ಜೆಡಿಎಸ್ ಪಕ್ಷ ನಿಷ್ಠರ ಸಭೆಗೆ ನನಗೆ ಆಹ್ವಾನ ಬಂದಿಲ್ಲ, ಆದರೂ ಹೋಗುತ್ತೇನೆ
ಮೈಸೂರು, ಜ 4: "ಜೆಡಿಎಸ್ ಕರೆದಿರುವ ಪಕ್ಷದ ನಿಷ್ಟಾವಂತರ ಸಭೆಗೆ ನನಗೆ ಆಹ್ವಾನ ಬಂದಿಲ್ಲ. ಆದರೂ, ಬಿಡುವಿದ್ದರೆ ಖಂಡಿತ ಸಭೆಯಲ್ಲಿ ಪಾಲ್ಗೊಳ್ಳಲಿದ್ದೇನೆ" ಎಂದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ.
ಜೆಡಿಎಸ್ ನಲ್ಲಿದ್ದರೂ ಸಕ್ರಿಯವಾಗಿ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸದ ಜಿಟಿಡಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೊತೆ ಅಂತರವನ್ನು ಕಾಯ್ದುಕೊಂಡು ಬಂದಿದ್ದಾರೆ. ಆದರೂ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜಿಟಿಡಿಯವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದರು.
NDA ಮೈತ್ರಿಕೂಟಕ್ಕೆ ಜೆಡಿಎಸ್, ಕೇಂದ್ರ ಕ್ಯಾಬಿನೆಟ್ ಸಚಿವರಾಗಿ ಕುಮಾರಸ್ವಾಮಿ? ಸ್ಪಷ್ಟನೆ
ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಜಿಟಿಡಿ,"ಇದೇ ಬರುವ ಏಳನೇ ತಾರೀಕಿನಿಂದ ಜೆಡಿಎಸ್ ನಿಷ್ಟಾವಂತರ ಸಭೆಯನ್ನು ಕರೆಯಲಾಗಿದೆ. ಪಕ್ಷದಿಂದಾಗಲಿ ಅಥವಾ ದೇವೇಗೌಡರಿಂದಾಗಲಿ ನನಗೆ ಆಹ್ವಾನ ಬಂದಿಲ್ಲ"ಎಂದು ಹೇಳಿದ್ದಾರೆ.
"ನನಗೆ ನನ್ನ ಕ್ಷೇತ್ರ ಮತ್ತು ಕ್ಷೇತ್ರದ ಅಭಿವೃದ್ದಿ ಮುಖ್ಯ. ಆದರೂ, ನನಗೆ ಏಳನೇ ತಾರೀಕಿನಂದು ಬಿಡುವಿದ್ದಲ್ಲಿ, ನಾನು ಆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇನೆ"ಎಂದು ಜಿ.ಟಿ.ದೇವೇಗೌಡ ಹೇಳಿದ್ದಾರೆ.
"ಕಾಲಕ್ಕೆ ತಕ್ಕಂತೆ ಬದಲಾವಣೆಗಳು ನಡೆಯುತ್ತಿರುತ್ತವೆ, ಅದೇ ರೀತಿ ಜೆಡಿಎಸ್ ನಲ್ಲೂ ಬದಲಾವಣೆಯಾಗುತ್ತಿದೆ. ಈ ವರ್ಷ ನನ್ನಲ್ಲಿ ಏನೂ ಬದಲಾವಣೆಯಾಗುವುದಿಲ್ಲ. 2023ರಲ್ಲಿ ಬದಲಾವಣೆ ಆದರೂ ಆಗಬಹುದು"ಎಂದು ಜಿಟಿಡಿ ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇತ್ತೀಚೆಗೆ ಜಿ.ಟಿ.ದೇವೇಗೌಡರನ್ನು ಭೇಟಿಯಾಗಿದ್ದರು. ಮುಂದಿನ ಅಸೆಂಬ್ಲಿ ಚುನಾವಣೆಯ ವೇಳೆ, ಮೈಸೂರು ಭಾಗದಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ ಎಂದೇ ಈ ಇಬ್ಬರು ನಾಯಕರ ಭೇಟಿಯನ್ನು ವ್ಯಾಖ್ಯಾನಿಸಲಾಗಿತ್ತು.