ಎಚ್ಡಿಕೆ ಲೆಕ್ಕಾಚಾರದಂತೇ ಸಾಗುತ್ತಿರುವ ಜಿ.ಟಿ.ದೇವೇಗೌಡ ರಾಜಕೀಯ ಹೆಜ್ಜೆ!
ಮೈಸೂರು, ನ 9: ಇತ್ತೀಚೆಗೆ ತಮ್ಮ ಪಕ್ಷದ ಕಚೇರಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, "ನಿಮಗೆಲ್ಲಾ ಇದು ಸುದ್ದಿ, ನನಗಿದು ಸುದ್ದಿಯಲ್ಲ. ಯಾರು ಪಕ್ಷ ಬಿಡಲು ಮುಂದಾಗಿದ್ದಾರೋ ಆ ವಿಚಾರ ನನಗೆ ಎರಡು ವರ್ಷದ ಹಿಂದೆಯೇ ಗೊತ್ತಿದೆ"ಎಂದು ಹೇಳಿದ್ದರು.
ಸಾಲುಸಾಲು ಜೆಡಿಎಸ್ ಶಾಸಕರು ಪಕ್ಷ ಬಿಡಲು ಮುಂದಾಗಿರುವುದನ್ನು ಉಲ್ಲೇಖಿಸಿ ಕುಮಾರಸ್ವಾಮಿ ಈ ಮಾತನ್ನು ಹೇಳಿದ್ದರು. ಆ ಪಟ್ಟಿಯಲ್ಲಿ ಚಾಮುಂಡೇಶ್ವರಿಯ ಹಾಲೀ ಶಾಸಕ ಜಿ.ಟಿ.ದೇವೇಗೌಡ ಕೂಡಾ ಒಬ್ಬರು. ಇವರ ಮತ್ತು ಎಚ್ಡಿಕೆ ನಡುವಿನ ಸಂಬಂಧ ಅಷ್ಟಕಷ್ಟೇ ಎನ್ನುವುದು ಗೊತ್ತಿರುವ ವಿಚಾರ.
ಎಚ್ಡಿಕೆ ಸಮಯಾಧಾರಿತ ರಾಜಕಾರಣಕ್ಕೆ ಮತ್ತೊಂದು ವಿಕೆಟ್ ಪತನ?
ಆದರೂ, ಸ್ನೇಹಿತರಾಗಿರುವ ಜಿ.ಟಿ.ದೇವೇಗೌಡ ಅವರ ಪುತ್ರ ಹರೀಶ್ ಗೌಡ ಮತ್ತು ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿ, ಇತ್ತೀಚೆಗೆ ಚಾಮುಂಡೇಶ್ವರಿ ದೇವಾಲಯದಲ್ಲಿ ಭೇಟಿಯಾಗಿದ್ದರು. ಜಿಟಿಡಿಯವರು ಜೆಡಿಎಸ್ ನಲ್ಲೇ ಉಳಿಯಲಿದ್ದಾರೆ ಎನ್ನುವ ಸುದ್ದಿ ಆ ವೇಳೆ ಬಲವಾಗಿ ಕೇಳಿ ಬರುತ್ತಿತ್ತು. ಆದರೆ, ಈಗ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳು ಬೇರೆಯದ್ದನ್ನೇ ಸಾರುತ್ತಿದೆ.
ಆದರೆ, ಕುಮಾರಸ್ವಾಮಿಯವರ ಲೆಕ್ಕಾಚಾರದಂತೆ, ಮಂಗಳವಾರ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಜೊತೆಗೆ, ಜಿಟಿಡಿ ಕಾಣಿಸಿಕೊಂಡಿದ್ದಾರೆ. ಆ ಮೂಲಕ, ಜೆಡಿಎಸ್ ನಲ್ಲಿ ಉಳಿಯುವುದು ದೂರದ ಮಾತು ಎನ್ನುವುದನ್ನು ಜಿಟಿಡಿ ಸಾಬೀತು ಮಾಡಿದಂತಿದೆ.
ನಿಖಿಲ್-ಹರೀಶ್ ಗೌಡ ಭೇಟಿ: ಜಿ.ಟಿ.ದೇವೇಗೌಡ ಸುತ್ತ ಮತ್ತೆ ಗುಸುಗುಸು ಸುದ್ದಿ
ಅಂಬೇಡ್ಕರ್ ಸಮುದಾಯ ಭವನದ ಉದ್ಘಾಟನೆಯ ವೇದಿಕೆಯಲ್ಲಿ ಸಿದ್ದರಾಮಯ್ಯ, ಜಿಟಿಡಿ
ಇಂದು (ನ 9) ಮೈಸೂರು ಹಿನಕಲ್ ನಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಸಮುದಾಯ ಭವನದ ಉದ್ಘಾಟನೆಯನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನೆರವೇರಿಸಿದ್ದರು. ಆ ಕಾರ್ಯರ್ಕಮದಲ್ಲಿ ಶ್ರೀ.ಜ್ಞಾನ ಪ್ರಕಾಶ ಸ್ವಾಮೀಜಿ, ಶಾಸಕರಾದ ಜಿ.ಟಿ.ದೇವೇಗೌಡ, ಮಂಜುನಾಥ ಮತ್ತಿತರರು ಭಾಗವಹಿಸಿದ್ದರು. ಸಿದ್ದರಾಮಯ್ಯ ಮತ್ತು ಜಿಟಿಡಿ ವೇದಿಕೆ ಹಂಚಿಕೊಂಡಿದ್ದು ಒಂದು ಕಡೆಯಾದರೆ, ಸಭೆಯಲ್ಲಿ ಜಿಟಿಡಿಯವರು ಸಿದ್ದರಾಮಯ್ಯನವರನ್ನು ಹಾಡಿ ಹೊಗಳಿದ್ದು ಇನ್ನೊಂದು ಕಡೆ.
