ಕೈ-ತೆನೆ ಪಾಳಯದಿಂದ ಮೈಸೂರು ಲೋಕಸಭಾ ಅಭ್ಯರ್ಥಿಯಾಗಿ ವಿಜಯಶಂಕರ್?
ಮೈಸೂರು, ಫೆಬ್ರವರಿ 5: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವನ್ನು ಶತಾಯಗತಾಯ ಪಡೆಯಲೇಬೇಕೆಂಬ ನಿರ್ಧಾರದಿಂದ ಮುಂದಡಿ ಇಟ್ಟಿರುವ ಜೆಡಿಎಸ್ ಇದೀಗ ರಾಗ ಬದಲಾಯಿಸಿದಂತೆ ಕಾಣುತ್ತಿದೆ. ತೆನೆ ಪಾಳಯ ಕಾಂಗ್ರೆಸ್ ಅಭ್ಯರ್ಥಿ ಪಡೆದುಕೊಳ್ಳುವ ಹಂತ ತಲುಪಿದೆ.
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರಕ್ಕೆ ಕೈ ಮತ್ತು ತೆನೆ ಪಕ್ಷಗಳ ನಡುವೆ ಜಟಾಪಟಿ ನಡೆಯುತ್ತಿರುವ ಹಿನ್ನೆಲೆ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ವಿಜಯಶಂಕರ್ ಅಭ್ಯರ್ಥಿಯಾಗುತ್ತಾರೆ ಎನ್ನುವ ಅಚ್ಚರಿ ಹೇಳಿಕೆಯನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ವಿಶ್ವನಾಥ್ ಪ್ರಯೋಗಿಸಿರುವುದು ಕುತೂಹಲ ಮೂಡಿಸಿದೆ.
ಅಲ್ಲದೇ ನಾನಾ ರೀತಿಯ ರಾಜಕೀಯ ಲೆಕ್ಕಾಚಾರಗಳು ಗರಿಗೆದರಿವೆ. ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್, ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮೈತ್ರಿ ಪಕ್ಷದಿಂದ ವಿಜಯಶಂಕರ್ ಅವರು ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆಗೆ ದೇವೇಗೌಡರ ಸ್ಪರ್ಧೆ ಬಗ್ಗೆ ಜಿಟಿಡಿ ಪ್ರತಿಕ್ರಿಯೆ
ಮಂಡ್ಯ ಹಾಗೂ ಮೈಸೂರು ಲೋಕಸಭಾ ಕ್ಷೇತ್ರವನ್ನು ಪಡೆದೇ ತೀರುತ್ತೇವೆ ಎಂದು ಈ ಹಿಂದೆ ಜೆಡಿಎಸ್ ಮುಂದಾಗಿತ್ತು. ಮೈಸೂರು ಹಾಗೂ ಕೊಡಗಿನಲ್ಲಿ ಜೆಡಿಎಸ್ ಉಸ್ತುವಾರಿ ಸಚಿವರಿದ್ದು ಚಾಮುಂಡೇಶ್ವರಿ, ಪಿರಿಯಾಪಟ್ಟಣ, ಹುಣಸೂರು ವಿಧಾನಸಭಾ ಕ್ಷೇತ್ರವನ್ನು ಗೆದ್ದಿರುವ ಹಿನ್ನೆಲೆಯಲ್ಲಿ ಲೋಕಸಭಾ ಕ್ಷೇತ್ರದ ಮೇಲೆ ಈ ಹಿಂದೆ ಜೆಡಿಎಸ್ ಕಣ್ಣು ಹಾಕಿತ್ತು. ಆದರೆ ಇದೀಗ ವಿಶ್ವನಾಥ್ ಹೇಳಿಕೆಯಿಂದ ಪಕ್ಷದ ಯೋಜನೆ ಬದಲಾದಂತೆ ಕಾಣುತ್ತಿದೆ.
ಜೆಡಿಎಸ್ ಗೆ ಪೂರಕ ವಾತಾವರಣವಿಲ್ಲ
ಈಗಾಗಲೇ ಹಾಸನ ಕ್ಷೇತ್ರವನ್ನು ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಡುವುದಾಗಿ ದೇವೇಗೌಡರು ಹೇಳಿದ್ದು, ಅಧಿಕೃತ ಪ್ರಕಟಣೆಯಷ್ಟೇ ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ದೇವೇಗೌಡರು ಮೈಸೂರು ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಲೆಕ್ಕಾಚಾರಗಳು ನಡೆದಿತ್ತು. ಆದರೆ ಕೊಡಗು ಜಿಲ್ಲೆಯಲ್ಲಿ ಜೆಡಿಎಸ್ ಗೆ ಪೂರಕ ವಾತಾವರಣ ಇಲ್ಲದ ಹಿನ್ನೆಲೆ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರಿನಲ್ಲಿ ಇನ್ನಷ್ಟು ವಿರೋಧ ಕಟ್ಟಿಕೊಂಡಿರುವುದು ಅಧಿಕಾರದಲ್ಲಿ ಕಷ್ಟ ಎಂಬ ಹಿನ್ನೆಲೆ ಈ ಪ್ರಯತ್ನ ಕೈಬಿಡಲಾಗಿದೆ.
