ಜೆಡಿಎಸ್ ತಟಸ್ಥ ಶಾಸಕ ಜಿ. ಟಿ. ದೇವೇಗೌಡರ ನಡೆ ಯಾವ ಕಡೆ?
ಮೈಸೂರು, ಜುಲೈ 4: ಹಳೇ ಮೈಸೂರು ಭಾಗದ ಪ್ರಭಾವಿ ಒಕ್ಕಲಿಗ ನಾಯಕರಾಗಿರುವ ಮಾಜಿ ಸಚಿವ, ಶಾಸಕರೂ ಆಗಿರುವ ಜಿ. ಟಿ. ದೇವೇಗೌಡರ ಮುಂದಿನ ನಡೆ ಏನು? ಎಂಬುದರ ಬಗ್ಗೆ ರಾಜಕೀಯ ಪಕ್ಷಗಳು ಸೇರಿದಂತೆ ಜನತೆ ಕುತೂಹಲದಿಂದ ನೋಡುತ್ತಿದ್ದು, ಉತ್ತರ ಸಿಗುವ ಕಾಲ ಸಮೀಪವಾಗಿದೆ.
ಕಳೆದ ವಿಧಾನಸಭಾ ಚುನಾವಣೆ ನಂತರ ಅಸ್ಥಿತ್ವಕ್ಕೆ ಬಂದ ಸಮ್ಮಿಶ್ರ ಸರಕಾರ ಪತನಗೊಂಡ ಬಳಿಕವಂತು ಜಿ. ಟಿ. ದೇವೇಗೌಡರು ರಾಜಕೀಯವಾಗಿ ಸಂಪೂರ್ಣ ಮೌನಕ್ಕೆ ಶರಣಾಗಿದ್ದರು. ಅದರಲ್ಲೂ ಜೆಡಿಎಸ್ ನಿಂದ ಅಂತರ ಕಾಪಾಡಿಕೊಂಡು ಬಂದಿದ್ದರಲ್ಲದೆ, ದೇವೇಗೌಡರ ಕುಟುಂಬದ ಸಖ್ಯದಿಂದ ದೂರವೇ ಇದ್ದುಬಿಟ್ಟರು. ಅವರ ಮೌನವೇ ಇವತ್ತು ಎಲ್ಲರಲ್ಲಿ ಕುತೂಹಲ ಕೆರಳಿಸುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.
ಹಳೇ ಮೈಸೂರು ರಾಜಕೀಯ ಪಾರುಪತ್ಯಕ್ಕೆ ಪಕ್ಷಗಳ ಕಸರತ್ತು!
ವರುಣ ಕ್ಷೇತ್ರದಲ್ಲಿ ಗೆದ್ದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು 2018ರಲ್ಲಿ ವಿಧಾನಸಭಾ ಚುನಾವಣೆ ನಡೆದಾಗ ವರುಣಾ ಕ್ಷೇತ್ರವನ್ನು ಪುತ್ರ ಯತೀಂದ್ರ ಸಿದ್ದರಾಮಯ್ಯಗೆ ಬಿಟ್ಟುಕೊಟ್ಟು ಚಾಮುಂಡೇಶ್ವರಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದರು. ಸಿಎಂ ಆಗಿ ಐದು ವರ್ಷ ಆಡಳಿತ ನಡೆಸಿದ್ದ ಸಿದ್ದರಾಮಯ್ಯ ಅವರ ಮುಂದೆ ನಿಂತು ಅವರನ್ನು ಎದುರಿಸುವ ಶಕ್ತಿ ಹೊಂದಿದ್ದ ಅಭ್ಯರ್ಥಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಇರಲಿಲ್ಲ. ಆದರೆ ಜೆಡಿಎಸ್ನ ಪ್ರಭಾವಿ ನಾಯಕರಾಗಿದ್ದ ಜಿ. ಟಿ. ದೇವೇಗೌಡರನ್ನು ಜೆಡಿಎಸ್ ಕಣಕ್ಕಿಳಿಸಿತ್ತು.
