ರೈತ ಸಂಘದ ಸದ್ದಡಗಿಸಲು ಜೆಡಿಎಸ್ ತಂತ್ರ:ಬಡಗಲಪುರ ನಾಗೇಂದ್ರ ಆರೋಪ
ಮೈಸೂರು, ಫೆಬ್ರವರಿ 12:ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಯಲ್ಲಿ ಒಡಕು ಸೃಷ್ಟಿಸಲು ಜೆಡಿಎಸ್ ಪ್ರಯತ್ನಿಸುತ್ತಿದೆ ಎಂದು ಸಂಘಟನೆಯ ನೂತನ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೆ ಮೈಸೂರು ಭಾಗದಲ್ಲಿ ರೈತ ಸಂಘವೇ ಸರ್ಕಾರಕ್ಕೆ ಬಹು ದೊಡ್ಡ ವಿರೋಧಿಯಾಗಿದೆ. ಕೆಆರ್ ಎಸ್ನಲ್ಲಿ ಡಿಸ್ನಿಲ್ಯಾಂಡ್ ಮಾದರಿ ಉದ್ಯಾನ ಯೋಜನೆಗೂ ವಿರೋಧ ವ್ಯಕ್ತಪಡಿಸಿದ್ದೇವೆ. ಹೀಗಾಗಿ, ಸಂಘಟನೆಯಲ್ಲಿ ಗೊಂದಲ ಮೂಡಿಸಲು ಯತ್ನಿಸುತ್ತಿದೆ. ಇದರ ಸುಪಾರಿಯನ್ನು ಪಚ್ಚೆ ನಂಜುಂಡಸ್ವಾಮಿ ಅವರಿಗೆ ನೀಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.
ಶಾಸಕರಿಗೆ ಎಚ್ಚರಿಕೆ ನೀಡಿದ ಬಡಗಲಪುರ ನಾಗೇಂದ್ರ
ನಾನು ರಾಜ್ಯಾಧ್ಯಕ್ಷ ಆಗಿರೋದು 7 ತಿಂಗಳ ಅವಧಿಗೆ ಮಾತ್ರ. ಸಂವಿಧಾನ ಬದ್ಧವಾಗಿ ರಾಜ್ಯ ಕಾರ್ಯಕಾರಿ ಸಮಿತಿ ಸರ್ವಾನುಮತದಿಂದ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿದೆ. ಅಧ್ಯಕ್ಷರಾಗಿದ್ದ ಕೆ.ಟಿ ಗಂಗಾಧರ್, ಅನಾರೋಗ್ಯ ನಿಮಿತ್ತ ಅಧ್ಯಕ್ಷರಾಗಿ ಮುಂದುವರಿಯಲು ಸಾಧ್ಯವಿಲ್ಲವೆಂದು ಪತ್ರ ಬರೆದದ್ದರಿಂದ ರಾಜ್ಯ ಸಮಿತಿ ಈ ತಿರ್ಮಾನ ಕೈಗೊಂಡಿದೆ. ಆದ್ರೆ ಪಚ್ಚೆ ನಂಜುಂಡಸ್ವಾಮಿ, ಇಲ್ಲ ಸಲ್ಲದ ಆರೋಪ ಮಾಡಿ ಅಸಂವಿಧಾನಿಕ ಎಂದು ಹೇಳುತ್ತಿರುವುದು ಅವರಿಗೆ ತಿಳುವಳಿಕೆ ಇಲ್ಲ ಎಂಬುದನ್ನ ತೋರಿಸುತ್ತದೆ ಎಂದು ಹೇಳಿದರು.
ಸಂಘಟನೆ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಗಂಗಾಧರ್ ಅವರು ಸಮಿತಿ ತೀರ್ಮಾನವನ್ನು ಧಿಕ್ಕರಿಸಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜತೆ ಸಭೆ ನಡೆಸಿದರು. ಈಗ ಪಚ್ಚೆ ನಂಜುಂಡಸ್ವಾಮಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು.
ಈ ಬಜೆಟ್ ನಿಂದ ರೈತರು ಏನೂ ನಿರೀಕ್ಷಿಸಲು ಸಾಧ್ಯವಿಲ್ಲ:ಬಡಗಲಪುರ ನಾಗೇಂದ್ರ
ನ. 19ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನನ್ನ ಮೇಲೆ ಹಲ್ಲೆ ನಡೆಸಲು ಪಚ್ಚೆ ನಂಜುಂಡಸ್ವಾಮಿ ಯತ್ನಿಸಿದ್ದರು. ವಿಧಾನಸಭಾ ಚುನಾವಣೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಮಾಡಿ ಎಂದು ಒತ್ತಡ ಹೇರಿದ್ದರು. ನಂತರ, ಉಪಾಧ್ಯಕ್ಷ ಸ್ಥಾನ ಕೊಡದಿದ್ದರೆ ಕಾಂಗ್ರೆಸ್ ಸೇರುತ್ತೇನೆ ಎಂದು ಬೆದರಿಕೆ ಒಡ್ಡಿದ್ದರು ಎಂದು ಹೇಳಿದರು.
ಮಾತಿಗೆ ತಪ್ಪುವ ಮುಖ್ಯಮಂತ್ರಿಗಳು, ಕುಮಾರಸ್ವಾಮಿಗೆ ಮೊದಲ ಸ್ಥಾನ ಎಂದ ಬಡಗಲಪುರ ನಾಗೇಂದ್ರ
ನನ್ನನ್ನು ಸಂಘಟನೆಯಿಂದ ಉಚ್ಛಾಟಿಸುವ ಅವರ ಹೇಳಿಕೆ 'ಹುಚ್ಚಾಟ'ದಂತಿದೆ. ತಮ್ಮ ತಂದೆಯ ವಿಚಾರಗಳನ್ನು ಅವರು ನಿತ್ಯ ಕೊಲ್ಲುತ್ತಿದ್ದಾರೆ' ಎಂದು ನಾಗೇಂದ್ರ ಹರಿಹಾಯ್ದರು. ನನ್ನ ಆಸ್ತಿಯ ವಿವರಗಳನ್ನು ಈಗಾಗಲೇ ಆದಾಯ ತೆರಿಗೆ ಇಲಾಖೆ ಮುಂದೆ ಘೋಷಿಸಿಕೊಂಡಿದ್ದೇನೆ. ಸದ್ಯದಲ್ಲೇ ಪದಾಧಿಕಾರಿಗಳ ಸಭೆಯಲ್ಲೂ ಘೋಷಿಸುತ್ತೇನೆ ಎಂದರು.