ಜೆಡಿಎಸ್ ನವರೆಲ್ಲ ಕಾಂಗ್ರೆಸ್ ಗೆ ಮತ ಹಾಕಿ ಎಂದಿದ್ದೇಕೆ ಸಿದ್ದು?
ಮೈಸೂರು, ಡಿಸೆಂಬರ್.03: ವಿಧಾನಸಭಾ ಉಪ ಚುನಾವಣಾ ಮತದಾನಕ್ಕೆ ಇನ್ನೆರೆಡು ದಿನಗಳಷ್ಟೇ ಬಾಕಿ ಉಳಿದಿದೆ. ಮಿಂಚಿನ ಸಂಚಾರ ನಡಸಿರುವ ನಾಯಕರು ಎದುರಾಳಿ ಪಕ್ಷದ ವಿರುದ್ಧ ಗುಡುಗುತ್ತಿದ್ದಾರೆ. ಅದರಲ್ಲೂ ಕಾಂಗ್ರೆಸ್ ನ ಟಗರು ಹೋದಲ್ಲಿ ಬಂದಲ್ಲೆಲ್ಲ ಅನರ್ಹ ಶಾಸಕರನ್ನೇ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸುತ್ತಿದ್ದಾರೆ.
ಇಂದು ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅದ್ಧೂರಿ ಪ್ರಚಾರ ಮಾಡಿದರು. ಹುಣಸೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಪರ ಮತಬೇಟೆ ನಡೆಸಿದರು. ಇದೇ ವೇಳೆ ಬಿಜೆಪಿ ಅಷ್ಟೇ ಅಲ್ಲ, ಜೆಡಿಎಸ್ ವಿರುದ್ಧವೂ ಸಿದ್ದು ಗುಡುಗಿದರು.
ಮುಂಬೈ ದುಡ್ಡು, ಕಾಂಗ್ರೆಸ್ಗೆ ವೋಟು: ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ
ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ವಿರುದ್ಧ ಮಾಜಿ ಮುಖ್ಯಮಂತ್ರಿ ಕೆರಳಿ ಕೆಂಡವಾಗಿದ್ದರು. ಪೂರ್ವದಲ್ಲಿ ಸೂರ್ಯ ಹುಟ್ಟುವುದೆಷ್ಟು ಸತ್ಯವೋ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಗೆಲ್ಲುವುದು ಕೂಡಾ ಅಷ್ಟೇ ಸತ್ಯ ಎಂದು ಸಿದ್ದರಾಮಯ್ಯ ಅಬ್ಬರಿಸಿದರು.
ಹುಣಸೂರು ಕ್ಷೇತ್ರದ ಜನರಿಗೆ ಅನ್ಯಾಯ ಮಾಡಿರುವ ಹೆಚ್.ವಿಶ್ವನಾಥ್ ವಿರುದ್ಧ ನಿಮಗೆ ಕೋಪವಿದೆ. ಹುಣಸೂರು ಅಷ್ಟೇ ಅಲ್ಲ, 15 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳಾಗಿರುವ ಅನರ್ಹ ಶಾಸಕರ ಮೇಲೆ ಜನರು ಮುನಿಸಿಕೊಂಡಿದ್ದಾರೆ. ಅವರಿಗೆ ನೀವ್ಯಾರೂ ಮತ ಹಾಕಲೇಬೇಡಿ. ಏಕೆಂದರೆ ಈ ಬಾರಿ ಹುಣಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಗೆಲ್ಲುವುದು ನಿಶ್ಚಿತ ಎಂದು ಸಿದ್ದರಾಮಯ್ಯ ಹೇಳಿದರು.
ಜೆಡಿಎಸ್ ನಾಯಕರಿಗೆ ಇದೆಂಥಾ ಸಲಹೆ?
ಇನ್ನು, ಪ್ರಚಾರದ ಅಖಾಡದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಷ್ಟಕ್ಕೆ ಸುಮ್ಮನಾಗಲಿಲ್ಲ. ಹುಣಸೂರಿನಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿಯಲ್ಲ, ಜೆಡಿಎಸ್ ಅಭ್ಯರ್ಥಿಯೂ ಗೆಲ್ಲುವುದಿಲ್ಲ. ಸುಮ್ಮನೆ ಜೆಡಿಎಸ್ ನವರೆಲ್ಲ ಸೇರಿಕೊಂಡು ಕಾಂಗ್ರೆಸ್ ಗೆ ಮತ ನೀಡಿ ಎಂದು ಸಲಹೆ ನೀಡಿದರು.