ಕ್ಷೇತ್ರದ ವ್ಯಾಪ್ತಿಯಲ್ಲಿನ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಎಚ್.ಡಿ.ಕುಮಾರಸ್ವಾಮಿ
ಇದೇ ಕಳೆದ ವಾರ ಕ್ಷೇತ್ರದ ವ್ಯಾಪ್ತಿಯಲ್ಲಿನ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸಿದ್ದರು. ಆದರೆ, ಹಾಲೀ ಶಾಸಕ ಸ್ಥಾನ ಮುಗಿಯುವವರೆಗೆದಾರೂ ಜೆಡಿಎಸ್ ನಲ್ಲಿರುವ ಜಿ.ಟಿ.ದೇವೇಗೌಡ ಆ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. "ಕುಮಾರಸ್ವಾಮಿಯವರ ಕಾರ್ಯಕ್ರಮಕ್ಕೆ ನನಗೆ ಆಹ್ವಾನವಿರಲಿಲ್ಲ, ಆ ಧಾರ್ಮಿಕ ಕಾರ್ಯಕ್ರಮಕ್ಕೆ ನಾನೂ ಆರ್ಥಿಕ ಸಹಾಯವನ್ನು ಮಾಡಿದ್ದೆ, ಇದು ನನಗೆ ಬಹಳ ಬೇಸರ ತಂದಿದೆ"ಎಂದು ಜಿಟಿಡಿ ಹೇಳಿದ್ದರು.
ಸಿದ್ದರಾಮಯ್ಯನವರಿಗೆ ದಲಿತರ ಮೇಲೆ ಬಹಳ ಕಾಳಜಿ
ಇಂದಿನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ,"ಹಲವು ಕಾರ್ಯಕ್ರಮಗಳ ಒತ್ತಡದ ನಡುವೆಯೂ ಸಿದ್ದರಾಮಯ್ಯನವರು ನಮ್ಮ ಮೇಲಿನ ಪ್ರೀತಿಯಿಂದ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಸಿದ್ದರಾಮಯ್ಯನವರಿಗೆ ದಲಿತರ ಮೇಲೆ ಎಷ್ಟು ಕಾಳಜಿಯಿದೆ ಎನ್ನುವುದನ್ನು ನಾನು ನಿಮಗೆ ಬಿಡಿಸಿ ಹೇಳಬೇಕಾಗಿಲ್ಲ, ಯಾಕೆಂದರೆ ಅವರು ಜಾರಿಗೆ ತಂದ ಕಾರ್ಯಕ್ರಮಗಳೇ ಇದಕ್ಕೆ ಸಾಕ್ಷಿ. ಅಂಬೇಡ್ಕರ್ ಅವರ ಪುಸ್ತಕಗಳನ್ನು ಓದಿ, ಯುವಕರು ವಿದ್ಯಾವಂತರಾಗಿ ಬೆಳೆಯಿರಿ" ಎಂದು ಜಿ.ಟಿ.ದೇವೇಗೌಡ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಎಚ್ಡಿಕೆ ಲೆಕ್ಕಾಚಾರದಂತೇ ಸಾಗುತ್ತಿರುವ ಜಿ.ಟಿ.ದೇವೇಗೌಡ
ಸಿದ್ದರಾಮಯ್ಯ ಮತ್ತು ಜಿ.ಟಿ.ದೇವೇಗೌಡ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ, ಜಿಟಿಡಿ ಅವರು ಜೆಡಿಎಸ್ ನಲ್ಲೇ ಮುಂದುವರಿಯಬಹುದು ಎನ್ನುವ ಲೆಕ್ಕಾಚಾರಕ್ಕೆ ಮತ್ತೆ ಬ್ರೇಕ್ ಬಿದ್ದಿದೆ. ನಿಖಿಲ್ ಮತ್ತು ಹರೀಶ್ ಭೇಟಿಯ ನಂತರ, ಮಕ್ಕಳ ಮಾತನ್ನೂ ಕೆಲವೊಮ್ಮೆ ಕೇಳಬೇಕಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಟಿಡಿ, ಕುಮಾರಸ್ವಾಮಿ ಹೇಳಿದಂತೆ ನಾನು ಕೇಳುವುದಕ್ಕೆ ಸಾಧ್ಯವೇ ಎಂದು ಹೇಳಿದ್ದರು. ಜಿಟಿಡಿ ಪಕ್ಷ ತೊರೆಯುವುದು ಕುಮಾರಸ್ವಾಮಿ ಲೆಕ್ಕಾಚಾರದಂತೆಯೇ ಸಾಗುತ್ತಿದೆ.
Recommended Video