ದೇವೇಗೌಡ, ಎಚ್ಡಿಕೆ ವಿರುದ್ಧ ಅಸಮಾಧಾನ ಹೊರ ಹಾಕಿದ ಜೆಡಿಎಸ್ ಶಾಸಕ
ಮೈಸೂರು, ಸೆಪ್ಟೆಂಬರ್ 12: ದೇವೇಗೌಡ ಹಾಗೂ ಕುಮಾರಸ್ವಾಮಿ ವಿರುದ್ಧ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ಕೊನೆಗೂ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.
ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಟಿ.ದೇವೇಗೌಡ, 'ನಾನು ಪಕ್ಷ ಬಿಡಲೆಂದೇ ಕಾಯುತ್ತಿದ್ದಾರೆ' ಎಂದು ಹೇಳಿದರು.
'ಮೈಸೂರಿನಲ್ಲಿ ಸಾ.ರಾ.ಸಾಮ್ರಾಜ್ಯ ಬೆಳೆಸಲು ಯತ್ನಿಸುತ್ತಿದ್ದಾರೆ. ನಾನಿದ್ದರೆ ಸಾ.ರಾ.ಮಹೇಶ್ ಬೆಳೆಯಲು ಸಾಧ್ಯವಾಗುವುದಿಲ್ಲ, ಹಾಗಾಗಿ ನಾನು ಪಕ್ಷ ಬಿಡಲಿ ಎಂದೇ ವರಿಷ್ಠರು ಕಾಯುತ್ತಿದ್ದಾರೆ' ಎಂದು ಜಿಟಿಡಿ ಹೇಳಿದರು.
ಜೆಡಿಎಸ್ ಶಾಸಕ ಬಿಜೆಪಿಯತ್ತ ಹೆಜ್ಜೆ? ಮಗನಿಗೆ ಟಿಕೆಟ್ ಕೊಡಿಸಲು ಯತ್ನ
'ದೇವೇಗೌಡರು ನನ್ನ ರಾಜಕೀಯ ಗುರು ಎಂದು ನಾನು ಎಲ್ಲಿಯೂ ಹೇಳಿಲ್ಲ, ನಾನು ಹಾಗೆ ಹೇಳಿದ್ದು ಸಾಬೀತು ಮಾಡಿದರೆ ನಾನು ನನ್ನ ಕುಟುಂಬ ರಾಜಕೀಯ ಬಿಡುತ್ತೇವೆ, ದೇವೇಗೌಡರೇ ನಿಮ್ಮ ಮಾತು ಜನ ನಂಬುತ್ತಾರೆ, ದಯವಿಟ್ಟು ಸತ್ಯ ಹೇಳಿ' ಎಂದು ಜಿ.ಟಿ.ದೇವೇಗೌಡ ಹೇಳಿದರು.
ಕುಮಾರಸ್ವಾಮಿಗೂ ಟಾಂಗ್
'ಜಿ.ಟಿ.ದೇವೇಗೌಡ ಅವರಿಗೆ ಸಹಕಾರಿ ರುಚಿ ತೋರಿಸಿದೆ' ಎಂದಿದ್ದ ಕುಮಾರಸ್ವಾಮಿ ಅವರಿಗೂ ಟಾಂಗ್ ನೀಡಿದ ಜಿಟಿಡಿ, 'ನಾನು ಮೊದಲೇ ಸಹಕಾರಿ ಕ್ಷೇತ್ರದಲ್ಲಿದ್ದೆ, ದಸರಾವನ್ನು 1995 ರಲ್ಲೇ ನೋಡಿದ್ದೇನೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷನಾಗಿದ್ದ ನಾನು ಆಗಲೇ ಕುದುರೆ ಏರಿದ್ದೇನೆ, ದಸರಾ ಕುರಿತು ಅನುಭವ ಇರುವುದರಿಂದಲೇ ನನ್ನನ್ನು ಸಲಹೆ ಕೇಳುತ್ತಾರೆ' ಎಂದು ಅವರು ಹೇಳಿದರು.