ರಾಜಕೀಯ ಭವಿಷ್ಯ ಕುರಿತು ಮೊದಲ ಬಾರಿಗೆ ಮಾತನಾಡಿದ ಜಿಟಿ ದೇವೇಗೌಡ
ಒಕ್ಕಲಿಗರ ಪ್ರಭಾವ, ಪಕ್ಷದ ಬೆಂಬಲದಿಂದ ಜಿಟಿಡಿ ಗೆಲುವು
ಆದಾಗಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಹವಾ ಸೃಷ್ಟಿಸಿತ್ತು. ಜತೆಗೆ ಒಕ್ಕಲಿಗ ಸಮುದಾಯದ ಪ್ರಭಾವವೂ ಕ್ಷೇತ್ರದಲ್ಲಿ ಜಿ. ಟಿ. ದೇವೇಗೌಡರ ಕೈ ಹಿಡಿದಿತ್ತು. ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಆಂತರಿಕ ಸರ್ವೆ ನಡೆಸಿದ್ದ ಸಿದ್ದರಾಮಯ್ಯರಿಗೆ ಕ್ಷೇತ್ರದಲ್ಲಿ ಗೆಲ್ಲುವುದಿಲ್ಲ ಎಂಬುದು ಗೊತ್ತಾಗಿತ್ತು. ಹೀಗಾಗಿ ಮತ್ತೊಂದು ಕ್ಷೇತ್ರ ಬಾದಾಮಿಯತ್ತ ಮುಖ ಮಾಡುವಂತೆ ಮಾಡಿತ್ತು. ಅದಾಗಲೇ ಹೇಗಾದರೂ ಮಾಡಿ ಸಿದ್ದರಾಮಯ್ಯರನ್ನು ಸೋಲಿಸಲೇ ಬೇಕೆಂಬ ಹಠಕ್ಕೆ ಬಿಜೆಪಿ ಕೂಡ ಬಿದ್ದಿತ್ತು. ಹೀಗಾಗಿಯೇ ಅವರು ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಪರೋಕ್ಷವಾಗಿ ಜೆಡಿಎಸ್ಗೆ ಬೆಂಬಲ ಸೂಚಿಸಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ.
ಜಿಟಿಡಿ ಜೆಡಿಎಸ್ ಬಿಟ್ಟರೆ ಬೆಂಬಲಿಗರ ನಡೆ
ಹಾಗೆ ನೋಡಿದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ. ಟಿ. ದೇವೇಗೌಡರು ಗಟ್ಟಿಯಾಗಿ ನೆಲೆಯೂರಿದ್ದಾರೆ. ಕ್ಷೇತ್ರದಲ್ಲಿ ಪಕ್ಷದ ಪ್ರಭಾವದಿಂದ ಅವರು ಗೆದ್ದಿದ್ದಾರೋ ಅಥವಾ ವೈಯಕ್ತಿಕ ಪ್ರಭಾವದಿಂದ ಗೆದ್ದಿದ್ದಾರೋ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ. ಈಗಾಗಲೇ ಜೆಡಿಎಸ್ ನಿಂದ ದೂರವಿರುವ ಅವರು ಒಂದು ವೇಳೆ ಜೆಡಿಎಸ್ ತೊರೆದರೆ ಅವರೊಂದಿಗೆ ಎಷ್ಟು ಮಂದಿ ಬೆಂಬಲಿಗರು ಬರುತ್ತಾರೆ? ಅವರಿಗೆ ಎದುರಾಳಿಯಾಗಿ ಜೆಡಿಎಸ್ ನಿಂದ ಸ್ಪರ್ಧಿಸುವವರು ಯಾರು? ಹೀಗೆ ಹತ್ತಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಇದೆಲ್ಲಕ್ಕಿಂತ ಹೆಚ್ಚಾಗಿ ಜಿ. ಟಿ. ದೇವೇಗೌಡರು ಜೆಡಿಎಸ್ ತೊರೆಯುದು ಖಚಿತವಾಗಿದ್ದು ಯಾವ ಪಕ್ಷದತ್ತ ಮುಖ ಮಾಡುತ್ತಾರೆ ಎನ್ನುವುದು ಕೂಡ ಅಷ್ಟೇ ಮುಖ್ಯವಾಗಿದೆ.
ಜಿಟಿಡಿ ಆಯ್ಕೆ ಯಾವ ಪಕ್ಷ
ಕೆಲವು ತಿಂಗಳ ಹಿಂದೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರೊಂದಿಗೆ ಜಿ. ಟಿ. ದೇವೇಗೌಡರು ಕಾಣಿಸಿಕೊಂಡಿದ್ದರು. ಆಗ ಅವರು ಕಾಂಗ್ರೆಸ್ ಸೇರುತ್ತಿದ್ದಾರೆ. ಕಾಂಗ್ರೆಸ್ ಗೆ ಒಂದಷ್ಟು ಷರತ್ತುಗಳಿನ್ನಿಟ್ಟಿದ್ದು ಅದಕ್ಕೆ ಒಪ್ಪಿದರೆ ಪಕ್ಷ ಸೇರಲಿದ್ದಾರೆ ಎಂಬಂತೆ ಜನ ವಲಯದಲ್ಲಿ ವದಂತಿಗಳು ಹರಡಿದ್ದವು. ಇದಾದ ಬಳಿಕ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಆಗಮಿಸಿದಾಗ ಕಮಲ ಪಾಳಯದಲ್ಲಿಯೂ ಕಾಣಿಸಿಕೊಂಡಿದ್ದರು, ಹೀಗಾಗಿ ಅವರ ನಡೆ ಯಾವುದರಿಬಹುದು ಎಂಬುದಂತು ಗೌಪ್ಯವಾಗಿದೆ. ವಿಧಾನಸಭಾ ಚುನಾವಣೆಗೆ ಇನ್ನು ಹತ್ತು ತಿಂಗಳಿದೆ. ಹೀಗಾಗಿ ಇನ್ನು ಒಂದೆರಡು ತಿಂಗಳಲ್ಲಿ ಅವರು ರಾಜಕೀಯ ನಡೆಯನ್ನು ಜನತೆ ಮುಂದೆ ಬಿಚ್ಚಿಡಲೇ ಬೇಕಾಗುತ್ತದೆ. ಇಲ್ಲದೆ ಹೋದರೆ ಮುಂದಿನ ಚುನಾವಣೆಯ ತಯಾರಿಗೆ ಕಷ್ಟವಾಗಲಿದೆ.