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮಹಿಳೆಯರದ್ದೇ ಮೇಲುಗೈ
ನಿಖಿಲ್ ಸ್ಪರ್ಧೆಗೂ ಹಸಿರು ನಿಶಾನೆ ತೋರಿಸಿಲ್ಲ
ಅಕಸ್ಮಾತ್ ದೇವೇಗೌಡರು ಕ್ಷೇತ್ರದಲ್ಲಿ ನಿಂತರೂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಹಕಾರ ನೀಡುವ ಸಾಧ್ಯತೆಯೂ ಇಲ್ಲ. ಈ ಹಿನ್ನೆಲೆ ದೊಡ್ಡಗೌಡ್ರ ಸ್ಪರ್ಧೆ ಇಲ್ಲಿ ಕೈಬಿಟ್ಟು ಬಳಿಕ ನಿಖಿಲ್ ಕುಮಾರಸ್ವಾಮಿಯವರನ್ನು ಕಣಕ್ಕೆ ಇಳಿಸುವ ಪ್ರಯತ್ನ ನಡೆಯಿತು. ಸೀತಾರಾಮ ಕಲ್ಯಾಣ ಟೀಸರ್ ಬಿಡುಗಡೆ ಕಾರ್ಯಕ್ರಮ ಇದಕ್ಕಾಗಿ ಬಳಸಿಕೊಳ್ಳಲಾಯಿತು. ಅದೊಂದು ಪಕ್ಷದ ಕಾರ್ಯಕ್ರಮವಾಗಿ ಬದಲಾಗಿತ್ತು. ಇದೀಗ ಪರಿಸ್ಥಿತಿ ಬದಲಾಗಿದೆ. ಕೊಡಗಿನಲ್ಲಿ ಜೆಡಿಎಸ್ ಗೆ ಪೂರಕ ವಾತಾವರಣ ಇಲ್ಲ. ಈ ಹಿನ್ನೆಲೆ ನಿಖಿಲ್ ಸ್ಪರ್ಧೆಗೂ ಹಸಿರು ನಿಶಾನೆ ತೋರಿಸಿಲ್ಲ.
ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಚ್.ವಿಶ್ವನಾಥ್
ಇದೇ ವಿಶ್ವನಾಥ್ ಲೆಕ್ಕಾಚಾರ
ಮೊದಲ ಯತ್ನದಲ್ಲಿ ಯಶಸ್ವಿಯಾಗದಿದ್ದಲ್ಲಿ ನಿಖಿಲ್ ರಾಜಕೀಯ ಭವಿಷ್ಯ ಮರೆ ಮಾಚಬಹುದು ಎಂಬ ಪರಿಣಾಮ ನಿಖಿಲ್ ಬದಲಿಗೆ ವಿಜಯ್ ಶಂಕರ್ ಅವರನ್ನು ಪ್ರಯೋಗಿಸಲು ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಒಂದಾಗಿದ್ದಾರೆ ಎಂಬ ಸಂಶಯ ಮೂಡಿ ಬಂದಿದೆ.
ಕೊಡಗಿನಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದಾರೆ
ಮೈಸೂರು ಭಾಗದಲ್ಲಿ ಜೆಡಿಎಸ್ ಬಲಿಷ್ಠವಾಗಿದ್ದರೂ ಪ್ರತಿ ಚುನಾವಣೆಯಲ್ಲಿ ಕೊಡಗಿನ ಮತಗಳೇ ನಿರ್ಣಾಯಕ. ಈ ಹಿಂದೆ ಇದೇ ಕ್ಷೇತ್ರದಿಂದ ವಿಜಯಶಂಕರ್ ಸಂಸದರಾಗಿ ಆಯ್ಕೆಯಾಗಿದ್ದು, ಕೊಡಗಿನಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇದನ್ನು ಪ್ರಯೋಗಾತ್ಮಕವಾಗಿ ಬಳಸಿಕೊಳ್ಳಲು ತೆನೆ ಪಾಳೆಯ ರಣತಂತ್ರ ನಡೆಸಿದೆ ಎಂದರೆ ತಪ್ಪಿಲ್ಲ.