ಜಿ.ಟಿ. ದೇವೇಗೌಡ ವಿರುದ್ಧ ವಾಗ್ದಾಳಿ ನಡೆಸಿದ ಜೆಡಿಎಸ್ ನಾಯಕರು
ಮೈಸೂರು, ಡಿಸೆಂಬರ್ 4: ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ನಡೆದ ಜೆಡಿಎಸ್ ಪ್ರಚಾರ ಸಭೆ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ, ವಿರುದ್ಧ ಗದಾ ಪ್ರಹಾರಕ್ಕೆ ವೇದಿಕೆಯಾಯಿತು.
ಮೈಸೂರು-ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಿ.ಎನ್. ಮಂಜೇಗೌಡ ಪರ ಮತಯಾಚನೆ ಹಿನ್ನೆಲೆ ಮೈಸೂರಿನ ವಿಜಯನಗರದ ಕೊಡವ ಸಮಾಜದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಶನಿವಾರ ಪ್ರಚಾರ ಸಭೆ ಆಯೋಜಿಸಲಾಗಿತ್ತು. ಆದರೆ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಕುಮಾರಸ್ವಾಮಿ ಹಾಗೂ ಕೆ.ಆರ್. ನಗರ ಶಾಸಕ ಸಾ.ರಾ.ಮಹೇಶ್, ಮೈಮುಲ್ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ, ತಮ್ಮದೇ ಪಕ್ಷದ ಶಾಸಕ ಜಿ.ಟಿ.ದೇವೇಗೌಡ ವಿರುದ್ಧ ವಾಗ್ದಾಳಿ ನಡೆಸಿದರು.
ಸಮಾವೇಶದಲ್ಲಿ ಮೊದಲಿಗೆ ಮಾತನಾಡಿದ ಮೈಮುಲ್ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ, 'ಜಿ.ಟಿ.ದೇವೇಗೌಡರೇ ಇದು ನಿಮ್ಮ ಕೊನೆಯ ಕಾಲ. ನಿಮ್ಮ ದುಡ್ಡು, ಧಮ್ಕಿ ರಾಜಕಾರಣ ಇನ್ಮುಂದೆ ನಡೆಯಲ್ಲ ಎಂದು ಆಕ್ರೋಶ ಹೊರ ಹಾಕಿದರು. ವಿಧಾನ ಪರಿಷತ್ತು ಚುನಾವಣೆ ಬಂದಿದೆ. ಚಾಮುಂಡೇಶ್ವರಿ ಕ್ಷೇತ್ರದ ಸಭೆ ಕರೆದಿದ್ದೇವೆ, ನಾವು ಗ್ರಾ.ಪಂ ಸದಸ್ಯರನ್ನು ಆಹ್ವಾನಿಸಿದರೆ ಹಿಂದಿನಿಂದ ಬಂದು ಬೆದರಿಕೆ ಹಾಕಿದ್ದು, ಯಾವುದೇ ಕಾರಣಕ್ಕೂ ಜೆಡಿಎಸ್ ಸಭೆಗೆ ಹೋಗಬಾರದು ಅಂತ ಧಮ್ಕಿ ಹಾಕಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ವೋಟ್ ಹಾಕಿ ಅಂತ ಜಿ.ಟಿ.