008ರಲ್ಲಿ ಜೆಡಿಎಸ್ ನ ಸಾ.ರಾ.ಮಹೇಶ್ ಎದುರು ಪರಾಭವಗೊಂಡರು. 2009ರಲ್ಲಿ ಲೋಕಸಭೆಗೆ ಆಯ್ಕೆಯಾದ ಕಾರಣ 2013ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ.
2014ರಲ್ಲಿ ಲೋಕಸಭೆಗೆ ಪುನರಾಯ್ಕೆ ಬಯಸಿದ್ದ ಅವರು ಪ್ರತಾಪಸಿಂಹ ಎದುರು ಸೋಲು ಕಂಡರು. ದೀರ್ಘಕಾಲದ ಗೆಳೆಯ ಸಿದ್ದರಾಮಯ್ಯ ಜೊತೆ ಮುನಿಸಿಕೊಂಡು ಕಳೆದ ವರ್ಷ ಜೆಡಿಎಸ್ ಸೇರ್ಪಡೆಯಾದರು. ಈ ಬಾರಿ ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್ ಸೇರ್ಪಡೆಗೊಂಡು ಗೆದ್ದಿದ್ದನ್ನು ವಿಶ್ವನಾಥ್ ಜೀವನದಲ್ಲಿ ಮರೆಯುವಂತಿಲ್ಲ.
ಹಳ್ಳಿ ಹಕ್ಕಿ ಎಚ್. ವಿಶ್ವನಾಥ್ ಅವರು 91667 ಸಾವಿರ ಮತಗಳನ್ನು ಗಳಿಸಿ ಕಾಂಗ್ರೆಸ್ ನ ಎಚ್.ಪಿ. ಮಂಜುನಾಥ್ ಅವರ ವಿರುದ್ಧ 8,575 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು ಪ್ರಶಂಸನಾರ್ಹವೇ ಸರಿ.