ಮುಂದಿನ ಎರಡು ತಿಂಗಳೊಳಗೆ ರಾಜಕೀಯ ಭವಿಷ್ಯ ನಿರ್ಧಾರ
ಇದೀಗ ತನ್ನ ರಾಜಕೀಯ ನಡೆಯನ್ನು ಬಹಿರಂಗಗೊಳಿಸುವ ಕಾಲ ಕೂಡಿ ಬಂದಿರುವುದರಿಂದ ಮುಂದಿನ ಒಂದೆರಡು ತಿಂಗಳೊಳಗೆ ಚಾಮುಂಡೇಶ್ವರಿ ಕ್ಷೇತ್ರದ ಜನರ ಸಭೆ ಕರೆಯುತ್ತೇನೆ. ಸಭೆಯಲ್ಲಿ ಮುಕ್ತ ಚರ್ಚೆ ಮಾಡುತ್ತೇನೆ. ಜನರ ಅಭಿಪ್ರಾಯದಂತೆ ನನ್ನ ನಿರ್ಧಾರ ಪ್ರಕಟಿಸುತ್ತೇನೆ. ಇದರಲ್ಲಿ ಯಾವ ಗೊಂದಲಗಳು ಇಲ್ಲ ಎಂದು ಹೇಳಿದ್ದಾರೆ. ಐದು ವರ್ಷ ನಾನು ಜೆಡಿಎಸ್ ಶಾಸಕನಾಗಿ ಇರಲು ಜನ ಮತ ಹಾಕಿದ್ದಾರೆ. ಹಾಗಾಗಿ ಯಾವುದೇ ಚುನಾವಣೆಯಲ್ಲಿ ಪಕ್ಷ ವಿಪ್ ಕೊಡಲಿ ಬಿಡಲಿ, ನಾನು ಜೆಡಿಎಸ್ ಪರವಾಗಿ ಮತ ಹಾಕಿದ್ದೇನೆ, ಮುಂದೆಯೂ ಹಾಕುತ್ತೇನೆ. ಏಕೆಂದರೆ ನನ್ನ ಆತ್ಮ ಸಾಕ್ಷಿಗೆ ದ್ರೋಹ ಬಗೆಯುವ ಕೆಲಸ ಯಾವತ್ತೂ ಮಾಡುವುದಿಲ್ಲ. ಕಳೆದ ಮೂರು ವರ್ಷಗಳಿಂದ ಪಕ್ಷ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸಿಲ್ಲ ಎಂಬುದನ್ನು ಕೂಡ ಒಪ್ಪಿಕೊಂಡಿದ್ದಾರೆ.
ಪುತ್ರನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ನಿರ್ಧಾರ
ಬಹುಶಃ ರಾಜಕೀಯ ಪರಿಸ್ಥಿತಿ ಮತ್ತು ಪುತ್ರ ಜಿ. ಡಿ. ಹರೀಶ್ ಗೌಡ ಅವರ ರಾಜಕೀಯ ಭವಿಷ್ಯವನ್ನು ನೋಡಿಕೊಂಡು ಮುಂದಿನ ನಿರ್ಧಾರವನ್ನು ಜಿ. ಟಿ. ದೇವೇಗೌಡರು ತೆಗೆದುಕೊಳ್ಳಲಿದ್ದು, ಈ ಸಂಬಂಧ ಕ್ಷೇತ್ರದಲ್ಲಿ ಬೆಂಬಲಿಗರ ಮತ್ತು ಮತದಾರರ ಸಭೆ ಯಾವಾಗ ಕರೆಯಬಹುದು? ಯಾವಾಗ ನಿರ್ಧಾರ ಪ್ರಕಟಿಸಬಹುದು? ಎಂದು ಜನ ಕಾಯುತ್ತಿದ್ದಾರೆ. ಇದು ಕ್ಷೇತ್ರದಲ್ಲಿ ಮಾತ್ರವಲ್ಲ ಇಡೀ ರಾಜಕೀಯದಲ್ಲಿ ಕುತೂಹಲ ಕೆರಳಿಸಿದ್ದು ಎಲ್ಲರೂ ಆ ದಿನಕ್ಕಾಗಿ ಕಾಯುತ್ತಿದ್ದಾರೆ.
Recommended Video