ದೇವೇಗೌಡರೇ ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀವು ಬಿಜೆಪಿಗೆ ಹೋಗಿ ಸೋತಿದ್ರಿ. ಮರಳಿ ಮನೆಗೆ ಅಂತ ಜೆಡಿಎಸ್ಗೆ ಬಂದಿದ್ದೀರಿ. ಕುಮಾರಸ್ವಾಮಿ ಹುಷಾರಿಲ್ಲದೆ ಇದ್ದರೂ ರೂಟ್ ಮ್ಯಾಪ್ ಹಾಕಿಕೊಂಡು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದರು. ಅದೆಲ್ಲವನ್ನೂ ಯಾರೂ ಮರೆಯಬಾರದು. ಜೆಡಿಎಸ್ ನಂಬಿದ ಯಾರೂ ಕೆಟ್ಟಿಲ್ಲ ಎಂದು ಜಿಟಿಡಿ ವಿರುದ್ಧ ವಾಗ್ದಾಳಿ ನಡೆಸಿದರು.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ಯಾವುದೇ ಫಲಾಪೇಕ್ಷೆ ಇಲ್ಲದೆ ಕಾರ್ಯಕರ್ತರು ಜೆಡಿಎಸ್ ಕಾಪಾಡಿಕೊಂಡು ಬಂದಿದ್ದಾರೆ.ಎಲ್ಲಾ ಸಮಾಜದವರು ನನ್ನನ್ನ ಪ್ರೀತಿಯಿಂದ ಕಂಡಿದ್ದೀರಿ. 2006ರಿಂದಲೂ ನಾಯಕ ಸಮಾಜ ಅವರ ಮಗನಂತೆ ಕಾಣುತ್ತಿದೆ. ಇವತ್ತಿನ ಸಭೆಗೆ ಹೋಗದಂತೆ ಜಿಟಿಡಿ ಧಮಕಿ ಹಾಕಿದ್ದಾರಂತೆ. ಚಾಮುಂಡೇಶ್ವರಿ ಕಾರ್ಯಕರ್ತರು ಧಮಕಿ ಹೆದರಲ್ಲ. ಹಲವಾರಿ ಬಾರಿ ಇದನ್ನ ಸಾಬೀತು ಮಾಡಿದ್ದಾರೆ. ನಮ್ಮನ್ನ ಬಿಜೆಪಿಯ ಬಿ ಟೀಂ ಎಂದವರೆ ನಮ್ಮ ಜೊತೆ ಬಂದು ಸರ್ಕಾರ ಮಾಡಿದರು. ಬಲವಂತವಾಗಿ ನೀವೆ ಸಿಎಂ ಆಗಿ ಎಂದು ನನ್ನ ತಲೆಗೆ ಕಟ್ಟಿದ್ರು. ಸರ್ಕಾರ ಮಾಡಿದ ಮೊದಲ ದಿನದಿಂದಲೇ ಯಾವ ರೀತಿ ನಡೆಸಿಕೊಂಡರು ಎಂಬುದು ಜನತೆಗೆ ಗೊತ್ತು. ರೈತರ ಸಾಲಮನ್ನಾ ಮಾಡಲು ಎಲ್ಲಾ ಕಿರುಕುಳವನ್ನು ಸಹಿಸಿಕೊಂಡೆ. ಸಾಲ ಮನ್ನಾದಂತ ಐತಿಹಾಸಿಕ ತೀರ್ಮಾನ ಕೈಗೊಂಡೆ ಎಂದು ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಹೇಳಿದರು.
ಶಾಕಸ ಸಾ.ರಾ. ಮಹೇಶ್ ಮಾತನಾಡಿ, ಬಿಜೆಪಿ ಅಭ್ಯರ್ಥಿ ಕೈಗಾರಿಕೋದ್ಯಮಿ, ಶಿಕ್ಷಣ ಸಂಸ್ಥೆಯವರಾದರೆ ಕಾಂಗ್ರೆಸ್ ಅಭ್ಯರ್ಥಿ ಸರ್ಕಾರಿ ಕೆಲಸದಿಂದ ನಿವೃತ್ತಿಯಾಗಿ ಬಂದವರು. ಹೀಗಾಗಿ ಅವರಿಬ್ಬರಿಗೂ ಗ್ರಾಮ ಪಂಚಾಯಿತಿ ಸದಸ್ಯರ ಸಮಸ್ಯೆ ಗೊತ್ತಿಲ್ಲ. ಆದರೆ ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ ಗ್ರಾಮ ಪಂಚಾಯಿತಿ ಸದಸ್ಯ, ಅಧ್ಯಕ್ಷರಾಗಿ ಕೆಲಸ ಮಾಡಿದವರು. ಮಂಜೇಗೌಡರು 2013ರಲ್ಲಿ ಶಾಸಕರಾಗಬೇಕಿತ್ತು. ದೊಡ್ಡ ನಾಯಕರು ಬಂದರು ಅಂತ ಅವರಿಗೆ ಅವಕಾಶ ಕೊಡಲಿಲ್ಲ. ಸೈನಿಕರಾಗಿ, ಸಾರ್ವಜನಿಕ ಸೇವೆ ಮಾಡಿದ್ದಾರೆ ಎಂದರು.