ಮೈಸೂರು ಜೆಡಿಎಸ್ ಸಭೆಯಲ್ಲಿ ಮೋದಿಗೆ ಜೈಕಾರ: ಮುಂದೇನಾಯ್ತು?
ಮೈಸೂರು, ಏಪ್ರಿಲ್ 5:ಮೈಸೂರು ಜೆಡಿಎಸ್ ಮುಖಂಡರ ಸಭೆಯಲ್ಲಿ ನಾಯಕರ ಎದುರಿಗೆ ಪ್ರಧಾನಿ ನರೇಂದ್ರ ಮೋದಿಗೆ ಕಾರ್ಯಕರ್ತರು ಜೈಕಾರ ಹಾಕಿದ ಘಟನೆ ನಡೆದಿದೆ. ಅಲ್ಲದೇ ಸಭೆಯಲ್ಲಿ ಭಾರೀ ಗಲಾಟೆ ನಡೆದಿದ್ದು, ಮೈತ್ರಿಯಲ್ಲಿನ ಭಾರೀ ಅಸಮಾಧಾನ ಜಗಜ್ಜಾಹೀರಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಸಚಿವ ಜಿ.ಟಿ.ದೇವೇಗೌಡ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ಕಾರ್ಯಕರ್ತರ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಕಳೆದ ಹತ್ತು ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯು ಇಂದಿಗೂ ಸಾಕಷ್ಟು ಬದಲಾವಣೆಯನ್ನು ತಂದಿದೆ. ಆಗ ನೀವೆಲ್ಲರೂ ಜೆಡಿಎಸ್ ಅಭ್ಯರ್ಥಿಗಳ ಪರ ಕೆಲಸ ಮಾಡಿದ್ದೀರಿ. ಸಾಕಷ್ಟು ನೋವು ಅನುಭವಿಸಿದ್ದೀರಿ. ಈಗ ಲೋಕಸಭಾ ಚುನಾವಣೆಗೆ ಒಪ್ಪಂದವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಿರಿ ಎಂದು ಮನವಿ ಮಾಡಿದರು.
'ರಸ್ತೆಯಂಚಲ್ಲಿ ನಿಂತು ಮೋದಿ ಎಂದು ಕೂಗಿದ ಮಾತ್ರಕ್ಕೆ ಪ್ರಧಾನಿಯಾಗಲ್ಲ'
ಇದರಿಂದ ಕುಪಿತಗೊಂಡ ಕಾರ್ಯಕರ್ತರು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಪರ ಕೆಲಸ ಮಾಡಿ ಪೊಲೀಸ್ ಠಾಣೆ ಕೋರ್ಟ್ ಮೆಟ್ಟಿಲು ಹತ್ತಿದ್ದೇವೆ. ಈಗ ನೀವು ನಾಯಕರು ಒಪ್ಪಂದ ಮಾಡಿಕೊಂಡು ಬಂದರೆ ನಾವೀಗ ಕೆಲಸ ಮಾಡಬೇಕೆ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದರು. ಅಲ್ಲದೇ, ನರೇಂದ್ರ ಮೋದಿಗೆ ಜೈಕಾರ ಹಾಕುವ ಮೂಲಕ ಗದ್ದಲ ಹೆಚ್ಚಿಸುವಂತೆ ಮಾಡಿದರು. ಅಲ್ಲದೇ ಸಚಿವ ಜಿಟಿಡಿ ಅವರ ಎದುರೇ ನೂರಾರು ಜೆಡಿಎಸ್ ಕಾರ್ಯಕರ್ತರು ನಾವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿಜಯಶಂಕರ್ ಅವರನ್ನು ಬೆಂಬಲಿಸುವುದಿಲ್ಲ ಎಂದಿದ್ದಾರೆ.
ಇದಾದ ಬಳಿಕ ಜಿ.ಟಿ. ದೇವೇಗೌಡ ಅವರು ಕಾರ್ಯಕರ್ತರ ಬಳಿ ಬಂದು ಸಮಾಧಾನಪಡಿಸಿದರು. ನಂತರ ಜೆಡಿಎಸ್ ಪಕ್ಷಕ್ಕೆ ಜೈ ಎಂದು ಹೇಳಿಸುವ ಮೂಲಕ ಅಸಮಾಧಾನವನ್ನು ತಹಬದಿಗೆ ತಂದರು. ಇದೇ ವೇಳೆ ಮಾತನಾಡಿದ ಸಚಿವ ಜಿ.ಟಿ ದೇವೇಗೌಡ, ಮೈಸೂರು-ಕೊಡಗು ಲೋಕಸಭೆಯಲ್ಲಿ ಮೈತ್ರಿ ಅಭ್ಯರ್ಥಿ ಸೋತರೆ ನಾನಾಗಲಿ ಅಥವಾ ಸಾ.ರಾ ಮಹೇಶ್ ಆಗಲಿ ಹೊಣೆಗಾರರಲ್ಲ. ವಿಶ್ವನಾಥ್ ಅವರು ಸೋತಾಗ ಸಿದ್ದರಾಮಯ್ಯ ಅವರು ಹೊಣೆ ಹೊತ್ತಿದ್ರಾ? ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರವಲ್ಲ. ಬೇರೆ ಕ್ಷೇತ್ರದಲ್ಲೂ ಅಸಮಾಧಾನವಿದೆ ಎಂದು ಹೇಳಿದರು.
ಮಂಡ್ಯ, ಮೈಸೂರು, ಹಾಸನ, ತುಮಕೂರು: ಈಗಿನ ರಾಜಕೀಯ ಚಿತ್ರಣ ಹೇಗಿದೆ?
ಮೈತ್ರಿ ಅಭ್ಯರ್ಥಿ ಬೆಂಬಲಿಸುವುದು ನಮ್ಮ ಕರ್ತವ್ಯ. ಅದನ್ನು ನಾವು ಪ್ರಾಮಾಣಿಕವಾಗಿ ಮಾತನಾಡುತ್ತೇವೆ ಎಂದ ಜಿಟಿಡಿ ಹಳೆಯದನ್ನು ಮರೆತು ವರಿಷ್ಠರು ಹೇಳಿದಂತೆ ಮಾಡಬೇಕಿದೆ ಎಂದು ಕಾರ್ಯಕರ್ತರಿಗೆ ತಿಳಿಸಿದರು.
ಜೆಡಿಎಸ್ ಮುಖಂಡರ ಅಸಮಾಧಾನ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಸಚಿವ ಜಿ.ಟಿ.ದೇವೇಗೌಡರ ಜತೆ ಮಾತುಕತೆ ನಡೆಸಿ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಿ ಗೆಲ್ಲಿಸುವಂತೆ ಮನವಿ ಮಾಡಿದ್ದರು. ಸಿದ್ದರಾಮಯ್ಯ ಅವರ ಮಾತಿಗೆ ಸಚಿವ ಜಿ.ಟಿ ದೇವೇಗೌಡ ಒಪ್ಪಿಗೆ ಸಹ ನೀಡಿದ್ದರು.ಈ ಹಿನ್ನೆಲೆಯಲ್ಲಿ ಸಭೆ ನಡೆದಿದೆ.