ಜೆಡಿಎಸ್ ನ ಪ್ರಭಾವಿ ನಾಯಕ ಜಿಟಿ ದೇವೇಗೌಡ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ
ಒಂದು ತಿಂಗಳು ಖಾತೆ ಸ್ವೀಕರಿಸಿರಲಿಲ್ಲ: ಜಿಟಿಡಿ
ಮೈತ್ರಿ ಸರ್ಕಾರ ರಚನೆ ಆದಾಗ ಒಂದು ತಿಂಗಳು ನಾನು ಖಾತೆಯನ್ನು ಸ್ವೀಕರಿಸಿರಲಿಲ್ಲ, ಆ ನಂತರ ಸ್ವೀಕರಿಸಿದೆ, ನಾನು ಖಾತೆ ತೆಗೆದುಕೊಳ್ಳದೇ ಇದ್ದಿದ್ದರೆ ಸಾ.ರಾ.ಮಹೇಶ್ ಏನಾದರೂ ಅದರಲ್ಲಿ ಮಧ್ಯಪ್ರವೇಶ ಮಾಡುತ್ತಿದ್ದರು, ಹಾಗಾಗಿ ತೆಗೆದುಕೊಳ್ಳಬೇಕಾಯಿತು' ಎಂದು ಅವರು ಹೇಳಿದರು.
ನಾನು ಜೆಡಿಎಸ್ ಪಕ್ಷ ಬಿಡಲ್ಲ: ಜಿ.ಟಿ.ದೇವೇಗೌಡ
'ನಾನು ಜೆಡಿಎಸ್ ಪಕ್ಷ ಬಿಡಲ್ಲ, ಚಾಮುಂಡೇಶ್ವರಿ ಕ್ಷೇತ್ರದ ಜನರಿಗಾಗಿ ನಾನು ಯಾರ ಬಳಿ ಬೇಕಾದರೂ ಹೋಗುತ್ತೇನೆ, ಇಂದು ನಡೆದ ಸಭೆಗೆ ನನ್ನನ್ನು ಬೇಕೆಂದೇ ಕರೆದಿಲ್ಲಾ, ಪಕ್ಷದ ವರಿಷ್ಠರು ನನ್ನನ್ನು ಕೇರ್ ಮಾಡಬೇಡಿ ಎಂದು ಹೇಳಿದ್ದಾರೆ' ಎಂದು ಜಿಟಿಡಿ ಆರೋಪಿಸಿದರು.
ನಿಮ್ಮದೆಲ್ಲಾ ಗೊತ್ತಿದೆ: ಸಚಿವ ಜಿಟಿಡಿಗೆ ಅಸೆಂಬ್ಲಿಯಲ್ಲೇ ಎಚ್ಡಿಕೆ ಕ್ಲಾಸ್?
ಹುಣಸೂರು ಕ್ಷೇತ್ರಕ್ಕೆ ಮಗನಿಗೆ ಬಿಜೆಪಿ ಟಿಕೆಟ್?
ಜಿ.ಟಿ.ದೇವೇಗೌಡ ಅವರು ಹಲವು ದಿನಗಳಿಂದಲೂ ಜೆಡಿಎಸ್ ಜೊತೆ ಅಂತರ ಕಾಯ್ದುಕೊಂಡಿದ್ದಾರೆ. ಅವರು ಬಿಜೆಪಿ ಸೇರುತ್ತಾರೆ ಎಂಬ ವದಂತಿ ಈ ಹಿಂದೆ ಹರಡಿತ್ತು, ಆದರೆ ಅದಾಗಿರಲಿಲ್ಲ, ಈಗ ಹುಣಸೂರು ಕ್ಷೇತ್ರ ಉಪಚುನಾವಣೆಗೆ ತಮ್ಮ ಮಗನಿಗೆ ಬಿಜೆಪಿಯಿಂದ ಟಿಕೆಟ್ ಕೊಡಿಸುವ ಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ.